ಮಳೆ ಮುನ್ಸೂಚನೆಯಲ್ಲಿ ನಿಖರತೆ ಇಲ್ಲದೆ ಕೃಷಿ ಬೆಳೆ ನಾಶವಾಗುತ್ತಿರುವುದನ್ನು ಡಾ. ಎಚ್.ಆರ್.ಕೃಷ್ಣಮೂರ್ತಿ ವಿವರಿಸಿದ್ದಾರೆ (ಪ್ರ.ವಾ., ಆ. 26). ಕರ್ನಾಟಕದಲ್ಲಿ ಶೇ 70ರಷ್ಟು ಕೃಷಿ ಪ್ರದೇಶ ಮಳೆಯನ್ನೇ ಅವಲಂಬಿಸಿದೆ. ಮಳೆ ವಿಜ್ಞಾನ ಕಳೆದ 100 ವರ್ಷಗಳಿಂದಲೂ ನಿಖರತೆ ಇಲ್ಲದೆ ಕೃಷಿಗೆ ಹೊಡೆತ ನೀಡಿದೆ. ಮಳೆ ಪ್ರಮಾಣ, ಮಳೆ ಬಜೆಟ್ ಬಗ್ಗೆ ರೈತರು, ವಿದ್ಯಾರ್ಥಿಗಳು, ಆಡಳಿತಗಾರರಿಗೆ ಸರಿಯಾದ ಜ್ಞಾನ ಇಲ್ಲ.
ಕೆಲವೆಡೆ ಮಳೆಯು ಬೆಳೆ ಇಲ್ಲದ ಸಮಯದಲ್ಲಿ ಬಿದ್ದು ನಷ್ಟವಾಗುತ್ತದೆ, ಹರಿದು ಹೋಗಿ ನಷ್ಟವಾಗುತ್ತದೆ ಹಾಗೂ ಆವಿಯಾಗಿ ನಷ್ಟವಾಗುತ್ತದೆ. ಅದು ಬಿಟ್ಟರೆ ಉಳಿಯುವ ಸ್ವಲ್ಪವೇ ಮಳೆ ನೀರಿನಿಂದ ಬೆಳೆ ಉತ್ಪಾದನೆ ಕುಂಠಿತವಾಗುತ್ತದೆ. ವಾರ್ಷಿಕ ಬೆಳೆಗಳಾದ ರಾಗಿ, ಜೋಳ, ನೆಲಗಡಲೆಯು ಮಳೆ ಜ್ಞಾನ ಇಲ್ಲದೆ ನಾಶವಾಗುತ್ತವೆ. ಆದರೆ ಮರಗಳಾದ ಮಾವು, ನೇರಳೆ, ಹಲಸು, ಹುಣಸೆ ಮಳೆ ನಿಖರತೆ ಇಲ್ಲದೆ ಇದ್ದರೂ ನಾಶವಾಗದೆ ರೈತರನ್ನು ಕಾಪಾಡುತ್ತವೆ. ಮನೆ ಮೇಲೆ ಬಿದ್ದ ಮಳೆ ನೀರು ಮನೆಯಲ್ಲಿ, ಹೊಲದ ನೀರು ಹೊಲದಲ್ಲಿ, ಹಳ್ಳಿ ನೀರನ್ನು ಹಳ್ಳಿಯಲ್ಲಿ ಸಂಗ್ರಹಿಸಿ, ಸಂರಕ್ಷಿಸಿ ಜಾಣ್ಮೆಯಿಂದ ಬಳಸುವುದರಿಂದ ಮಳೆ ಜ್ಞಾನದ ಶೂನ್ಯತೆ ಹೋಗಲಾಡಿಸಬಹುದು.
ಡಾ. ಎಚ್.ಆರ್.ಪ್ರಕಾಶ್,ಮಂಡ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.