ADVERTISEMENT

ಸಿಂದಗಿ, ತಾಳಿಕೋಟೆ, ನಾಲತವಾಡ: ಭಾರೀ ಮಳೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 16:22 IST
Last Updated 21 ಸೆಪ್ಟೆಂಬರ್ 2021, 16:22 IST
ನಾಲತವಾಡ ಸಮೀಪದ ಹೊಲಗಳಲ್ಲಿ ಮಳೆ ನೀರು ನಿಂತಿರುವುದು
ನಾಲತವಾಡ ಸಮೀಪದ ಹೊಲಗಳಲ್ಲಿ ಮಳೆ ನೀರು ನಿಂತಿರುವುದು   

ವಿಜಯಪುರ: ವಿಜಯಪುರ ನಗರ ಸೇರಿದಂತೆ ಸಿಂದಗಿ, ತಾಳಿಕೋಟೆ, ನಾಲತವಾಡ, ದೇವರ ಹಿಪ್ಪರಗಿ ಸೇರಿದಂತೆ ವಿವಿಧೆಡೆ ಮಂಗಳವಾರ ಭಾರಿ ಮಳೆಯಾಗಿದೆ.

ಸಿಂದಗಿ 11 ಸೆಂ.ಮೀ.,ನಾಲತವಾಡ 10.6,ತಾಳಿಕೋಟಿ 10.4,ಢವಳಗಿ 8.8,ಬಸವನ ಬಾಗೇವಾಡಿ 3.8, ಮನಗೂಳಿ 3.5,ಹೂವಿನ ಹಿಪ್ಪರಗಿ 3.4, ಅರೇಶಂಕರ 1.6, ವಿಜಯಪುರ 3, ಭೂತನಾಳ 4.2,ಹಿಟ್ನಳ್ಳಿ 1.9, ಕುಮಟಗಿ 4.7,ಅಗರಖೇಡ 3.2, ಮುದ್ದೆಬಿಹಾಳ 1.2, ಆಲಮೇಲ 2.5,ಸಾಸಾಬಾಳ 2, ರಾಮನಹಳ್ಳಿ 2,ಕಡ್ಲೆವಾಡ 1, ದೇವರಹಿಪ್ಪರಗಿ 5 ಮತ್ತುಕೊಂಡಗೂಳಿ 2.2 ಸೆಂ.ಮೀ.ಮಳೆಯಾಗಿದೆ.

ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಹಿಂಗಾರು ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ.

ADVERTISEMENT

ಸಿಂದಗಿ, ತಾಳಿಕೋಟೆ, ನಾಲತವಾಡ ತಾಲ್ಲೂಕಿನಾದ್ಯಂತ ಸೋಮವಾರ ರಾತ್ರಿ ಭಾರಿ ಮಳೆಯಾಗಿದ್ದು ಜಮೀನುಗಳ ಒಡ್ಡು ಭರ್ತಿಯಾಗಿ ಕೆರೆಗಳಂತಾಗಿವೆ. ಹಳ್ಳ–ಕೊಳ್ಳಗಳು ಮೈದುಂಬಿಕೊಂಡು ಹರಿಯತೊಡಗಿವೆ.

ತಾಳಿಕೋಟೆ ಪ್ರಸಕ್ತ ವರ್ಷದಲ್ಲಿ ಇದು ಅತಿ ಹೆಚ್ಚಿನ ಮಳೆಯಾಗಿದೆ. ಮಳೆರಾಯನ ಅರ್ಭಟಕ್ಕೆ ಪಟ್ಟಣದ ಬೀದಿಗಳು ಸ್ವಚ್ಛವಾದವು. ಕೆಲ ಜಮೀನುಗಳಲ್ಲಿ ನೀರು ನಿಂತಿದ್ದು, ಬೆಳೆ ಹಾನಿಯ ಆತಂಕ ರೈತರಿಗೆ ಎದುರಾಗಿದೆ.

ನಾಲತವಾಡ ಹೋಬಳಿ ಸುತ್ತಲಿನ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಸುರಿದ ಅಬ್ಬರದ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೆಲವೆಡೆ ಹೊಲಗಳಲ್ಲಿ ನೀರು ನಿಂತು ಆತಂಕವನ್ನೂ ಸೃಷ್ಟಿಸಿದೆ.

ಸುಡು ಬಿಸಿಲು ಮತ್ತು ಬಿಸಿ ಗಾಳಿಯಿಂದಾಗಿ ಜನರು ಹೈರಾಣಾಗಿದ್ದರು. ಮುಂಗಾರು ಬಿತ್ತನೆಯ ನಂತರ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿರಲಿಲ್ಲ. ಬಿತ್ತಿದ್ದ ಬೆಳೆ ಕೈಗೆ ಬರುವ ಹೊತ್ತಿನಲ್ಲಿ ಹದವಾಗಿ ಮಳೆ ಸುರಿದಿದ್ದು, ರೈತರು ಸಂಭ್ರಮಿಸುವಂತೆ ಮಾಡಿದೆ.

ಹಿಂಗಾರು ಹಂಗಾಮು ಸಿದ್ಧತೆಯಲ್ಲಿರುವಾಗಲೇ ಮಳೆಯ ಆಗಮನವಾಗಿದೆ. ಹೋಬಳಿಯಲ್ಲಿ ಈಗಾಗಲೇ ಎರೆ ಹೊಲಗಳ ಕಸ ಕಡ್ಡಿಗಳನ್ನು ಆರಿಸಿ ಮಹಾನವಮಿ ನಂತರ ಕಡಲೆ, ಕುಸುಬೆ, ಬಿಳಿ ಜೋಳ ಬಿತ್ತಲು ಭೂಮಿ ಸಿದ್ಧಗೊಳಿಸಲಾಗಿದೆ. ಬಿತ್ತನೆ ಬೀಜ ಶೇಖರಣೆ, ರಸಗೊಬ್ಬರ ಖರೀದಿಯಲ್ಲಿ ರೈತರು ನಿರತರಾಗಿದ್ದಾರೆ.

ಘಾಳಪೂಜಿ, ಲೊಟಗೇರಿ, ಬಿಜ್ಜೂರ, ರಕ್ಕಸಗಿ, ಮಾನಬಾವಿ, ಚವನಭಾವಿ, ಸೋಮನಾಳ ಗ್ರಾಮಗಳು ಸೇರಿದಂತೆ ಇತರೆಡೆ ಮಂಗಳವಾರ ಸಂಜೆ ಸಾಧಾರಣ ಸುರಿಯಿತು.

ಅಯ್ಯನಗುಡಿ, ಖಾನೀಕೇರಿ ಗ್ರಾಮಗಳಲ್ಲಿ ಮಣ್ಣಿನ ಮನೆಗಳಲ್ಲಿ ಮಳೆ ನೀರು ಸೋರಿದೆ. ತೊಗರಿ ಹೊಲಗಳಲ್ಲಿ ನೀರು ನಿಂತಿದ್ದರಿಂದ ಸಿಡಿ ಹಾಯುವ ಆತಂಕ ಕೆಲ ರೈತರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.