ಎನ್ನ ಕಾಯವ ದಂಡಿಗೆಯ ಮಾಡಯ್ಯಾ
ಎನ್ನ ಶಿರವ ಸೋರೆಯ ಮಾಡಯ್ಯಾ
ಎನ್ನ ನರವ ತಂತಿಯ ಮಾಡಯ್ಯಾ
ಎನ್ನ ಬೆರಳ ಕಡ್ಡಿಯ ಮಾಡಯ್ಯಾ
ಬತ್ತೀಸ ರಾಗವ ಹಾಡಯ್ಯಾ
ಉರದಲೊತ್ತಿ ಬಾರಿಸು ಕೂಡಲಸಂಗಮದೇವಾ
ಭಗವಂತನನ್ನು ಒಲಿಸಿಕೊಳ್ಳಲು ಹಲವಾರು ಮಾರ್ಗಗಳಿವೆ. ಅವುಗಳಲ್ಲಿ ಸಂಗೀತದ ಮೂಲಕವೂ ಒಲಿಸಿಕೊಳ್ಳುವುದು ಒಂದು ವಿಧಾನವಾಗಿದೆ. ಇಲ್ಲಿ ಬಸವಣ್ಣನವರು ತಮ್ಮ ಶರೀರದ ಅಂಗಾಂಗಗಳನ್ನೆ ವೀಣೆಯ ಒಂದೊಂದು ಭಾಗಗಳನ್ನಾಗಿ ಮಾಡಿ, ಮೂವತ್ತೆರಡು ಸ್ವರಗಳ ಮುಖಾಂತರ ಭಗವಂತನನ್ನು ಸ್ಮರಿಸುವೆನು ಎಂದಿದ್ದಾರೆ. ದೇಹವೆ ದಂಡಿಗೆ(ಸ್ವರ ನುಡಿಸುವ ವಾದ್ಯ)ಯಾದರೆ, ತಲೆಯು ಆ ವಾದ್ಯದ ಮೇಲ್ಭಾಗದಲ್ಲಿರುವ ಸೋರೆ (ವೀಣೆಯ ಮೇಲಿರುವ ಬುರುಡೆ)ಯಾಗಲಿ. ನರಗಳೆಲ್ಲ ತಂತಿಗಳಾಗಲಿ. ಬೆರಳುಗಳೆಲ್ಲ ಕಡ್ಡಿಗಳಾಗಲಿ. ಇವೆಲ್ಲವುಗಳ ಮೂಲಕ ಮನಸ್ಸು ತುಂಬಿ ಬರುವ ಹಾಗೆ ಹಲವಾರು ರಾಗಗಳಲ್ಲಿ ಹಾಡಿ ಭಗವಂತನನ್ನು ಒಲಿಸಿಕೊಳ್ಳುವೆನು ಎನ್ನುವುದನ್ನು ಈ ವಚನದ ಮೂಲಕ ತಿಳಿಸಿದ್ದಾರೆ. ಹೀಗೆ ನಮ್ಮನ್ನು ನಾವು ದೇವರಿಗೆ ಸಮರ್ಪಿಸಿಕೊಳ್ಳಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.