ಬೆಂಗಳೂರು: ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯು ವಿದ್ಯುತ್ ಚಾಲಿತ ಈರುಳ್ಳಿ ಕಾಂಡ ಕತ್ತರಿಸುವ ಯಂತ್ರವನ್ನು ಅವಿಷ್ಕರಿಸಿದೆ. ಕೃಷಿ ಉಪಕರಣಗಳ ವಿಭಾಗದ ವಿಜ್ಞಾನಿಗಳಾದ ಡಾ.ಸೆಂಥಿಲ್ ಮತ್ತು ಕೆರೋಲಿನಾ ರತ್ನ ಅವರು ಈ ಯಂತ್ರವನ್ನು ವಿನ್ಯಾಸಗೊಳಿಸಿದ್ದಾರೆ.
‘ಈರುಳ್ಳಿ ಕೊಯ್ಲು ಬಂದ ಮೇಲೆ ಬಿಸಿಲಿನಲ್ಲಿ ಒಣಗಲು ಹಾಕಲಾಗುತ್ತದೆ. ಮೂರು ದಿನಗಳ ನಂತರ ಮಹಿಳೆಯರು ಕೂಡುಗೋಲಿನಿಂದ ಕಾಂಡವನ್ನು ಕತ್ತರಿಸುತ್ತಾರೆ. ಒಂದು ಎಕರೆಗಳ ಈರುಳ್ಳಿ ಕಾಂಡವನ್ನು ಕತ್ತರಿಸಲು ಸುಮಾರು ಒಂದು ವಾರ ಬೇಕಾಗುತ್ತದೆ. ವಿದ್ಯುತ್ ಚಾಲಿತ ಈ ಯಂತ್ರದಿಂದ ಒಂದು ಟನ್ಗೆ ಒಂದು ಘಂಟೆಗಳ ಕಾಲದಲ್ಲಿ ಕಾಂಡವನ್ನು ಕತ್ತರಿಸಬಹುದು” ಎಂದು ಯಂತ್ರದ ವಿನ್ಯಾಸಕಿ ಕೆರೋಲಿನಾ ಹೇಳಿದರು.
‘ಈ ಯಂತ್ರಕ್ಕೆ ಮೂರು ಮೋಟರ್ ಅಳವಡಿಸಲಾಗಿದೆ. ಯಂತ್ರದ ಮೊದಲ ಭಾಗ ಡಿಟಾಪಿಂಗ್. ಇಲ್ಲಿ ಈರುಳ್ಳಿಯನ್ನು ಕಾಂಡ ಸಮೇತ ಹಾಕಬೇಕು. ಡಿಟಾಪಿಂಗ್ ವಿಭಾಗದ ಪಕ್ಕದಲ್ಲಿಯೇ ಸ್ವಿಚ್ ಇದೆ. ಇದರ ಮೂಲಕ ಮೋಟರ್ ವೇಗ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಈರುಳ್ಳಿಯ ಕಾಂಡ ಕತ್ತರಿಸಲು ಎರಡು ಮೋಟಾರುಗಳನ್ನು ಅಳವಡಿಸಲಾಗಿದೆ. ಕತ್ತರಿಸಿದ ಕಾಂಡವು ಯಂತ್ರದ ಮಧ್ಯ ಭಾಗದಿಂದ ಕೆಳಗೆ ಬೀಳುತ್ತದೆ. ಈರುಳ್ಳಿಯು ಯಂತ್ರದ ಕೊನೆಯ ಭಾಗದಲ್ಲಿ ಬಂದು ಬೀಳುತ್ತದೆ. ಅಲ್ಲಿ ಗೋಣಿ ಚೀಲ ಅಥವಾ ಬಕೆಟ್ ಇಟ್ಟು ಈರುಳ್ಳಿ ಸಂಗ್ರಹಿಸಿಬಹುದು’ ಎಂದು ವಿಜ್ಞಾನಿ ಡಾ.ಸೆಂಥಿಲ್ ಹೇಳಿದರು.
ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯ ನಿರ್ದೇಶಕರಾದ ಎಂ.ಅರ್. ದಿನೇಶ್ ಅವರು, ‘ರೈತರು ಈ ಯಂತ್ರಗಳ ಸಹಾಯದಿಂದ ಕೃಷಿ ಮಾಡಿದರೆ ಹಣ ಮತ್ತು ಸಮಯ ಎರಡನ್ನು ಉಳಿಸಬಹುದು’ ಎಂದರು.
ಯಂತ್ರದ ಬಗ್ಗೆ ಮಾಹಿತಿಗಾಗಿ:- 9483519724
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.