ADVERTISEMENT

ಆರ್ಟ್‌ ಆಫ್‌ ಲಿವಿಂಗ್‌ಗೆ ₹5 ಕೋಟಿ ದಂಡ: ಆದೇಶಕ್ಕೆ ತಡೆ ನೀಡಲು ‘ಸುಪ್ರೀಂ’ ನಕಾರ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST
ವಿಶ್ವ ಸಾಂಸ್ಕೃತಿಕ ಉತ್ಸವದ ಸಂಗ್ರಹ ಚಿತ್ರ
ವಿಶ್ವ ಸಾಂಸ್ಕೃತಿಕ ಉತ್ಸವದ ಸಂಗ್ರಹ ಚಿತ್ರ   

ನವದೆಹಲಿ: ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯು 2016ರಲ್ಲಿ ವಿಶ್ವ ಸಾಂಸ್ಕೃತಿಕ ಉತ್ಸವ ನಡೆಸಿ ಯಮುನಾ ದಡಕ್ಕೆ ಹಾನಿ ಉಂಟು ಮಾಡಿದೆ ಎಂದು ರಾಷ್ಟ್ರೀಯ ಹಸಿರು ಪೀಠ ನೀಡಿದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಆದರೆ, ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಒಪ್ಪಿಕೊಂಡಿದೆ.

ಯಮುನಾ ತೀರದ ಪುನಶ್ಚೇತನ ಕ್ರಮಗಳಿಗಾಗಿ ಮಧ್ಯಂತರ ಪರಿಹಾರವಾಗಿ ₹5 ಕೋಟಿ ನೀಡುವಂತೆ ಆರ್ಟ್‌ ಆಫ್‌ ಲಿವಿಂಗ್‌ ಪ್ರತಿಷ್ಠಾನಕ್ಕೆ ಹಸಿರು ಪೀಠ ಆದೇಶಿಸಿತ್ತು.

ಆರ್ಟ್‌ ಆಫ್‌ ಲಿವಿಂಗ್‌ನ ಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಅವರು ಚೆನ್ನೈನಲ್ಲಿ ಆರಂಭಿಸಿರುವ ‘ವ್ಯಕ್ತಿ ವಿಕಾಸ ಕೇಂದ್ರ’ ಎಂಬ ಸಂಸ್ಥೆಯು ಹಸಿರು ಪೀಠದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದೆ. ನ್ಯಾಯಮೂರ್ತಿ ಮದನ್‌ ಬಿ.ಲೋಕೂರ್‌ ನೇತೃತ್ವದ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಆರ್ಟ್‌ ಆಫ್‌ ಲಿವಿಂಗ್‌ ವಿರುದ್ಧ ಮನೋಜ್‌ ಮಿಶ್ರಾ ಎಂಬವರು ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಈಗ ಮಿಶ್ರಾ ಅವರಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ.

ADVERTISEMENT

ಹಸಿರು ಪೀಠದ ಒಬ್ಬ ಸದಸ್ಯ ವಿಚಾರಣೆಯ ಆರಂಭದಿಂದಲೂ ಹಾಜರಿರಲಿಲ್ಲ. ಒಬ್ಬ ಸದಸ್ಯರ ಅನುಪಸ್ಥಿತಿಯಲ್ಲಿ ತೀರ್ಪು ಪ್ರಕಟಿಸುವುದು ಸರಿಯಲ್ಲ ಎಂದು ವ್ಯಕ್ತಿ ವಿಕಾಸ ಕೇಂದ್ರದ ಪರ ವಕೀಲ ಹರೀಶ್‌ ಸಾಳ್ವೆ ಮತ್ತು ಕಿಶನ್‌ ಕೌಲ್‌ ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.