ADVERTISEMENT

ಸಹನಟಿ ಆತ್ಮಹತ್ಯೆ: ಚಿಕ್ಕಮಗಳೂರಿನಲ್ಲಿ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 20:28 IST
Last Updated 7 ಜೂನ್ 2020, 20:28 IST
   

ಬೆಂಗಳೂರು: ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಿರುತೆರೆ ಸಹನಟಿ ವಿ.ಕೆ. ಚಂದನಾ (29) ಎಂಬುವರ ಆತ್ಮಹತ್ಯೆ ಸಂಬಂಧ, ಅವರ ಪ್ರಿಯಕರ ಎನ್ನಲಾದ ದಿನೇಶ್ (31) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ತಾವರಕೆರೆ ಮುಖ್ಯರಸ್ತೆಯ ಕೃಷ್ಣಮೂರ್ತಿ ಲೇಔಟ್‌ನಲ್ಲಿರುವ ಮನೆಯಲ್ಲಿ ವಾಸವಿದ್ದ ಚಂದನಾ, ಮೇ 30ರಂದು ಲೈವ್ ವಿಡಿಯೊ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದರು. ವಿಡಿಯೊ ಆಧರಿಸಿ ಸಂಬಂಧಿಕರು ದೂರು ನೀಡಿದ್ದರು. ಆರೋಪಿ ದಿನೇಶ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಆರೋಪಿ, ಚಿಕ್ಕಮಗಳೂರಿನಲ್ಲಿರುವ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದ. ಸಂಬಂಧಿಕರ ಮನೆಯಲ್ಲಿ ಆತನನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದು ಹೆಚ್ಚಿನ ಮಾಹಿತಿ ಕಲೆಹಾಕಬೇಕಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ತನ್ನನ್ನು ಪ್ರೀತಿಸುತ್ತಿದ್ದ ದಿನೇಶ್, ಮದುವೆಯಾಗುವುದಾಗಿ ಹೇಳಿ ಲೈಂಗಿಕವಾಗಿ ಬಳಸಿಕೊಂಡು ಗರ್ಭಪಾತ ಮಾಡಿಸಿದ್ದಾಗಿ ಚಂದನಾ ದೂರಿದ್ದರು. ₹ 5 ಲಕ್ಷ ಪಡೆದು ವಂಚಿಸಿದ್ದನೆಂದೂ ಆರೋಪಿಸಿದ್ದರು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.