ಬೆಂಗಳೂರು: ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲ. ಹೇಗೆ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
‘ಗೋವಾದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದ್ದ ಕಾಂಗ್ರೆಸ್ಗೆ ಸರ್ಕಾರ ರಚಿಸಲು ಬಿಜೆಪಿ ಅವಕಾಶ ನೀಡಲಿಲ್ಲ. ಅಧಿಕಾರ ದಾಹದಿಂದ ಬಿಜೆಪಿ ಕುತಂತ್ರ ನಡೆಸುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರು ಅವಕಾಶ ಮಾಡಿಕೊಟ್ಟರೆ, ನಾವು ಯಾವುದೇ ರೀತಿ ಪ್ರತಿಭಟನೆ ನಡೆಸುವುದಿಲ್ಲ. ಆದರೆ, ಬಿಜೆಪಿ ವಾಮಮಾರ್ಗ ಅನುಸರಿಸಬಹುದು. ಅದನ್ನು ತಡೆಯಲು ಕ್ರಮ ವಹಿಸುತ್ತೇನೆ. ಪ್ರಮಾಣಿಕವಾಗಿ ಶಕ್ತಿ ಇದ್ದರೆ ಅವರು ಬಹುಮತ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.
ಇಂಥ ಸಂದರ್ಭದಲ್ಲಿ ಶಾಸಕರು ಒಟ್ಟಾಗಿ ಇರಬೇಕಾಗುತ್ತದೆ. ಆದರೆ, ಎಲ್ಲಿ ಹೋಗಬೇಕು, ಇರಬೇಕು ಎಂಬುದರ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದರು.
ಸ್ವತಂತ್ರ ಕಸಿಯುತ್ತಿದೆ ಬಿಜೆಪಿ
ಬಿಜೆಪಿ ವೈಯಕ್ತಿಕ ಸ್ವತಂತ್ರವನ್ನು ಕಿತ್ತುಕೊಂಡಿದೆ. ಫೋನ್ಗಳು ಟ್ಯಾಪ್ ಮಾಡಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ಫೋನ್ ಟ್ಯಾಪ್ ಮಾಡಿ ಹಣ ವಸೂಲಿಗೆ ಇಳಿದಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕ, ಕನ್ನಡ ನಾಡಿನ ಜನತೆ...
ಜನತೆ ತೆಗೆದುಕೊಂಡ ನಿರ್ಧಾರ ಏನು? ನನ್ನನ್ನು ನಿರಾಕರಿಸಲು ಕಾರಣ ಏನು? ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೇನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.