ಮಂಡ್ಯ: ಕಾಂಗ್ರೆಸ್ ಸೇರಲು ಸಿದ್ಧವಾಗಿದ್ದ ಬಿಜೆಪಿ ಮುಖಂಡ ಕೆ.ಸಿ.ನಾರಾಯಣಗೌಡ ಅವರನ್ನು ಎಚ್.ಡಿ.ಕುಮಾರಸ್ವಾಮಿ ಅವರೇ ಸ್ವತಃ ಮನವೊಲಿಸಿದ್ದಾರೆ. ಅವರು ಮಂಗಳವಾರ ರಾತ್ರಿ ನಾರಾಯಣಗೌಡರ ಮನೆಗೆ ಭೇಟಿ ನೀಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ‘ಹಳೇ ಸ್ನೇಹಿತರು ಒಂದಾಗಿದ್ದಾರೆ’ ಎಂಬ ಚರ್ಚೆ ನಡೆದಿದೆ.
ಜೆಡಿಎಸ್ ಜೊತೆಗಿನ ಮೈತ್ರಿಗೆ ವಿರೋಧಿಸಿದ್ದ ನಾರಾಯಣಗೌಡರು, ‘ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಬಾರದು. ನನಗೆ ಅಥವಾ ಸಂಸದೆ ಸುಮಲತಾ ಅವರಿಗೆ ಟಿಕೆಟ್ ಕೊಡಬೇಕು’ ಎಂದು ಒತ್ತಾಯಿಸಿದ್ದರು. ಆದರೆ, ಬಿಜೆಪಿಯು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿರುವುದರಿಂದ ಪಕ್ಷ ತ್ಯಜಿಸಲು ನಿರ್ಧರಿಸಿದ್ದರು. ಸೋಮವಾರವಷ್ಟೇ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು, ‘ನಾರಾಯಣಗೌಡರು ಶೀಘ್ರ ಕಾಂಗ್ರೆಸ್ ಸೇರುತ್ತಾರೆ’ ಎಂದು ಹೇಳಿದ್ದರು.
ಆದರೆ, ‘ಮಂಗಳವಾರ ಮಧ್ಯರಾತ್ರಿ ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಜೆಡಿಎಸ್ ಮುಖಂಡ ಸಿ.ಎಸ್.ಪುಟ್ಟರಾಜು ಹಾಗೂ ಬೆಂಬಲಿಗರ ಜೊತೆ ಕುಮಾರಸ್ವಾಮಿ ಬೆಂಗಳೂರಿನ ನಾರಾಯಣಗೌಡರ ಮನೆಗೆ ಭೇಟಿ ನೀಡಿದ್ದಾರೆ. ಪಕ್ಷ ತೊರೆಯದಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಕುಮಾರಸ್ವಾಮಿ ಮನೆಗೆ ಬಂದೊಡನೆ ನಾರಾಯಣಗೌಡರು ಅವರ ಕಾಲಿಗೆ ನಮಸ್ಕರಿಸಿ, ಶಾಲು ಹೊದಿಸಿ ಹೂಗುಚ್ಛ ನೀಡುವ ದೃಶಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.
‘ಮನೆಗೆ ಬಂದು ಬೆಂಬಲ ನೀಡುವಂತೆ ಕೋರಿದ್ದಾರೆ. ಕ್ಷೇತ್ರದ ಜನರ ಅಭಿಪ್ರಾಯ ಪಡೆದು ನಿರ್ಧಾರ ತಿಳಿಸುವುದಾಗಿ ಹೇಳಿದ್ದೇನೆ. ಅವರು ನಮ್ಮ ಮನೆಗೆ ಬಂದದ್ದು ಸಂತಸ ತಂದಿತು’ ಎಂದು ನಾರಾಯಣಗೌಡ ಹೇಳಿದರು.
ಜೆಡಿಎಸ್ನಲ್ಲೇ ಇದ್ದ ಕೆ.ಸಿ.ನಾರಾಯಣಗೌಡರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. 2019ರಲ್ಲಿ ನಡೆದ ಕೆ.ಆರ್.ಪೇಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.