ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲಿ ಬಾಲ್ಯದಿಂದ ಪ್ರತೀ ಹಂತದಲ್ಲಿ ಸ್ಫೂರ್ತಿ ಕೊಡುವ ಅನೇಕ ವ್ಯಕ್ತಿಗಳು ಇರುತ್ತಾರೆ. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಾನವ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬಹುದು. ನನ್ನ ಬದುಕಿನಲ್ಲಿ ನನಗೆ ಸ್ಫೂರ್ತಿ ಕೊಟ್ಟವರು ಶ್ರೀಮತಿ ಸುಧಾ ಮೂರ್ತಿಯವರು.
ಹೇಗೆಂದರೆ, ಅವರು ಆಗರ್ಭ ಶ್ರೀಮಂತರಾದರೂ, ವಿದ್ಯಾವಂತೆಯಾದರೂ ತಮ್ಮ ಜೀವನದಲ್ಲಿ ಸರಳತೆ ಮತ್ತು ವಿನಯವನ್ನು ಅಳವಡಿಸಿಕೊಂಡು ಬಂದಿರುತ್ತಾರೆ. ಅವರ ಈ ಸದ್ಗುಣಗಳನ್ನು ನಾನು ಒಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನೋಡಿದೆ. ಅಂದು ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದ ವಿದ್ವಾಂಸರಾದ ಎಮ್. ಬಾಲಮುರಳಿಕೃಷ್ಣ ಅವರಿಗೆ ಸನ್ಮಾನಿಸಬೇಕಿತ್ತು. ಶ್ರೀಮತಿ ಸುಧಾ ಮೂರ್ತಿಯವರು ಅವರಿಗೆ ಪ್ರಶಸ್ತಿಯನ್ನು ಕೊಟ್ಟು ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಕೋರಿದರು. ಅದನ್ನು ನೋಡಿದ ನನಗೆ ಅವರು ಸ್ಫೂರ್ತಿದಾಯಕರಾದರು.
ಯಾಕೆಂದರೆ ಅಷ್ಟು ದೊಡ್ಡದಾದ ಇನ್ಫೋಸಿಸ್ ನ ಒಡೆಯರಾದ ಶ್ರೀ ನಾರಾಯಣ ಮೂರ್ತಿಯವರ ಅರ್ಧಾಂಗಿನಿಯಾದರೂ ತಾನು ವಿದ್ಯಾವಂತೆ, ಶ್ರೀಮಂತೆ ಎನ್ನುವ ಅಹಂಕಾರವಿಲ್ಲದೆ ಆ ಮಹಾನ್ ಸಂಗೀತಗಾರನ ಆಶೀರ್ವಾದ ವನ್ನು ಪಡೆದಿದ್ದರು. 'ವಿದ್ಯಾ ವಿನಯಂ ದದಾತಿ ', ಅಂದರೆ ವಿದ್ಯೆಯು ವಿನಯವನ್ನು ಕೊಡುತ್ತದೆ ಎಂಬುದಕ್ಕೆ ಇವರೇ ನಿದರ್ಶನ. ಇದು ಮಾತ್ರವಲ್ಲದೆ ಇನ್ಫೋಸಿಸ್ ಫೌಂಡೇಶನ್ ಮೂಲಕ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ, ತಮ್ಮ ಜೀವನವನ್ನೇ ಉದಾಹರಣೆಯಾಗಿ ಇತರರಿಗೆ ಮಾದರಿಯಾಗಿ ಬದುಕುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಅವರೇ ನನಗೆ ಸ್ಫೂರ್ತಿ.
-ಸುಮಾ ಎಸ್ .ಪಟ್ವರ್ಧನ್
ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.