ಹಾನಗಲ್: ಅಲ್ಪಾವಧಿ ಬೆಳೆಗಳನ್ನು ಬೆಳೆದುಕೊಂಡು ಪ್ರತಿ ವರ್ಷ ಸಮಸ್ಯೆ ಎದುರಿಸುತ್ತಿದ್ದ ತಾಲ್ಲೂಕಿನ ದೇಸಾಯಿ ಕಲ್ಲಾಪುರದ ಪುಟ್ಟಪಪ್ ಗಂಗೋಜಿ, ‘ಮರ’ಗಳತ್ತ ಚಿತ್ತ ಹರಿಸಿ ಕೃಷಿಯಲ್ಲಿ ಗೆಲುವು ಕಂಡಿದ್ದಾರೆ.
ಹೌದು, ಈ ಹಿಂದೆ ನಮ್ಮ ಐದು ಎಕರೆಯಲ್ಲಿ ಅಲ್ಪಾವಧಿ ಬೆಳೆಗಳಾದ ಭತ್ತ, ಗೋವಿಜೋಳ ಮತ್ತಿತರ ಹಸರಣಗಿ (ಕಾಳು, ತರಕಾರಿ ಮತ್ತಿತರ ಬೆಳೆಗಳು) ಬೆಳೆಯುತ್ತಿದ್ದೆನು. ಆದರೆ, 10 ವರ್ಷದ ಹಿಂದೆ ಕೊಳವೆಬಾವಿ ಕೊರೆಯಿಸಿ, 2 ಎಕರೆ ಅಡಿಕೆ ತೋಟ ಮಾಡಿದೆ. ಬಳಿಕ ಮತ್ತೊಂದು ಕೊಳವೆ ಬಾವಿ ಕೊರೆಯಿಸಿ, ಅಡಿಕೆ ಬೆಳೆಯನ್ನು ವಿಸ್ತರಿಸಿದೆನು. ಆರಂಭದಲ್ಲಿ ಸವಾಲುಗಳು ಎದುರಾದರು, ಆದರೂ ಎದೆಗುಂದದೆ ಮುಂದುವರಿದೆನು. ಈಗ ‘ಆದಾಯ’ ಕೈ ಹಿಡಿದಿದೆ ಎಂದು ಪುಟ್ಟಪ್ಪ ಸಂತಸ ವ್ಯಕ್ತಪಡಿಸಿದರು.
ಈಗ 4 ಎಕರೆ ಅಡಿಕೆ ತೋಟದ ನಡುವೆಯೇ ಬಾಳೆ, ತೆಂಗು, ದಾಲ್ಚಿನ್ನಿ ಮತ್ತು ಕಾಳು ಮೆಣಸು ಮಿಶ್ರ ಬೆಳೆ ಬೆಳೆಯುತ್ತಿದ್ದೇನೆ. ಮಿಶ್ರ ಬೆಳೆಯೂ ಭರ್ಜರಿ ಆದಾಯ ತರುತ್ತಿದೆ. ಅಲ್ಲದೇ, ಅಡಿಕೆ ಮರಗಳ ತೋಟದ ಸುತ್ತಲೂ ಸಾಗವಾನಿ ಮರ ಬೆಳೆಸಿದ್ದೇನೆ. ಸಾವಯಯ ಗೊಬ್ಬರಕ್ಕೆ ಮೊರೆ ಹೋಗಿದ್ದು, ತೋಟ ನಳನಳಿಸುತ್ತಿದೆ. ಮರಗಳನ್ನು ಬೆಳೆಯಲು ಆರಂಭಿಸಿದ ಬಳಿಕ, ಬದಕೂ ನೆಮ್ಮೆದಿ ಕಂಡಿದೆ ಎಂದು ಖುಷಿ ವ್ಯಕ್ತಪಡಿಸಿದರು.
ಸೆಗಣಿ ಗೊಬ್ಬರವನ್ನು ನೆಚ್ಚಿಕೊಂಡಿದ್ದೇನೆ. ರೈತ ಮರಿಗೌಡ ಪಾಟೀಲ ಸಲಹೆ ಮೇರೆಗೆ ಒಂದು ವರ್ಷದಿಂದ ಅಡಿಕೆ ಗಿಡಗಳಿಗೆ ಜೀವಾಮೃತ ನೀಡುತ್ತಿದ್ದೇನೆ. ಕೃಷಿ ಕೆಲಸಕ್ಕೆ ಪತ್ನಿ ಕಾಶಿಬಾಯಿ ಸಾಥ್ ನೀಡುತ್ತಾರೆ. ವಾರ್ಷಿಕ ₹7 ಲಕ್ಷ ಆದಾಯ ಬರುತ್ತಿದ್ದು, ಬದುಕಿಗೆ ಆರ್ಥಿಕ ಬಲ ತುಂಬಿವೆ. ಮಗ ಎಂಜಿನಿಯರಿಂಗ್ ಓದುತ್ತಿದ್ದಾನೆ ಎಂದು ಅವರು ತಿಳಿಸಿದರು.
‘ಮೊದಲು ಸ್ವಂತ ಜಮೀನು ಜೊತೆಯಲ್ಲಿ 10 ಎಕರೆ ಲಾವಣಿ ಭೂಮಿ ಪಡೆದು ಕೃಷಿ ಮಾಡುತ್ತಿದ್ದೆನು. ಆಗ ಸಾಲದಲ್ಲಿ ಜೀವನ ಸಾಗಿಸುತ್ತಿದ್ದೆನು. ಈಗ ನಾಲ್ಕು ಎಕರೆ ಅಡಿಕೆ, ಒಂದೂವರೆ ಎಕರೆ ಭೂಮಿಯಲ್ಲಿ ಭತ್ತ, ಗೋವಿನಜೋಳ ಬೆಳೆದು ಸಂತೃಪ್ತಿ ಜೀವನ ನಡೆಸುತ್ತಿದ್ದೇನೆ ಎಂದು ಪುಟ್ಟಪ್ಪ ಗಂಗೋಜಿ ಹೆಮ್ಮೆಯಿಂದ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.