ಶ್ರವಣಬೆಳಗೊಳ: ಕ್ಷೇತ್ರದಲ್ಲಿ ವರ್ಷಾ ಯೋಗ ಚಾತುರ್ಮಾಸ್ಯ ಆಚರಿಸುತ್ತಿರುವ ಆರ್ಯಿಕಾ ಶಿವಮತಿ ಮಾತಾಜಿ, ಆರ್ಯಿಕಾ ಜಯಶ್ರೀ ಮಾತಾಜಿಅವರ ಸಂಘಸ್ಥ ತ್ಯಾಗಿಗಳಿಂದ ಭಂಡಾರ ಬಸದಿ ಮತ್ತು ತ್ಯಾಗಿ ನಿವಾಸದಲ್ಲಿ ಪ್ರವಚನ, ಧರ್ಮ ಚರ್ಚೆ, ಸ್ವಾಧ್ಯಾಯ, ಪರಸ್ಪರ ಕ್ಷಮಾವಾಣಿ ಆಚರಿಸುವುದರೊಂದಿಗೆ ಹತ್ತು ಧರ್ಮಗಳ ದಶಲಕ್ಷಣ ಪರ್ವ ಮತ್ತು ಚವ್ವೀಸ್ ತೀರ್ಥಂಕರರ ಕಲ್ಪಧ್ರುಮ ಪೂಜೆ ಸೋಮವಾರ ಸಂಪನ್ನಗೊಂಡಿತು.
ಕೋವಿಡ್–19ರ ಪ್ರಭಾವದಿಂದಾಗಿ ಈ ಬಾರಿ ಸರಳವಾಗಿ ಕಲ್ಪಧ್ರುಮ ಪೂಜೆ ನೆರವೇರಿಸಲಾಯಿತು.
ಈ ಪರ್ವದ ವಿಶೇಷವೆಂದರೆ ಧರ್ಮ, ಜಾತಿ, ಮತ ಪಂಥ, ಪಂಗಡಗಳ ಬೇಧಗಳನ್ನು ಗಣನೆಗೆ ತೆಗೆದುಕೊಳ್ಳದೇ ಯಾರ ಹೆಸರಿನಲ್ಲಿಯೂ ಆಚರಿಸದೇ ಪ್ರತಿಯೊಂದು ಆತ್ಮನ ವಿಕಾಸ ಉನ್ನತಿಗೆ ಕಾರಣವಾಗುವಂತೆ ಆಚರಿಸುವುದರಿಂದ ಇದನ್ನು ಜೈನ ಧರ್ಮೀಯರು ರಾಜ ಪರ್ವವೆಂದು ಕರೆಯುತ್ತಾರೆ.
ಆಶೀರ್ವಚನ ನೀಡಿ ಆರ್ಯಿಕಾ ಶಿವಮತಿ ಮಾತಾಜಿ, ‘ಸರ್ವ ಜೀವಿಗಳಲ್ಲಿ ಕ್ಷಮೆಯನ್ನಿಡುವುದೇ ಕ್ಷಮಾ ಧರ್ಮ. ಮನ, ವಚನ, ಕಾಯಗಳಿಂದ ಮೋಸ ಮಾಡದಿರುವುದೇ ಆರ್ಜವ ಧರ್ಮ. ಅತಿಯಾಸೆಯನ್ನು ತ್ಯಜಿಸಿ, ಸಂತುಷ್ಟನಾಗುವ ಪ್ರವೃತ್ತಿ ಬೆಳೆಸಿಕೊಳ್ಳುವುದೇ ಶೌಚ ಧರ್ಮ. ಹಿತ, ಮಿತ, ಪ್ರಿಯ, ಸತ್ಯ ವಚನಗಳನ್ನಾಡುವುದು ಸತ್ಯ ಧರ್ಮ. ಇಂದ್ರೀಯಹಾಗೂ ಮನವನ್ನು ವಶದಲ್ಲಿಟ್ಟುಕೊಳ್ಳುವುದು ಪ್ರಾನಿ ದಯೆ ತೋರಿಸುವುದು ಸಂಯಮ ಧರ್ಮ ಹಾಗೂ ಇಂದ್ರೀಯಗಳವಿಜಯವನ್ನು ಸಾಧಿಸಿ ಆತ್ಮನಲ್ಲಿ ಲೀನವಾಗುವುದು ಬ್ರಹ್ಮಚರ್ಯ ಧರ್ಮವಾಗಿದೆ’ ಎಂದರು.
ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಅವರು, ಚಾತುರ್ಮಾಸ್ಯ ವ್ರತ ಮೌನ ಧಾರಣೆಯೊಂದಿಗೆ ಸ್ವಾಧ್ಯಾಯದಲ್ಲಿ ನಿರತರಾಗಿದ್ದಾರೆ. ಮಾತಾಜಿ ಹಾಗೂ ಸಂಘಸ್ಥ ತ್ಯಾಗಿಗಳು ಪ್ರತಿನಿತ್ಯ ತತ್ವಾರ್ಥ ಸೂತ್ರದ 10 ಅಧ್ಯಾಯಗಳನ್ನು ಪಠಿಸಿ ಅದನ್ನು ಅರ್ಥ ಸಹಿತ ವಿವರಿಸಿದರು.
ಪೂಜೆಯ ನೇತೃತ್ವವನ್ನು ಪ್ರತಿಷ್ಠಾಚಾರ್ಯ ಎಸ್.ಡಿ.ನಂದಕುಮಾರ್ ಮತ್ತು ತಂಡ ನಿರ್ವಹಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.