ADVERTISEMENT

ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ಆ್ಯನಾ ಸಮರ

ಕುಮಟಾ: ಪರಿಸರ ಕಾಳಜಿ ಮೆರೆಯುತ್ತಿರುವ ಪೋರ್ಚುಗಲ್ ದೇಶದ ಮಹಿಳೆ

ಎಂ.ಜಿ.ನಾಯ್ಕ
Published 8 ಮಾರ್ಚ್ 2018, 9:57 IST
Last Updated 8 ಮಾರ್ಚ್ 2018, 9:57 IST
ಕುಮಟಾ ನ್ಯಾಯಾಲಯದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಪೂರ್ಣಿಮಾ ಪೈ ಅವರೊಂದಿಗೆ ಡಾ.ಆ್ಯನಾ ಚರ್ಚಿಸುತ್ತಿರುವುದು. (ಸಂಗ್ರಹ ಚಿತ್ರ).
ಕುಮಟಾ ನ್ಯಾಯಾಲಯದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಪೂರ್ಣಿಮಾ ಪೈ ಅವರೊಂದಿಗೆ ಡಾ.ಆ್ಯನಾ ಚರ್ಚಿಸುತ್ತಿರುವುದು. (ಸಂಗ್ರಹ ಚಿತ್ರ).   

ಕುಮಟಾ (ಉತ್ತರ ಕನ್ನಡ): ಪಟ್ಟಣದ ರಸ್ತೆ ಬದಿಯಲ್ಲಿ ಯಾರೇ ಪ್ಲಾಸ್ಟಿಕ್ ತ್ಯಾಜ್ಯ ಎಸೆದರೂ ಅಲ್ಲಿಗೆ ಸಣಕಲು ದೇಹದ ವಯಸ್ಸಾದ ವಿದೇಶಿ ಮಹಿಳೆ ಸ್ಕೂಟಿಯಲ್ಲಿ ಹಾಜರಾಗುತ್ತಾರೆ. ಬಿದ್ದ ತ್ಯಾಜ್ಯವನ್ನು ಎತ್ತಿ ಸಮೀಪದ ಕಸದಬುಟ್ಟಿಗೆ ಹಾಕುತ್ತಾರೆ. ಸ್ವಚ್ಛತೆ ಕುರಿತು ಕ್ರಮವಹಿಸದಿರುವ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತಾರೆ...

ಆಯುರ್ವೇದ ಅಧ್ಯಯನಕ್ಕಾಗಿ ಭಾರತಕ್ಕೆ ಬಂದು ಇಲ್ಲಿಯ ಪರಿಸರವನ್ನು ಕೈಲಾದ ಮಟ್ಟಿಗೆ ಉಳಿಸುವ ಕನಸು ಕಂಡ ಪರಿಸರ ಪ್ರೇಮಿ ಪೋರ್ಚುಗಲ್ ದೇಶದ ಡಾ.ಆ್ಯನಾ ಅವರ ಕಾಳಜಿ ಇದು.

ಪೋರ್ಚುಗಲ್‌ನ ಚಾಮ್ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪಡೆದ ಆ್ಯನಾ, ಅಲ್ಲಿಯೇ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದರು. ನಿವೃತ್ತಿ ನಂತರ ಆಯುರ್ವೇದ ಅಧ್ಯಯನಕ್ಕಾಗಿ 1990ರಲ್ಲಿ ಪುಣೆಗೆ ಬಂದರು. ಬಳಿಕ ಕುಮಟಾಕ್ಕೆ ಬಂದು ಇಲ್ಲಿಯೇ ನೆಲೆಗೊಂಡರು. ಪೋರ್ಚುಗಲ್‌ನಲ್ಲಿ ಮಕ್ಕಳಿದ್ದು, ಅವರನ್ನು ನೋಡಲು ಆರು ತಿಂಗಳಿಗೊಮ್ಮೆ ಅಲ್ಲಿಗೆ ಹೋಗಿ ಬರುತ್ತಾರೆ.

