ADVERTISEMENT

60 ಗ್ರಾಮ ಹೈದರಾಬಾದ್ ಕರ್ನಾಟಕಕ್ಕೆ ಸೇರಿಸಿ

ವಿಶ್ವ ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ತಳಗಡೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2023, 5:36 IST
Last Updated 16 ಮಾರ್ಚ್ 2023, 5:36 IST
ಮುಂಡರಗಿಯಲ್ಲಿ ವಿಶ್ವ ಕನ್ನಡ ರಕ್ಷಣಾ ವೇದಿಕೆ ಹಾಗೂ ತಾಲ್ಲೂಕು ಪಕ್ಷಾತೀತ ಹೋರಾಟ ವೇದಿಕೆಗಳು ಹಮ್ಮಿಕೊಂಡಿದ್ದ ಬೆಂಗಳೂರು ಚಲೋ ಕಾರ್ಯಕ್ರಮವನ್ನು ಎಂ.ಕೆ.ತಳಗಡೆ ಉದ್ಘಾಟಿಸಿದರು
ಮುಂಡರಗಿಯಲ್ಲಿ ವಿಶ್ವ ಕನ್ನಡ ರಕ್ಷಣಾ ವೇದಿಕೆ ಹಾಗೂ ತಾಲ್ಲೂಕು ಪಕ್ಷಾತೀತ ಹೋರಾಟ ವೇದಿಕೆಗಳು ಹಮ್ಮಿಕೊಂಡಿದ್ದ ಬೆಂಗಳೂರು ಚಲೋ ಕಾರ್ಯಕ್ರಮವನ್ನು ಎಂ.ಕೆ.ತಳಗಡೆ ಉದ್ಘಾಟಿಸಿದರು   

ಮುಂಡರಗಿ: ‘ಜಿಲ್ಲೆಯ ಮುಂಡರಗಿ, ರೋಣ ಹಾಗೂ ಗಜೇಂದ್ರಗಡ ತಾಲ್ಲೂಕುಗಳು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ತೀರಾ ಹಿಂದುಳಿದಿವೆ. ಆದ್ದರಿಂದ ಸರ್ಕಾರ ಮೂರು ತಾಲ್ಲೂಕುಗಳ ಸುಮಾರು 60 ಗ್ರಾಮಗಳನ್ನು ಹೈದರಾಬಾದ್್ ಕರ್ನಾಟಕಕ್ಕೆ ಸೇರಿಸಬೇಕು’ ಎಂದು ವಿಶ್ವ ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಳಗಡೆ ಒತ್ತಾಯಿಸಿದರು.

ವಿಶ್ವ ಕನ್ನಡ ರಕ್ಷಣಾ ವೇದಿಕೆ ಹಾಗೂ ತಾಲ್ಲೂಕು ಪಕ್ಷಾತೀತ ಹೋರಾಟ ವೇದಿಕೆಗಳು ಬುಧವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಚಲೋ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮುಂಡರಗಿ, ರೋಣ ಹಾಗೂ ಗಜೇಂದ್ರಗಡ ತಾಲ್ಲೂಕುಗಳ ಸುಮಾರು 60 ಗ್ರಾಮಗಳು ಮೊದಲು ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದವು. ಲೋಕಸಭಾ ಕ್ಷೇತ್ರಗಳ ವಿಂಗಡನೆಯ ನಂತರ ಈ ಮೂರು ತಾಲ್ಲೂಕುಗಳು ಹಾವೇರಿ ಹಾಗೂ ಬಾಗಲಕೋಟೆ ಲೋಕಸಭಾ ಕ್ಷೇತ್ರಗಳಿಗೆ ಹಂಚಿ ಹೋಗಿದ್ದು, ಅವುಗಳನ್ನು ಹೈದ್ರಾಬಾದ್ ಕರ್ನಾಟಕಕ್ಕೆ ಸೇರಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಹೈದರಾಬಾದ್ ಕರ್ನಾಟಕ ಪ್ರದೇಶವು ಈಚೆಗೆ 371(ಜೆ) ವ್ಯಾಪ್ತಿಗೆ ಒಳಪಟ್ಟು ವಿಶೇಷ ಸ್ಥಾನಮಾನ ಪಡೆದುಕೊಂಡಿದೆ. ವಾಸ್ತವವಾಗಿ ಮುಂಡರಗಿ ತಾಲ್ಲೂಕು 371(ಜೆ) ವ್ಯಾಪ್ತಿಗೆ ಒಳಪಡಬೇಕಿತ್ತು. ಆದರೆ ಇಲ್ಲಿಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಭಾಗವು ಶಾಶ್ವತವಾಗಿ ಹಿಂದುಳಿಯುವಂತಾಗಿದೆ’ ಎಂದು ಆರೋಪಿಸಿದರು.

ನಂಜುಂಡಪ್ಪ ವರದಿಯ ಪ್ರಕಾರ ಮುಂಡರಗಿ ತಾಲ್ಲೂಕು ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ. ಈ ಭಾಗವು ಹೈದ್ರಾಬಾದ್ ಕರ್ನಾಟಕಕ್ಕೆ ಸೇರಿದರೆ ಎಲ್ಲ ಜನತೆಗೆ ವಿಶೇಷ ಮೀಸಲಾತಿ ದೊರೆಯುತ್ತದೆ. ಜೊತೆಗೆ ಈ ಭಾಗವು ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು.

ಈ ಭಾಗದ ಗ್ರಾಮಗಳನ್ನು ಹೈದರಾಬಾದ್ ಕರ್ನಾಟಕಕ್ಕೆ ಸೇರಿಸಲು ಆಗ್ರಹಿಸಿ ಮಾರ್ಚ್ 16ರಂದು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಬಸವರಾಜ ನವಲಗುಂದ, ಈರಣ್ಣ ಗಟ್ಟಿ, ಸಂತೋಷ ಹಿರೇಮಠ, ನಾಗರಾಜ ಹೊಂಬಳಗಟ್ಟಿ, ವಿನೊದ ವಡ್ಡರ, ದುರ್ಗಪ್ಪ ಮೋರನಾಳ, ಮಹ್ಮದ ಶರೀಫ ಮುಲ್ಲಾ, ಶಿವಪ್ಪ ಉಕ್ಕಲಿ, ಹನುಮಂತ ಕೋಳಿ, ದ್ರುವಕುಮಾರ ಹೂಗಾರ, ಶಿವರಾಜ ಅಸುಂಡಿ, ರೆಹಮನ್ ಒಂಟಿ, ಮೆಹಬೂಬಸಾಬ ಶಾಬಾಯಿ, ಸುಜಾತ ಕೇದರಹಳ್ಳಿ, ಮಧುಮತಿ ಮಡಿವಾಳರ, ರೇಣುಕಾ ಚಿಕ್ಕಣ್ಣವರ, ಜಯಶ್ರೀ ಹುಯಿಲಗೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.