ADVERTISEMENT

ಪುಸ್ತಕ ವಿಮರ್ಶೆ: ಕಲಾತ್ಮಕವಾಗಿ ಅರಳಿದ ತಾತ್ವಿಕ ವಿಚಾರಗಳು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 19:31 IST
Last Updated 13 ಫೆಬ್ರುವರಿ 2021, 19:31 IST
ಕಲಾತ್ಮಕವಾಗಿ ಅರಳಿದ ತಾತ್ವಿಕ ವಿಚಾರಗಳು
ಕಲಾತ್ಮಕವಾಗಿ ಅರಳಿದ ತಾತ್ವಿಕ ವಿಚಾರಗಳು   

ಅವನು ಹೆಣ್ಣಾಗಬೇಕು
ಲೇ:
ಕಾತ್ಯಾಯಿನಿ ಕುಂಜಿಬೆಟ್ಟು
ಪ್ರ: ನಿವೇದಿತಾ ಪಬ್ಲಿಕೇಷನ್ಸ್‌
ಮೊ: 98445 48610

***

ಕಾತ್ಯಾಯಿನಿ ಕುಂಜಿಬೆಟ್ಟು ಅವರ ಮೂರನೇ ಕವನ ಸಂಕಲನ ‘ಅವನು ಹೆಣ್ಣಾಗಬೇಕು’. ತಮ್ಮ ಅನುಭವಗಳನ್ನು ಹಿಡಿದಿಡಲು ಕಾವ್ಯ ಭಾಷೆಗಿರಬಹುದಾದ ತೀವ್ರತೆ, ಲಯಬದ್ಧತೆ, ಭಾವಪರಿಣಾಮ ಹಾಗೂ ಧ್ವನಿಗಳನ್ನು ಅವರು ಪರಿಣಾಮಕಾರಿಯಾಗಿ ಬಳಸುತ್ತಾರೆ. ತಾತ್ವಿಕತೆಯನ್ನು, ವೈಚಾರಿಕತೆಯನ್ನು ಕಾವ್ಯವು ಶಬ್ದ ಲಯದಲ್ಲಿ ಹೇಳುತ್ತದೆ ಎಂಬ ಮಾತಿನಂತೆ ಇಲ್ಲಿನ ಕವಿತೆಗಳಲ್ಲಿ ತಾತ್ವಿಕ ವಿಚಾರಗಳು ಕಲಾತ್ಮಕವಾಗಿ ಒಡಮೂಡುತ್ತವೆ. ಇಲ್ಲಿ ಬಳಸಿರುವ ಕಾವ್ಯಭಾಷೆಯು ಕಲ್ಪಕತೆಯನ್ನು ಮೂರ್ತಗೊಳಿಸುತ್ತದೆ. ಈ ಮೂರ್ತಗೊಳಿಸುವ ಕ್ರಿಯೆಯೇ ಇಲ್ಲಿನ ಕವಿತೆಗಳ ಶಕ್ತಿ.

ADVERTISEMENT

ಅವರ ಮೊದಲೆರಡು ಕವನ ಸಂಕಲನಗಳಲ್ಲೂ ಕಾವ್ಯ ಭಾಷೆಯನ್ನು ಅದರ ಎಲ್ಲಾ ಸಾಧ್ಯತೆಗಳೊಂದಿಗೆ ಬಳಸಿಕೊಂಡಿದ್ದರು. ಅನುಭಾವ, ಮಾನವೀಯ ಮೌಲ್ಯ, ಜೀವನದ ಸಂಕೀರ್ಣತೆ, ದೇಹ ಮತ್ತು ಮನಸ್ಸುಗಳ ಸಂಬಂಧದ ಸ್ವರೂಪ ಹಾಗೆಯೇ ಗಂಡು- ಹೆಣ್ಣುಗಳ ಸಂಬಂಧದ ಸ್ವರೂಪದ ನೆಲೆಗಳು ಇಲ್ಲಿ ಶೋಧಿತಗೊಂಡಿವೆ.

ಕೆ.ವಿ. ತಿರುಮಲೇಶ್ ಅವರು ಕಾತ್ಯಾಯಿನಿಯವರ ಇಲ್ಲಿನ ಕವಿತೆಗಳನ್ನು ಕುರಿತು ಹೇಳಿರುವ ಮಾತುಗಳು ಗಮನಾರ್ಹ. ‘ಕನ್ನಡ ಕವಿತೆ ಅರ್ಥದ ಅಪಮೌಲ್ಯದಿಂದ ಸೊರಗುತ್ತಿರುವ ಈ ಸಂದರ್ಭದಲ್ಲಿ ಹೊಸತೊಂದು ಕವನ ಸಂಕಲನ ನಮ್ಮ ಮನಸ್ಸನ್ನು ಹೇಗೆ ಥಟ್ಟನೆ ತಟ್ಟಬಲ್ಲದು ಎನ್ನುವುದಕ್ಕೆ ಇಲ್ಲಿದೆ ನಿದರ್ಶನ. ವಸ್ತು ವೈವಿಧ್ಯ, ಪದ ಸಂಪತ್ತು, ವಾಕ್ಯ ವೈಭವ, ವೈಚಾರಿಕ ಪ್ರಬುದ್ಧತೆ, ಮೂಲಭೂತವಾದ ಮುಗ್ಧತೆ, ಕಳಕಳಿ, ಸಾಮಾಜಿಕ ಔಚಿತ್ಯ ಎಲ್ಲವೂ ಕಾತ್ಯಾಯಿನಿಯವರ ಕವಿತೆಗಳಲ್ಲಿವೆ. ದ್ಯಾವಾ ಪೃಥವಿಯನ್ನವರು ಒಟ್ಟಿಗೇ ಕ್ರಮಿಸುತ್ತಾರೆ. ಜೀರುಂಡೆ ಮತ್ತು ನಕ್ಷತ್ರ ಒಟ್ಟಿಗೇ ಅವರ ದೃಷ್ಟಿ ಪರಿಧಿಯೊಳಗೆ ಬರುತ್ತವೆ.’ ಎಚ್.ಎಸ್.ಶಿವಪ್ರಕಾಶ್ ಅವರ ಮುನ್ನುಡಿ ಇಲ್ಲಿಯ ಕವನಗಳಿಗೆ ಉತ್ತಮ ಪ್ರವೇಶವನ್ನು ಒದಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.