ಗೋಣಿಕೊಪ್ಪಲು: ವಿದ್ಯಾರ್ಥಿಗಳನ್ನು ತಾಯಿಯಂತೆ ಪೋಷಿಸುವ ಅಪರೂಪದ ಶಿಕ್ಷಕಿಯರು ಇಲ್ಲಿನ ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದಾರೆ.
ಇಲ್ಲಿನ ಶಾಲೆಯ ಶಿಕ್ಷಕಿಯರಾದ ಸುಜಾತಾ, ಅನಿತಾಕುಮಾರಿ, ಸಪೂರಾ ಆವರು ಮಕ್ಕಳಿಗೆ ತಮ್ಮ ಸ್ವಂತ ಖರ್ಚಿನಲ್ಲೇ ಹಲವು ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಇವರು ನೀಡಿರುವ ಸೌಕರ್ಯಗಳಿಂದಾಗಿ ಶಾಲೆಗೆ ಮಕ್ಕಳು ಗೈರಾಗುವುದು ತಪ್ಪಿದೆ.
ಶಾಲೆಯಿಂದ 5ರಿಂದ 6 ಕಿ.ಮೀ ದೂರದಲ್ಲಿ ಕಾಫಿ ತೋಟದ ಒಳಗೆ ಚದುರಿದಂತೆ ಇರುವ ಕೂಲಿ ಕಾರ್ಮಿಕ ಮಕ್ಕಳನ್ನು ವಾಹನದಲ್ಲಿ ಕರೆ ತರುವುದಕ್ಕೆ ವಾಹನ ಬಾಡಿಗೆಯನ್ನು ಈ ಶಿಕ್ಷಕಿಯರೇ ಪ್ರತಿ ತಿಂಗಳು ಭರಿಸುತ್ತಿದ್ದಾರೆ. ಇದರಿಂದ ಪೋಷಕರೂ ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸುತ್ತಿದ್ದಾರೆ. ಒಂದು ವೇಳೆ ಇವರು ಈ ಸೌಕರ್ಯ ಕಲ್ಪಿಸದೇ ಹೋಗಿದ್ದರೆ ಹಲವು ಮಕ್ಕಳು ಶಾಲೆಗೆ ಬಾರದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದರು.
ಸರ್ಕಾರಿ ಶಾಲೆಯ ಮಕ್ಕಳಿಗೆ ‘ಸ್ಮಾರ್ಟ್’ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ತಮ್ಮ ಸ್ವಂತ ಹಣ ಹಾಕಿ ಇವರು 3 ಲ್ಯಾಪ್ಟಾಪ್ಗಳನ್ನು ಖರೀದಿಸಿದ್ದಾರೆ. ಜತೆಗೆ, ಪ್ರೊಜೆಕ್ಟರ್ಗಳನ್ನೂ ಖರೀದಿಸಿ, ಇವುಗಳ ಮೂಲಕ ಮಕ್ಕಳಿಗೆ ಖಾಸಗಿ ಶಾಲೆಗಳಂತೆ ಪಾಠ ಮಾಡುತ್ತಿದ್ದಾರೆ. ಇದರಿಂದಲೂ ಮಕ್ಕಳು ಒಂದು ದಿನವೂ ತಪ್ಪದ ಹಾಗೆ ಶಾಲೆಗೆ ಬರುತ್ತಿದ್ದು, ಅವರ ಕಲಿಕಾ ಗುಣಮಟ್ಟವೂ ಹೆಚ್ಚಾಗಿದೆ.
ಶಾಲೆಯ ಆವರಣದಲ್ಲಿಯೇ ಬೆಳೆಸಿದ ಸೊಪ್ಪು ಹಾಗೂ ತರಕಾರಿಗಳನ್ನು ಬಳಸಿಕೊಂಡು ಶುಚಿ ಮತ್ತು ರುಚಿಯಾದ ಊಟವನ್ನು ಉಣ
ಬಡಿಸುತ್ತಿದ್ದಾರೆ. ಊಟದ ನಂತರ ಶಾಲೆಯ ಆವರಣದಲ್ಲಿ ಸಮೃದ್ಧವಾಗಿ ಬೆಳೆಸಿರುವ ಬಾಳೆ ತೋಟದ ಹಣ್ಣುಗಳನ್ನು ಪ್ರತಿ ದಿನ ಮಕ್ಕಳಿಗೆ ನೀಡುತ್ತಿದ್ದಾರೆ. ಈ ಮೂಲಕ ಮಕ್ಕಳ ಅಪೌಷ್ಟಿಕತೆಯ ಸಮಸ್ಯೆಯನ್ನು ನಿವಾರಿಸುವಲ್ಲಿಯೂ ಇವರು ಪ್ರಯತ್ನಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.