ADVERTISEMENT

‘ಬದಲಾವಣೆಗೆ ಹೊಂದಿಕೊಳ್ಳುವ ಪ್ರವೃತ್ತಿ ಅಗತ್ಯ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 17:04 IST
Last Updated 16 ಸೆಪ್ಟೆಂಬರ್ 2021, 17:04 IST
ಬೆಳಗಾವಿಯಲ್ಲಿ ನಡೆದ ಎಂಜಿನಿಯರ್‌ಗಳ ದಿನಾಚರಣೆ ಕಾರ್ಯಕ್ರಮವನ್ನು ಪ್ರೊ.ಅರವಿಂದ ಗಲಗಲಿ ಉದ್ಘಾಟಿಸಿದರು. ಬಿ.ಜಿ. ಧರೆಣ್ಣಿ, ಬಿ.ವೈ. ಪವಾರ, ವಿ.ಬಿ. ಜಾವೂರ, ರಮೇಶ ಜಂಗಲ ಇದ್ದಾರೆ
ಬೆಳಗಾವಿಯಲ್ಲಿ ನಡೆದ ಎಂಜಿನಿಯರ್‌ಗಳ ದಿನಾಚರಣೆ ಕಾರ್ಯಕ್ರಮವನ್ನು ಪ್ರೊ.ಅರವಿಂದ ಗಲಗಲಿ ಉದ್ಘಾಟಿಸಿದರು. ಬಿ.ಜಿ. ಧರೆಣ್ಣಿ, ಬಿ.ವೈ. ಪವಾರ, ವಿ.ಬಿ. ಜಾವೂರ, ರಮೇಶ ಜಂಗಲ ಇದ್ದಾರೆ   

ಬೆಳಗಾವಿ: ‘ಬದಲಾವಣೆಗೆ ಹೊಂದಿಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವ ಅವಶ್ಯಕತೆ ಇದೆ’ ಎಂದು ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ ಶೆಟ್ಟರ ಹೇಳಿದರು.

ಇಲ್ಲಿನ ಭಾರತೀಯ ಎಂಜಿನಿಯರ್‌ಗಳ ಸಂಸ್ಥೆ ಬೆಳಗಾವಿ ಶಾಖೆಯಿಂದ ಆಯೋಜಿಸಿದ್ದ ಎಂಜಿನಿಯರ್‌ಗಳ ದಿನ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಆನ್‌ಲೈನ್‌ನಲ್ಲಿ ಅವರು ಮಾತನಾಡಿದರು.

‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಅಭಿವೃದ್ಧಿ ಆಗಿದೆ. ಎಂಜಿನಿಯರಿಂಗ್ ಕ್ಷೇತ್ರವಂತೂ ಬಹಳ ಬದಲಾವಣೆ ಕಂಡಿದೆ. ಪ್ರಸ್ತುತ ತಂತ್ರಜ್ಞಾನ ಮಂದಗತಿಯಲ್ಲಿದ್ದು, ಬದಲಾದ ಸನ್ನಿವೇಶಕ್ಕೆ ಹೊಂದಿಕೊಳ್ಳಬೇಕು. ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮೊದಲಾದ ಕೋರ್ಸ್‌ಗಳಲ್ಲಿ ಕೂಡ ನೂತನ ತಂತ್ರಜ್ಞಾನಗಳು ಬಂದಿವೆ. ಇದಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯಲ್ಲೂ ಅಮೂಲಾಗ್ರ ಬದಲಾವಣೆ ಆಗಿದೆ. ಇದರ ಪ್ರಯೋಜನವನ್ನು ಯುವಜನರು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಈಗಿನ ತಂತ್ರಜ್ಞಾನ 5–6 ವರ್ಷ ಮಾತ್ರ ಇರಬಹುದು. ಮತ್ತೆ ಬದಲಾವಣೆ ಆಗುತ್ತದೆ. ಆದ್ದರಿಂದ ಸವಾಲಯಗಳಿಗೆ ಸಜ್ಜಾಗಬೇಕು’ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆಯ ಎಸ್‌ಇ ಬಿ.ವೈ. ಪವಾರ ಮಾತನಾಡಿ, ‘ಕೃಷ್ಣಾ ಯೋಜನೆಯಿಂದ ಉತ್ತರ ಕರ್ನಾಟಕದ ಬರಡು ಭೂಮಿ ಇಂದು ಹಸಿರಿನಿಂದ ನಳನಳಿಸುತ್ತಿದೆ. ಇದಕ್ಕೆ ಎಂಜಿನಿಯರ್‌ಗಳ ಶ್ರಮ ಕಾರಣ’ ಎಂದರು.

ರಾಜ್ಯ ಸರ್ಕಾರದ ತಾಂತ್ರಿಕ ಸಲಹೆಗಾರ ಪ್ರೊ.ಅರವಿಂದ ಗಲಗಲಿ, ಬಿ.ವೈ. ಪವಾರ, ಬಾಲಕೃಷ್ಣ ಗೋಡಸೆ, ಪುಂಡಲೀಕ ನಂದಗಾವಿ ಅವರನ್ನು ಗೌರವಿಸಲಾಯಿತು.

ಭಾರತೀಯ ಎಂಜಿನಿಯರ್‌ಗಳ ಸಂಸ್ಥೆ ಬೆಳಗಾವಿ ಶಾಖೆ ಅಧ್ಯಕ್ಷ ರಮೇಶ ಜಂಗಲ ಅಧ್ಯಕ್ಷತೆ ವಹಿಸಿದ್ದರು.

ವೆಂಕಟೇಶ ಸ್ವಾಗತಿಸಿದರು. ಸಿ.ಬಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಶ್ರೀಕಾಂತ ಅಂಬೇಕರ ನಿರೂಪಿಸಿದರು. ಕಾರ್ಯದರ್ಶಿ ಬಿ.ಜಿ. ಧರೆಣ್ಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.