ADVERTISEMENT

ಕಲಬುರಗಿ: ದಲಿತ ಯುವಕನ ಕೊಲೆ, ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಮೇ 2022, 9:31 IST
Last Updated 27 ಮೇ 2022, 9:31 IST
ಕೊಲೆಯಾದ ಯುವಕ ವಿಜಯಕುಮಾರ್‌ ಕಾಂಬಳೆ
ಕೊಲೆಯಾದ ಯುವಕ ವಿಜಯಕುಮಾರ್‌ ಕಾಂಬಳೆ   

ಕಲಬುರಗಿ: ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದ ಭೀಮನಗರದ ನಿವಾಸಿ ವಿಜಯಕುಮಾರ್ ಕಾಂಬಳೆ (25) ಎಂಬ ದಲಿತ ಯುವಕನ ಹತ್ಯೆ ಮಾಡಿದ ‌ಆರೋಪದ‌ ಮೇರೆಗೆ ವಾಡಿ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ವಾಡಿ ಪಟ್ಟಣದ ಮರಾಠಿ ಗಲ್ಲಿ ನಿವಾಸಿ ಮೊಹಮ್ಮದ್‌ ಶಹಾಬುದ್ದೀನ್ ಹಾಗೂ ನವಾಜ್ ಬಂಧಿತರು.

ವಿಜಯಕುಮಾರ್ ಹಾಗೂ ಶಹಾಬುದ್ದೀನ್‌ನ ತಂಗಿ‌ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಬಗ್ಗೆ ಶಹಾಬುದ್ದೀನ್ ತಕರಾರು ತೆಗೆದು ಒಂಬತ್ತು ‌ತಿಂಗಳ ಹಿಂದೆ ವಿಜಯಕುಮಾರ್ ‌ಮೇಲೆ ಹಲ್ಲೆ ಮಾಡಿದ್ದ. ಆ ನಂತರವೂ ಮೊಬೈಲ್‌ನಲ್ಲಿ ಪ್ರೇಮಿಗಳು ಚಾಟಿಂಗ್ ಮಾಡುವುದು ಹಾಗೂ ಭೇಟಿಯಾಗುವುದನ್ನು ಮುಂದುವರಿಸಿದ್ದ ಹಿನ್ನೆಲೆಯಲ್ಲಿ ತನ್ನ ಸ್ನೇಹಿತ ನವಾಜ್ ನೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ‌ತಿಳಿಸಿದ್ದಾರೆ.

ADVERTISEMENT

ಹತ್ಯೆಗೂ ಮುನ್ನ ಫೋನ್ ಕರೆ: ಹತ್ಯೆ ಮಾಡುವುದಕ್ಕೂ ಮುನ್ನ ಶಹಾಬುದ್ದೀನ್ ವಿಜಯಕುಮಾರ್‌ಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದ. ಆದರೆ, ಈ ಎಚ್ಚರಿಕೆಯನ್ನು ಕಡೆಗಣಿಸಿದ್ದೇ ಮುಳುವಾಯಿತು ಎಂದು ತಿಳಿದು ಬಂದಿದೆ.

ಪೊಲೀಸರು ಕೊಲೆ ಹಾಗೂ ಜಾತಿನಿಂದನೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಶಾಸಕ ಪ್ರಿಯಾಂಕ್ ಖರ್ಗೆ ಮೃತ ವಿಜಯಕುಮಾರ್ ಕಾಂಬಳೆ ಅವರ ತಾಯಿ ರಾಜೇಶ್ವರಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ರಾಜೇಶ್ವರಿ ಅವರು ಪ್ರಿಯಾಂಕ್ ಅವರ ಕಾಲಿಗೆರಗಿ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.