ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಮುಂಬೈನ ರೂಪದರ್ಶಿಗೆ ವಂಚಿಸಿದ ಆರೋಪದಡಿ ಕಿರುತೆರೆ ನಟ ಕಿರಣ್ ರಾಜ್ (23) ಅವರನ್ನು ರಾಜರಾಜೇಶ್ವರಿನಗರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
‘ಕಿನ್ನರಿ’ ಧಾರಾವಾಹಿಯಲ್ಲಿ ಅಭಿನಯಿಸಿರುವ ಕಿರಣ್ ವಿರುದ್ಧ, ಮರಾಠಿ ಧಾರಾವಾಹಿಯಲ್ಲಿ ನಟಿಸಿರುವ ರೂಪದರ್ಶಿಯೊಬ್ಬರು ಸೋಮವಾರ ದೂರು ಕೊಟ್ಟಿದ್ದರು.
‘ನಾನು ಹಾಗೂ ಕಿರಣ್ ಐದು ವರ್ಷಗಳಿಂದ ಪರಿಚಿತರು. ಮಾರ್ಚ್ 28ರಂದು ಬೆಂಗಳೂರಿಗೆ ಬಂದಿದ್ದ ನಾನು, ಆತನ ಮನೆಯಲ್ಲೇ ಉಳಿದುಕೊಂಡಿದ್ದೆ. ಈ ವೇಳೆ ಮದುವೆ ಆಗುವುದಾಗಿ ನಂಬಿಸಿ ಆತ ಲೈಂಗಿಕ ಸಂಪರ್ಕ ನಡೆಸಿದ’ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.
‘ಮರುದಿನ ಬೆಳಿಗ್ಗೆ ಮಾತು ಬದಲಿಸಿದ ಆತ, ಮದುವೆ ಆಗುವುದಿಲ್ಲವೆಂದು ಗಲಾಟೆ ಶುರು ಮಾಡಿದ. ಕಾರಿನಲ್ಲೇ ನಮ್ಮಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಮನಸೋಇಚ್ಛೆ ಹಲ್ಲೆ ನಡೆಸಿ ಹೊರಟು ಹೋದ. ಗಾಯಗೊಂಡ ನಾನು, ಚಿಕಿತ್ಸೆ ಪಡೆಯಲು ಮುಂಬೈಗೆ ಹೋಗಿದ್ದೆ. ಹೀಗಾಗಿ, ದೂರು ಕೊಡುವುದು ತಡವಾಯಿತು’ ಎಂದು ಸಂತ್ರಸ್ತೆ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.