ಬೆಳಗಾವಿ: ‘ಭರತ ಮುನಿ ರಚಿಸಿದ ಭರತ ನಾಟ್ಯ ಕಲೆಯನ್ನು ಭಾರತೀಯರಾದ ನಾವು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದೇವೆ. ಈ ನಿಟ್ಟಿನಲ್ಲಿ ಇಲ್ಲಿನ ಶಾಂತಲಾ ನಾಟ್ಯಾಲಯ ಸಾವಿರಾರು ಮಕ್ಕಳಿಗೆ ಈ ಕಲೆ ಕಲಿಸುವ ಮೂಲಕ ಶ್ಲಾಘನೀಯ ಕಾರ್ಯ ಮಾಡಿದೆ’ ಎಂದು ರಾಜ್ಯ ಅಟಲ್ ಜನಸ್ನೇಹಿ ಕೇಂದ್ರದ ನಿರ್ದೇಶಕಿ ಗಂಗೂಬಾಯಿ ಮಾನಕರ ಹೇಳಿದರು.
ಇಲ್ಲಿ ಈಚೆಗೆ ನಡೆದ ಶಾಂತಲಾ ನಾಟ್ಯಾಲಯದ 32ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
‘ಕೊರೊನಾದಿಂದಾಗಿ ನಾವೆಲ್ಲಾ ನಗುವುದನ್ನು ಮತ್ತು ಸಂತೋಷ ಪಡುವುದನ್ನೇ ಮರೆತಿದ್ದೇವೆ. ಇಂತಹ ಸಂದರ್ಭದಲ್ಲಿ ಭರತನಾಟ್ಯ ಕಲೆಯು ಉಲ್ಲಾಸ ಮೂಡಿಸಲು ಸಹಕಾರಿಯಾಗಿದೆ’ ಎಂದರು.
ಕರ್ನಾಟಕ ಸಂಗೀತ ನಾಟ್ಯ ಅಕಾಡೆಮಿ ಸದಸ್ಯೆ ಹೇಮಾ ವಾಘ್ಮೋಡೆ ಮಾತನಾಡಿ, ‘ಈಗಲೂ ಬಹಳ ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಭರತನಾಟ್ಯ ಕಲಿಯಲು ಬರುತ್ತಿರುವುದು ಸಂತೋಷಟ ಸಂಗತಿ’ ಎಂದು ಹೇಳಿದರು.
ಪತ್ರಕರ್ತ ಎಂ.ಕೆ. ಹೆಗಡೆ ಮಾತನಾಡಿ, ‘ಭರತ ನಾಟ್ಯವನ್ನು ಶ್ರೀಮಂತಗೊಳಿಸಿದ ಶಾಂತಲಾ ನಾಟ್ಯಾಲಯ ಬೆಳಗಾವಿಯ ಹೆಮ್ಮೆ. ಮೂರು ದಶಕಗಳ ಭವ್ಯ ಇತಿಹಾಸ ಹೊಂದಿರುವ ಈ ಸಂಸ್ಥೆಗೆ ಈವರೆಗೂ ರಾಜ್ಯೋತ್ಸವ ಪ್ರಶಸ್ತಿ ಸಿಗದಿರುವುದು ದೊಡ್ಡ ಲೋಪ. ಈ ವರ್ಷವಾದರೂ ನೀಡಿ ಪ್ರಶಸ್ತಿಯ ಮೌಲ್ಯ ಹೆಚ್ಚಿಸುವ ಕೆಲಸವಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.
ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿದರು.
ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯ ಪ್ರಸ್ತುತಪಡಿಸಿದರು. ಶಾಂತಲಾ ನಾಟ್ಯಾಲಯದ ಮುಖ್ಯಸ್ಥೆ ರೇಖಾ ಹೆಗಡೆ, ನಿರ್ದೇಶಕರಾದ ಶ್ರೀಮತಿ ಹೆಗಡೆ, ಅಶೋಕ ಹೆಗಡೆ, ರೂಪಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.