ADVERTISEMENT

ನೊಣಗಳ ಕಾಟ; ದನಗಳಿಗೆ ಸಂಕಟ

ಬೀರಣ್ಣ ನಾಯಕ ಮೊಗಟಾ
Published 17 ಜುಲೈ 2017, 19:30 IST
Last Updated 17 ಜುಲೈ 2017, 19:30 IST
ನೊಣಗಳ ಕಾಟ; ದನಗಳಿಗೆ ಸಂಕಟ
ನೊಣಗಳ ಕಾಟ; ದನಗಳಿಗೆ ಸಂಕಟ   

ಉತ್ತರ ಕನ್ನಡದ ಬಹುತೇಕ ರೈತರು ತಮ್ಮ ಪ್ರಧಾನ ವೃತ್ತಿ ಕೃಷಿಯ ಜೊತೆಗೆ ಉಪ ವೃತ್ತಿಯಾಗಿ ಹೈನುಗಾರಿಕೆಯನ್ನು ರೂಢಿಸಿಕೊಂಡಿದ್ದಾರೆ. ಕೆಲ ರೈತರು ಇದನ್ನೇ ಮುಖ್ಯ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಇಂದಿನ ದಿನಗಳಲ್ಲಿ ಪಶು ಆಹಾರದ ಬೆಲೆ ಸಾಮಾನ್ಯ ರೈತನಿಗೆ ನಿಲುಕದ ಕಾರಣ ದನಗಳನ್ನು ಕೆಲವು ಸಮಯ ಮೇವಿಗಾಗಿ ಕೊಟ್ಟಿಗೆಯಿಂದ ಬಿಡುವುದು ಅನಿವಾರ್ಯ.

ಕೊಟ್ಟಿಗೆಯಿಂದ ಬಿಟ್ಟ ದನಗಳು ಮತ್ತೆ ಮರಳಿ ಕೊಟ್ಟಿಗೆಗೆ ಬರುತ್ತವೊ, ಇಲ್ಲವೊ ಎನ್ನುವ ಆತಂಕ ರೈತರನ್ನು ಕಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಹೆದ್ದಾರಿ ಹಾಗೂ ಇತರೆ ಪ್ರಧಾನ ರಸ್ತೆಗಳಿಗೆ ಹೊಂದಿಕೊಂಡಿರುವ ಹಳ್ಳಿಗಳ ಕೃಷಿಕರು ಹೆಚ್ಚಿನ ಸಂಕಷ್ಟ ಎದುರಿಸುತ್ತಿದ್ದಾರೆ.

ಮಳೆಗಾಲದ ಮಳೆಯೊಡನೆ ದಾಳಿ ಮಾಡಿ ಮಲೆನಾಡಿನ ದನಗಳನ್ನು ಕಾಡುವ ದೊಡ್ಡ ನೊಣಗಳು ದನಗಳ ಪ್ರಾಣಕ್ಕೆ ಕುತ್ತು ತರುತ್ತಿವೆ. ಕೊಟ್ಟಿಗೆಯಲ್ಲಿಂದ ಕೃಷಿಕ ಈ ನೊಣಗಳನ್ನು ಓಡಿಸಲು ಕಂಡುಕೊಂಡ ಎಲ್ಲ ಉಪಾಯಗಳೂ ಕೆಲವು ಗಳಿಗೆ ಮಾತ್ರ ಫಲ ನೀಡುತ್ತವೆ. ಈ ನೊಣಗಳ ಹಿಂಸೆಯಿಂದ ದನಗಳಿಗೆ ಕೊಟ್ಟಿಗೆಯೇ ಶಾಪವಾಗಿ ಪರಿಣಮಿಸಿದೆ.

ADVERTISEMENT

ನೊಣಗಳ ಕಾಟದಿಂದ ಮುಕ್ತಿ ಪಡೆಯಲು ದನಗಳು ರಾತ್ರಿ ಹಗಲೆನ್ನದೆ ಹೆದ್ದಾರಿಯಲ್ಲೇ ಆಶ್ರಯ ಪಡೆಯುತ್ತವೆ. ಹೆದ್ದಾರಿಯ ಮೇಲೆ ವಾಹನಗಳ ಓಡಾಟದಿಂದ ಬಿಸಿ ಹವೆ ಇರುವುದರಿಂದ ನೊಣಗಳ ಕಾಟ ಕಡಿಮೆ. ಆದರೆ ಈ ವಾಹನಗಳೇ ದನಗಳ ಪಾಲಿಗೆ ಕಂಟಕವಾಗಿ ಪರಿಣಮಿಸಿವೆ.

ಯಲ್ಲಾಪುರ ತಾಲ್ಲೂಕಿನ ಬಿಲ್ಲಿಗದ್ದೆಯಲ್ಲಿ ಹೈನುಗಾರಿಕೆ ಮಾಡುತ್ತಿರುವ ವಿನಾಯಕ ನಾಯ್ಕ, ‘ಒಂದೇ ವರ್ಷದಲ್ಲಿ ವಾಹನಗಳಿಗೆ 12 ದನಗಳು ಬಲಿಯಾಗಿವೆ’ ಎಂದು ಹೇಳುತ್ತಾರೆ. ಕೊಟ್ಟಿಗೆಯಲ್ಲಿಯೇ ಎಲ್ಲಾ ದನಗಳನ್ನು ಕಟ್ಟಿ ಸಾಕುವುದು ಕೂಡ ಅಷ್ಟೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ. ಮಲೆನಾಡಿನ ಹೈನೋದ್ಯಮಿಗಳ ಪಾಲಿಗೆ ಈ ನೊಣಗಳ ಸಮಸ್ಯೆ ‘ಇರ್ಬಾಯ ಕಡ್ಗವಿದು, ಹಾಹ್ದತ್ತ ಹದನವಿದೆ’ ಎನ್ನುವಂತೆ ಕಾಡುತ್ತಿದೆ.

ಚಿತ್ರ: ಲೇಖಕರದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.