ಚಿತ್ರದುರ್ಗ/ಬಳ್ಳಾರಿ: ಗಣಿ ಚಟುವಟಿಕೆ ಅಗತ್ಯ ವಸ್ತುಗಳ ವ್ಯಾಪ್ತಿಗೆ ಒಳಪಟ್ಟ ಪರಿಣಾಮ ಲಾಕ್ಡೌನ್ ನಡುವೆಯೂ ಕಬ್ಬಿಣ ಮತ್ತು ಉಕ್ಕಿನ ಅದಿರು ಉತ್ಪಾದನೆ ಹಾಗೂ ಸಾಗಣೆ ನಿರಾತಂಕವಾಗಿ ನಡೆಯುತ್ತಿದೆ. ಆದರೆ, ಅದಿರಿನ ಮೌಲ್ಯವರ್ಧಿತ ಉತ್ಪನ್ನಗಳಿಗೆ ಭವಿಷ್ಯದಲ್ಲಿ ಬೇಡಿಕೆ ಕುಸಿಯುವ ಅಳುಕು ಉದ್ಯಮವನ್ನು ಕಾಡುತ್ತಿದೆ.
ಹಿಂದಿನ ವರ್ಷ ಏಕಾಏಕಿ ಘೋಷಣೆಯಾದ ಲಾಕ್ಡೌನ್ ಕಾರಣಕ್ಕೆ ಗಣಿ ಉದ್ಯಮ ಸ್ಥಗಿತಗೊಂಡಿತ್ತು. ಅಗತ್ಯ ವಸ್ತು ವ್ಯಾಪ್ತಿಗೆ ತಂದು ಗಣಿ ಚಟುವಟಿಕೆಗೆ ಅವಕಾಶ ಕಲ್ಪಿಸಿದ್ದರಿಂದ ಎರಡನೇ ಅಲೆಯು ಉದ್ಯಮವನ್ನು ಕಾಡಿದ್ದು ಕಡಿಮೆ.
ಚಿತ್ರದುರ್ಗ ಜಿಲ್ಲೆಯಲ್ಲಿ ವೇದಾಂತ ಸೇಸಾಗೋವಾ ಲಿಮಿಟೆಡ್, ಆರ್.ಪ್ರವೀಣಚಂದ್ರ ಗಣಿ ಕಂಪನಿ ಹಾಗೂ ಜೆಎಸ್ಡಬ್ಲ್ಯು ಕಂಪನಿ ಅದಿರು ಗಣಿಗಾರಿಕೆ ನಡೆಸುತ್ತಿವೆ. ಮೂರೂ ಕಂಪನಿಗಳಿಂದ ಮಾಸಿಕ ಸರಾಸರಿ ಎರಡು ಲಕ್ಷ ಟನ್ ಅದಿರು ಉತ್ಪಾದನೆಯಾಗುತ್ತಿದೆ. ಇ–ಹರಾಜು, ಅದಿರು ಸಾಗಣೆ, ಪರವಾನಗಿಗೆ ಮುಕ್ತ ಅವಕಾಶ ಸಿಕ್ಕಿದೆ.
ಗಣಿ ಸುತ್ತಲಿನ ಗ್ರಾಮದ ಜನರೇ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವುದರಿಂದ ತೊಂದರೆ ಉಂಟಾದಂತಿಲ್ಲ. ಕಾರ್ಮಿಕರನ್ನು ನಿಯಮಿತವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸೋಂಕು ಕಾಣಿಸಿಕೊಂಡವರ ಚಿಕಿತ್ಸೆಗೆ ಪ್ರತ್ಯೇಕವಾಸ ವ್ಯವಸ್ಥೆಗಳನ್ನು ಕಂಪನಿಗಳು ಮಾಡಿವೆ. ಬಳ್ಳಾರಿಯ ಜೆಎಸ್ಡಬ್ಲ್ಯು ಸ್ಟೀಲ್ಸ್ನಲ್ಲಿ ಉತ್ಪಾದನೆ ಶೇ 10ರಿಂದ 15ರಷ್ಟು ಕುಸಿದಿದೆ. ಆದರೆ, ಎಷ್ಟು ಉತ್ಪಾದನೆ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಲು ಸಂಸ್ಥೆ ನಿರಾಕರಿಸಿದೆ.
