ADVERTISEMENT

‘ಕೆರೆ ಅಭಿವೃದ್ಧಿ ಹೊಣೆ ಕೇಂದ್ರವೇ ವಹಿಸಿಕೊಳ್ಳಲಿ’

ಲೋಕಸಭೆಯಲ್ಲಿ ಸಂಸದ ಪಿ.ಸಿ. ಮೋಹನ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 19:52 IST
Last Updated 25 ಜೂನ್ 2019, 19:52 IST
   

ನವದೆಹಲಿ: ಕಲುಷಿತಗೊಂಡಿರುವ ಬೆಂಗಳೂರಿನ ಕೆರೆಗಳ ಅಬಿವೃದ್ಧಿ ಮತ್ತು ನಿರ್ವಹಣೆಯ ಹೊಣೆಯನ್ನು ಕೇಂದ್ರ ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್‌ ಆಗ್ರಹಿಸಿದರು.

ಲೋಕಸಭೆಯಲ್ಲಿ ಮಂಗಳವಾರ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಅವರು ಮಾತನಾಡಿದರು.

‘ಕೆರೆಗಳ ನಗರ’ ಎಂದೇ ಹೆಸರಾ ಗಿರುವ ಬೆಂಗಳೂರಿನಲ್ಲಿ ಇರುವ ಬಹುತೇಕ ಕೆರೆಗಳು ಒತ್ತುವರಿಯಾ ಗಿದ್ದು, ಉಳಿದಿರುವ ಕೆಲವೇ ಕೆರೆ ಗಳು ಕಲುಷಿತಗೊಂಡಿವೆ. ಜನತೆಗೆ ಕುಡಿಯಲು ಕಲುಷಿತ ನೀರು ದೊರೆ ಯುವಂತಾಗಿದೆ. ಕೆರೆಗಳ ಪುನರುಜ್ಜೀವನಕ್ಕಾಗಿ ಕೇಂದ್ರವು ಅನುದಾನ ಬಿಡುಗಡೆ ಮಾಡಿದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯವಹಿಸಿದೆ ಎಂದು ಅವರು ದೂರಿದರು.

ADVERTISEMENT

ಬೆಂಗಳೂರಿನ ಬೆಳ್ಳಂದೂರು ಕೆರೆ ಕಲುಷಿತಗೊಂಡು ನೊರೆ ಕಾಣಿಸಿಕೊಂಡಿತ್ತು. ಹೊರ ರಾಜ್ಯಗಳಿಂದ ಬಂದ ಜನರು ರಾಸಾಯನಿಕಯುಕ್ತ ನೊರೆಯನ್ನು ಕಂಡು ಬಹುಶಃ ಅದು ಹಿಮ ಎಂದೇ ಭಾವಿಸಿದ್ದರು. ಆದರೂ ರಾಜ್ಯ ಸರ್ಕಾರ ಕೆರೆಯ ಪುನಶ್ಚೇತನಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಕೂಡಲೇ ಕೇಂದ್ರ ಸರ್ಕಾರ ಬೆಂಗಳೂರಿನಕೆರೆಗಳನ್ನು ತನ್ನ ಸುಪರ್ದಿಗೆ ಪಡೆದು ಅಭಿವೃದ್ಧಿಪಡಿಸಬೇಕು ಎಂದು ಕೋರಿದರು.

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಅಧಿಕವಾಗಿದ್ದು, ಜನಜೀವನವನ್ನೇ ತಲ್ಲಣಗೊಳಿಸಿದೆ. ಸಾರಿಗೆ ಸೌಲಭ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಉಪನಗರ ರೈಲು ಯೋಜನೆ ಆರಂಭಿಸಲು ಕೇಂದ್ರ ₹ 17 ಕೋಟಿ ಅನುದಾನ ಒದಗಿಸಿದರೂ ರಾಜ್ಯ ಸರ್ಕಾರ ಆಸಕ್ತಿ ತಾಳಿಲ್ಲ ಎಂದು ಅವರು ಟೀಕಿಸಿದರು.

ನಿತ್ಯವೂ ಅಂದಾಜು 35 ಲಕ್ಷ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉಪನಗರ ರೈಲು ಯೋಜನೆ ಪೂರ್ಣಗೊಳಿಸಲು ಕೇಂದ್ರ ಸರ್ಕಾರವೇ ಮುಂದಾಗಬೇಕು. ಕೆರೆಗಳ ಅಭಿವೃದ್ಧಿಗೆ ಹೆಚ್ಚುವರಿ ಅನುದಾನವನ್ನು ಒದಗಿಸ ಬೇಕು. ಚರಂಡಿ ನೀರು ಶುದ್ಧೀಕರಿಸುವ ಘಟಕಗಳ (ಎಸ್‌ಟಿಪಿ) ಸ್ಥಾಪನೆಗೆ ಅಗತ್ಯವಿರುವ ಅನುದಾನವನ್ನು ಒದಗಿ ಸಬೇಕು ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.