ADVERTISEMENT

ಪರಿಸರ ರಕ್ಷಣೆಗೆಂದು ಆ್ಯನಾ ‘ಖುಷಿ ಪರಿಸರ ಸಂಘ’ ಸ್ಥಾಪಿಸಿದ್ದು, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ನಿರ್ವಹಣೆ ಕುರಿತು ಜನಜಾಗೃತಿ ಮೂಡಿಸುತ್ತಿದ್ದಾರೆ. ನಿತ್ಯವೂ ಬೆಳಿಗ್ಗೆ 5 ಗಂಟೆಗೆ ಅವರ ಕಸದ ‘ಬೇಟೆ’ ಆರಂಭವಾಗುತ್ತದೆ.

‘ಆ್ಯನಾ ಮಾತನಾಡುವುದು ತೀರಾ ಕಡಿಮೆ. ಬದಲಾಗಿ ಅವರ ಪೆನ್ನು ಹೆಚ್ಚು ಕೆಲಸ ಮಾಡುತ್ತದೆ. ಎಲ್ಲೇ ಪ್ಲಾಸ್ಟಿಕ್ ಕಂಡರೂ ನೀವು ಪ್ಲಾಸ್ಟಿಕ್ ನಿಷೇಧಿಸಿದ್ದೀರಿ. ಆದರೆ, ಎಲ್ಲೆಡೆ ಅದು ಹಾರಾಡುತ್ತಿದೆಯಲ್ಲ? ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದುಬಿಡುತ್ತಾರೆ’ ಎನ್ನುತ್ತಾರೆ ಸಂಘದ ಸದಸ್ಯೆ ಪ್ರೊ.ಗೀತಾ ನಾಯಕ.

*

ಬೆನ್ನು ಸುಟ್ಟಿದ್ದ ಕ್ಯಾನ್

‘ಗೋಕರ್ಣಕ್ಕೆ ಬಂದಾಗ ಇಲ್ಲಿನ ಸುಂದರ ಸಮುದ್ರ ತೀರದ ಸೌಂದರ್ಯಕ್ಕೆ ಮನಸೋತೆ. ಆದರೆ, ಇಲ್ಲಿದ್ದ ಕಸ, ಪ್ಲಾಸ್ಟಿಕ್ ನನ್ನನ್ನು ಕಾಡತೊಡಗಿತು. ಇದರ ಸ್ವಚ್ಛತೆ ಬಗ್ಗೆ ಸ್ಥಳೀಯರಿಗೇಕೆ ನಿರ್ಲಕ್ಷ್ಯವೋ ಗೊತ್ತಿಲ್ಲ’ ಎನ್ನುತ್ತಾರೆ ಆ್ಯನಾ.

ಒಮ್ಮೆ ಗೋಕರ್ಣದಲ್ಲಿ ಯಾರೋ ಪ್ಲಾಸ್ಟಿಕ್ ರಾಶಿಗೆ ಹಾಕಿದ ಬೆಂಕಿಯಿಂದ ಸಿಡಿದ ಕ್ಯಾನ್ ಆ್ಯನಾ ಅವರ ಬೆನ್ನನ್ನು ಸುಟ್ಟಿತು. ಅಂದಿನಿಂದ ಅವರು ಪ್ಲಾಸ್ಟಿಕ್ ತ್ಯಾಜ್ಯ ಸುಡುವುದರ ವಿರುದ್ಧ ಸಿಡಿದೆದ್ದರು. ಆ ಸಂದರ್ಭದಲ್ಲಿ ಹುಟ್ಟಿದ್ದು ‘ಖುಷಿ ಪರಿಸರ ಸಂಘ’. ಆ ಸಂಘಟನೆಗೆ ಹೆಗಲು ಕೊಟ್ಟವರು ಪರಿಸರ ತಜ್ಞೆ ಡಾ.ರೂಪಾ ಹಾಗೂ ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕಿ ಪ್ರೊ.ಗೀತಾ ನಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.