‘ಉಕ್ಕು ಉತ್ಪಾದನೆಗೆ ಬಳಸುವ ಆಮ್ಲಜನಕವನ್ನು ಕೋವಿಡ್ ನಿರ್ವಹಣೆಗೆ ನೀಡಲಾಗುತ್ತಿದೆ. ಇದರಿಂದಾಗಿ ಸದ್ಯ ಉತ್ಪಾದನೆ ಕುಸಿದಿದೆ. ಆಮ್ಲಜನಕವನ್ನು ಕಾರ್ಖಾನೆಯ ಹೊರಗೆ ಪೂರೈಸುವುದು ನಿಲ್ಲುವವವರೆಗೂ ಇದೇ ಸ್ಥಿತಿ ಮುಂದುವರಿಯಲಿದೆ’ ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ ಗಣಿ ಕಾರ್ಮಿಕರ ಪರಿಸ್ಥಿತಿಯೂ ಶೋಚನೀಯ ವಾಗಿದೆ. ‘ಎ’ ಮತ್ತು ‘ಬಿ’ ಕೆಟಗರಿಯ ಬಹಳಷ್ಟು ಪ್ರದೇಶದಲ್ಲಿ ಹಾಗೂ ‘ಸಿ’ ಕೆಟಗರಿಯ ಕೆಲವೆಡೆ ಗಣಿಗಾರಿಕೆ ನಡೆಯುತ್ತಿದೆ. ಮುಂಚೆ ಇದ್ದ ಕಾರ್ಮಿಕರ ಪೈಕಿ ಹಲವರನ್ನು ಕೆಲಸದಿಂದ ತೆಗೆದು, ಗುತ್ತಿಗೆ ಆಧಾರದಲ್ಲಿ ಹೊಸಬರನ್ನು ನೇಮಿಸಲಾಗಿದೆ.
‘ಕೆಲಸ ಕಳೆದುಕೊಂಡು ಹೊರ ಜಿಲ್ಲೆಗಳಿಗೆ ಗುಳೆ ಹೋಗಿದ್ದ ಕಾರ್ಮಿಕರು ಕೋವಿಡ್ ಮೊದಲ ಅಲೆಯ ಅಂತ್ಯದಲ್ಲಿ ವಾಪಸಾಗಿದ್ದರು. ಎರಡನೇ ಅಲೆ ಬಂದು ಎಲ್ಲರೂ ಸಾಲಗಾರರಾಗಿದ್ದಾರೆ. ಸ್ತ್ರೀಶಕ್ತಿ ಸಂಘಗಳಿಂದ ಪಡೆದ ಸಾಲವನ್ನು ತೀರಿಸಲೂ ಆಗುತ್ತಿಲ್ಲ’ ಎಂದು ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರ ಸಂಘದ ಅಧ್ಯಕ್ಷ ವೈ.ಗೋಪಿನಾಥ್ ಅಳಲು ತೋಡಿಕೊಂಡರು.
ಇವನ್ನೂ ಓದಿ
*ಒಳನೋಟ: ಕೈಗಾರಿಕೆಗಳಿಗೆ ಪೆಟ್ಟು ನೀಡಿದ ಕೋವಿಡ್ ಎರಡನೇ ಅಲೆ; ಉತ್ಪಾದನೆ ಸ್ಥಗಿತ
*ಒಳನೋಟ: ಲಾಕ್ಡೌನ್ ಪರಿಣಾಮ; ನೆಲಕಚ್ಚಿದ ಗೊಂಬೆ ಉದ್ಯಮ
*ಒಳನೋಟ: ಲಾಕ್ಡೌನ್ ಪರಿಣಾಮ; ಬೀಡಿ ಸುತ್ತುವ ಕೈಗಳಿಗೆ ಪೂರ್ಣ ಉದ್ಯೋಗವಿಲ್ಲ!
*ಒಳನೋಟ: ಲಾಕ್ಡೌನ್ ಕಾರಣ ಕಾರ್ಮಿಕರ ಕೊರತೆ; ಸಿಮೆಂಟ್ ಉತ್ಪಾದನೆ ಶೇ 50ರಷ್ಟು ಕಡಿತ
*ಒಳನೋಟ: ಗಾರ್ಮೆಂಟ್ಸ್ ಉದ್ಯಮಕ್ಕೆ ಕೋವಿಡ್ ಬರೆ
*ಒಳನೋಟ: ಜೀವ ಉಳಿಸಲೆಂದು ಜಾರಿಗೊಳಿಸಿದ ಲಾಕ್ಡೌನ್ ಉದ್ಯಮಕ್ಕೆ ಉರುಳು
*ಒಳನೋಟ: ಆಟೊಮೊಬೈಲ್ ಉದ್ಯಮಕ್ಕೆ ಲಾಕ್ಡೌನ್ ಪೆಟ್ಟು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.