ADVERTISEMENT

ಬೂದಿಬಾಳೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ಬಾಳೆ ಹಣ್ಣಿನಲ್ಲಿ ಹತ್ತಾರು ಬಗೆಯ ತಳಿಗಳಿವೆ. ಒಂದೊಂದು ಪ್ರದೇಶಕ್ಕೆ ಸೀಮಿತವಾಗಿ ಹಣ್ಣುಗಳಿವೆ. ಉದಾಹರಣೆಗೆ ನಂಜನಗೂಡು ರಸಬಾಳೆ. ನಂಜನಗೂಡು ತಾಲ್ಲೂಕಿನ ಮಣ್ಣಿನ ಗುಣದಿಂದಾಗಿ ಅದಕ್ಕೆ ವಿಶೇಷ ರುಚಿ.
 
ಅದೇ ತಳಿಯ ಬಾಳೆ ಗಿಡವನ್ನು ಬೇರೆ ಕಡೆ ಬೆಳೆದರೂ ಹಣ್ಣು ಅಷ್ಟು ರುಚಿಯಾಗಿರುವುದಿಲ್ಲ. ಪಚ್ಚಬಾಳೆ ಹಾಗೂ ಏಲಕ್ಕಿಬಾಳೆ ಪಟ್ಟಣಗಳಲ್ಲಿ ಹೆಚ್ಚು ಬಳಕೆಯಾಗುವ ಬಾಳೆ. ಕರಾವಳಿ, ಮಲೆನಾಡುಗಳಲ್ಲಿ ಬೆಳೆಯುವ ಬಾಳೆ ಹಣ್ಣುಗಳು ರುಚಿಯಿಂದಾಗಿ ಉಳಿದ ಜಾತಿಯ ಹಣ್ಣುಗಳಿಗಿಂತ ಭಿನ್ನವಾಗಿರುತ್ತವೆ.

ಮಹಾನಗರಗಳ ಜನರಿಗೆ ಗೊತ್ತೇ ಇಲ್ಲದ ಹಲವು ಬಾಳೆ ಹಣ್ಣುಗಳಿವೆ. ಮಲೆನಾಡಿನಲ್ಲಿ ಹೆಚ್ಚಾಗಿ ಬೆಳೆಯುವ ಅನೇಕ ತಳಿಗಳು ಈಗ ಉಳಿದಿಲ್ಲ ಅಥವಾ ರೋಗ ಹಾಗೂ ರೈತರ ನಿರಾಸಕ್ತಿಯಿಂದಾಗಿ ಅವಸಾನದ ಅಂಚಿಗೆ ತಲುಪಿವೆ. ಅಂತಹ ತಳಿಗಳ ಪೈಕಿ ಮಲೆನಾಡಿನ ಬೂದಿ ಬಾಳೆಯೂ ಒಂದು.

ಬೂದಿ ಬಾಳೆಯನ್ನು ಕೆಲವೆಡೆ ಬೂದಬಾಳೆ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಆಷಾಢದ ಮಳೆ ಸಮಯದಲ್ಲಿ ಹೆಚ್ಚಾಗಿ ಹಣ್ಣಾಗುವ ಬೂದಿಬಾಳೆ ಹಣ್ಣಿನ ಸಿಪ್ಪೆಸುಲಿದು ಬಬ್ಬೂದಿಯಲ್ಲಿ (ಬೆಂಕಿ ಇಲ್ಲದ ಬೂದಿ) ಹತ್ತು ನಿಮಿಷ ಇಟ್ಟು ನಂತರ ತಿಂದರೆ ಅದರ ರುಚಿ ದುಪ್ಪಟ್ಟು. ಹಾಗಾಗಿ ಅದಕ್ಕೆ ಬೂದಿಬಾಳೆ ಎಂಬ ಹೆಸರು.

ಉಷ್ಣದಿಂದ ಬರುವ  ಹೊಟ್ಟೆನೋವಿಗೆ ಈ ಬೂದಿ ಬಾಳೆಹಣ್ಣು ದಿವ್ಯಔಷಧ. ಖೇದದ ಸಂಗತಿ ಎಂದರೆ ಮಾರುಕಟ್ಟೆಯಲ್ಲಿ ಈ ಹಣ್ಣಿಗೆ ಬೇಡಿಕೆ ಕಡಿಮೆ. ಹೀಗಾಗಿ ರೈತರು ಇದನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವುದಿಲ್ಲ.

ಈ ಅಪರೂಪದ ಬಾಳೆ ಸಾಗರ ತಾಲ್ಲೂಕಿನ ಹಲವಾರು ತೋಟಗಳಲ್ಲಿ ಇನ್ನೂ ಬೆಳೆಯುತ್ತದೆ. ಕೆಲವು ರೈತರು ಈ ತಳಿಯನ್ನು ಉಳಿಸಿಕೊಂಡಿದ್ದಾರೆ. ಪ್ರತಿಯೊಂದು ತೋಟದಲ್ಲೂ ಒಂದಾದರೂ ಬೂದಿ ಬಾಳೆ ಗಿಡ ಬೆಳೆಸುವ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.