ADVERTISEMENT

‘ಮಾದರಿ ತಾಲ್ಲೂಕು ನಿರ್ಮಾಣ’

​ಪ್ರಜಾವಾಣಿ ವಾರ್ತೆ
Published 8 ಮೇ 2018, 8:30 IST
Last Updated 8 ಮೇ 2018, 8:30 IST

ಗುಡೂರ(ಅಮೀನಗಡ): ‘ಹುನಗುಂದ ತಾಲ್ಲೂಕನ್ನು ಗುಡಿಸಲು ಮುಕ್ತ ಪ್ರದೇಶವನ್ನಾಗಿಸುವುದು. ಗುಡೂರು ಭಾಗಕ್ಕೆ ಶಾಶ್ವತ ಕುಡಿಯುವ ನೀರು ಹಾಗೂ ಸಿ.ಸಿ. ರಸ್ತೆ ಮಾಡುವ ನನ್ನ ಗುರಿ ಈಡೇರಬೇಕಾದರೆ ತಾವೆಲ್ಲರೂ ಅತ್ಯಧಿಕ ಅಂತರದಿಂದ ನನ್ನನ್ನು ಗೆಲ್ಲಿಸಬೇಕು’ ಎಂದು ಹುನಗುಂದ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಆರ್. ನವಲಿಹಿರೇಮಠ ಹೇಳಿದರು.

ಬಸ್ ನಿಲ್ದಾಣ ಆವರಣದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ‘ಇಂದು ತಾಲ್ಲೂಕಿನಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಬಡತನ ಕಾರಣದಿಂದ ಶಿಕ್ಷಣ ವಂಚಿತರಾಗಿದ್ದಾರೆ. ನಮ್ಮ ತಾಲ್ಲೂಕಿನಲ್ಲಿ ಯಾವ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತರಾಗಬಾರದು. ಎಸ್.ಆರ್.ಎನ್ ಫೌಂಡೇಷನ್‌ನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲಾಗುವುದು’ ಎಂದರು.

ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಜಬ್ಬಾರ್ ಕಲಬುರ್ಗಿ ಮಾತನಾಡಿ ‘ಶಾಸಕ ವಿಜಯಾನಂದ ಕಾಶಪ್ಪನವರ ನಾಲಿಗೆಯನ್ನು ಹರಿಬಿಟ್ಟು ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ. ಅವರು ಗುಡೂರು ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸದೆ ಜನತೆಗೆ ವಂಚಿಸುತ್ತಿದ್ದಾರೆ’ ಎಂದು ದೂರಿದರು.

ADVERTISEMENT

ಎ.ಐ.ಎಂ.ಐ.ಎಂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಉಸ್ಮಾನ್‌ಗಣಿ ಹುಮನಾಬಾದ ಮಾತನಾಡಿ ‘ತತ್ವ ಸಿದ್ಧಾಂತವಿಲ್ಲದ ಶಾಸಕ ವಿಜಯಾನಂದ ಕಾಶಪ್ಪನವರನ್ನು ಸೋಲಿಸಿ ಮನೆಗೆ ಕಳುಹಿಸಬೇಕು. ಮುಸ್ಲಿಂ ಮುಖಂಡರಿಗೆ ಅವಮಾನ ಮಾಡಿದ ಕಾಶಪ್ಪನವರಿಗೆ ಒಂದು ಓಟು ಬರಬಾರದು’ ಎಂದರು.

ಬಿ.ಎಸ್.ಪಿ ಪಕ್ಷದ ರಾಜ್ಯ ಕಾರ್ಯದರ್ಶಿ ವೈ.ಸಿ.ಕಾಂಬ್ಳೆ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಮೇಶ ಬದ್ನೂರು, ಗ್ರಾಮದ ಮುಖಂಡ ಕಳಕಪ್ಪ ಮಂತ್ರಿ, ಮುಖಂಡ ವೀರೇಶ ಕೂಡ್ಲಿಗಿಮಠ, ರಫಿಕ್ ಇಟಗಿ ಮಾತನಾಡಿದರು.  ಡಾ.
ನೀಲಾಂಬಿಕಾ ಪಾಟೀಲ, ರೇಖಾ ನವಲಿಹಿರೇಮಠ, ಮುತ್ತಣ್ಣ ತಳವಾರ ಉಪಸ್ಥಿತರಿದ್ದರು.

ರೋಡ್‌ ಷೋ: ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಕ್ಷೇತರ ಅಭ್ಯರ್ಥಿ ಎಸ್.ಆರ್.ನವಲಿಹಿರೇಮಠ ರೋಡ್‌ ಷೋ ನಡೆಸಿದರು. ಮಾರ್ಗದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೀರೇಶ ಕೂಡ್ಲಗಿಮಠ, ರೇಖಾ ನವಲಿಹಿರೇಮಠ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.