ADVERTISEMENT

ಉಪ್ಪಿನಂಗಡಿ: ಲಾರಿ ದುರಸ್ತಿ ಮಾಡುತ್ತಿದ್ದವರ ಮೇಲೆ ಹರಿದ ವಾಹನ, ಮೂವರು ಸಾವು

ಲಾರಿ ದುರಸ್ತಿ ಮಾಡುತ್ತಿದ್ದವರ ಮೇಲೆ ಹರಿದ ಪಿಕ್ಅಪ್

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 15:56 IST
Last Updated 30 ಆಗಸ್ಟ್ 2021, 15:56 IST
ಉಪ್ಪಿನಂಗಡಿ ಸಮೀಪ ಬೆದ್ರೋಡಿ ಎಂಬಲ್ಲಿ ಲಾರಿ ಮತ್ತು ಪಿಕ್ಅಪ್ ಮಧ್ಯೆ ಅಪಘಾತ ಸಂಭವಿಸಿರುವುದು
ಉಪ್ಪಿನಂಗಡಿ ಸಮೀಪ ಬೆದ್ರೋಡಿ ಎಂಬಲ್ಲಿ ಲಾರಿ ಮತ್ತು ಪಿಕ್ಅಪ್ ಮಧ್ಯೆ ಅಪಘಾತ ಸಂಭವಿಸಿರುವುದು   

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಸೋಮವಾರ ಪಿಕ್‌ಅಪ್‌ ವಾಹನ ಡಿಕ್ಕಿ ಹೊಡೆದ ಪರಿಣಾಮ ಲಾರಿ ದುರಸ್ತಿ ಮಾಡುತ್ತಿದ್ದ ಮೂವರು ಮೃತಪಟ್ಟಿದ್ದಾರೆ.

ಬೆಂಗಳೂರಿನ ಅಬ್ದುಲ್ ರಹಿಮಾನ್ (23), ಮಧು (33) ಮತ್ತು ಅಬ್ಸಾನ್ (33) ಮೃತರು. ಲಾರಿಯ ಚಾಲಕ ಶಿವಮೊಗ್ಗದ ಆಸಿಫ್ ಲಾರಿಯ ಒಳಗಡೆ ಕುಳಿತಿದ್ದರಿಂದ ಪಾರಾಗಿದ್ದಾರೆ.

ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಲಾರಿ 2 ದಿನಗಳ ಹಿಂದೆ ಕೆಟ್ಟು ನಿಂತಿದ್ದು, ರಸ್ತೆ ಬದಿ ನಿಲ್ಲಿಸಲಾಗಿತ್ತು. ಈ ಲಾರಿಗೆ ಸಂಬಂಧಿಸಿದ ಕಂಪನಿಯ ಮತ್ತೊಂದು ಲಾರಿಯ ಚಾಲಕನಾಗಿರುವ ಮಧು ಬೆಂಗಳೂರಿನಿಂದ ಮೆಕಾನಿಕ್‌ಗಳಾದ ಅಬ್ದುಲ್ ರಹಿಮಾನ್ ಮತ್ತು ಅಬ್ಸಾನ್‌ರನ್ನು ಕರೆದುಕೊಂಡು ಬಂದು, ಮೂವರು ಸೇರಿಕೊಂಡು ಲಾರಿ ದುರಸ್ತಿ ಮಾಡುತ್ತಿದ್ದರು.

ADVERTISEMENT

ಮಂಗಳೂರು ಕಡೆಯಿಂದ ಹಾಸನಕ್ಕೆ ಹೋಗುವ ಪಿಕ್ಅಪ್ ವಾಹನವೊಂದು ಲಾರಿಗೆ ಡಿಕ್ಕಿಯಾಗಿ, ನಂತರ ದುರಸ್ತಿ ಕೆಲಸ ಮಾಡಿಕೊಂಡಿದ್ದವರ ಮೇಲೆ ಎರಗಿ ಹೋಗಿದೆ. ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ.

ಘಟನೆ ನಡೆದ ತಕ್ಷಣ ಉಪ್ಪಿನಂಗಡಿಯ ಆಂಬುಲೆನ್ಸ್ ಚಾಲಕ ನೌಫಲ್, ಸ್ಥಳೀಯರಾದ ಫಾರೂಕ್ ಝಿಂದಗಿ ಬೆದ್ರೋಡಿ ಮತ್ತು ಆಸಿಫ್ ಕೊಯಿಲ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾದರು. ಪಿಕ್‌ಅಪ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.