‘ಹಿಂದಿ ದಿನ’ ಆಚರಣೆಯ ಪರವಾದ ಆರ್.ವೆಂಕಟರಾಜು ಅವರ ಅಭಿಪ್ರಾಯ (ವಾ.ವಾ., ಸೆ. 16 ) ಪೂರ್ವಗ್ರಹಪೀಡಿತವಾಗಿದೆ. ಇಂಗ್ಲಿಷ್ನ ಅನಿವಾರ್ಯ ಮತ್ತು ಹಿಂದಿ ಹೇರಿಕೆಯ ವಸ್ತುಸ್ಥಿತಿಯನ್ನು ಅರಿಯದ ಸಂಸ್ಕೃತಿ ವ್ಯಾಮೋಹವನ್ನು ತೋರಿಸುತ್ತದೆ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಸಾಹಿತ್ಯ, ಶಿಕ್ಷಣ, ರಾಜಕೀಯ, ಸಂಪರ್ಕ, ಸಾರಿಗೆ, ಮುದ್ರಣ, ವಿದ್ಯುತ್, ಅಂತರ್ಜಾಲ- ಹೀಗೆ ನಾನಾ ಕ್ಷೇತ್ರಗಳಲ್ಲಿ ಇಂಗ್ಲಿಷ್ನ ಪದಗಳು ನಮ್ಮ ದಿನನಿತ್ಯ ಜೀವನದ ಭಾಗವಾಗಿ ಹೋಗಿರುವಾಗ ಇಂಗ್ಲಿಷ್ ಪದಗಳ ಬಳಕೆಯನ್ನು ಅನ್ಯ ಸಂಸ್ಕೃತಿಯ ಮೈಲಿಗೆ ಎಂಬಂತೆ ಭಾವಿಸುವುದು ಎಷ್ಟರಮಟ್ಟಿಗೆ ಉಚಿತ ಎಂದು ಪ್ರಶ್ನಿಸಿಕೊಳ್ಳಬೇಕಲ್ಲವೇ?
ಭಾರತದ ಪ್ರಧಾನಿ ಗದ್ದುಗೆಗೆ ಏರಿದ ಕನ್ನಡಿಗ ಎಚ್.ಡಿ.ದೇವೇಗೌಡರು ಹಿಂದಿ ಬಾರದ ಕಾರಣಕ್ಕೆ ಮೂದಲಿಕೆಗೆ ಒಳಗಾದರು ಎಂದು ಅವರು ಭಾವಿಸುವ ಸಂದರ್ಭವು ನಮ್ಮ ಸ್ವಾಭಿಮಾನವನ್ನು ಕೆಣಕಬೇಕೇ ಹೊರತು ದೀನತನದ ಭಾವನೆಯನ್ನು ಉಂಟು ಮಾಡಬಾರದು. ಹಿಂದಿ ಹೇರಿಕೆಗೆ ವಿರೋಧ ಒಂದು ದಿನದ ಹಿಂದಿ ದಿನಾಚರಣೆಗೆ ಸಂಬಂಧಿಸಿದ್ದಲ್ಲ. ಯುಪಿಎಸ್ಸಿ ನೇಮಕಾತಿ, ಬ್ಯಾಂಕಿಂಗ್ ಪರೀಕ್ಷೆ, ನೀಟ್, ಕರ್ನಾಟಕದಲ್ಲಿನ ಕೇಂದ್ರ ಸರ್ಕಾರಿ ಕಚೇರಿಗಳು, ಬ್ಯಾಂಕುಗಳಲ್ಲಿ ಪ್ರಾದೇಶಿಕ ಭಾಷೆಯ ಕಡೆಗಣನೆ, ಕೆಲವು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಮಾತನಾಡಿದರೆ ಮಕ್ಕಳಿಗೆ ದಂಡ ಹಾಕುವುದು (ಹಿಂದಿ ಮಾತಾಡಿದರೆ ದಂಡ ಇಲ್ಲ) ಮುಂತಾದ ಅನೇಕ
ಸಂದರ್ಭಗಳಲ್ಲಿ ಹಿಂದಿ ಹೇರಿಕೆ ಆಗುತ್ತಿದೆ. ನೆನಪಿರಲಿ: ಕನ್ನಡಿಗರು ಹಿಂದಿಯನ್ನು ದ್ವೇಷಿಸುವುದಿಲ್ಲ, ಆದರೆ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಾರೆ. ಏಕೆಂದರೆ ನಾವೂ ಬದುಕಿ ಉಳಿಯಬೇಕಲ್ಲ!
ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.