ADVERTISEMENT

ಉದಯೋನ್ಮುಖ ಕಲಾವಿದರ 'ವೈಬ್ರೇಷನ್'

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST
ಉದಯೋನ್ಮುಖ ಕಲಾವಿದರ 'ವೈಬ್ರೇಷನ್'
ಉದಯೋನ್ಮುಖ ಕಲಾವಿದರ 'ವೈಬ್ರೇಷನ್'   

ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಉತ್ತರ ಭಾರತದ ಉದಯೋನ್ಮುಖ ಚಿತ್ರಕಲಾವಿದರ ಸಮೂಹ ಚಿತ್ರಕಲಾ ಪ್ರದರ್ಶನ `ವೈಬ್ರೇಷನ್' ಆರಂಭವಾಗಿದ್ದು ಜೂ.27 ಪ್ರದರ್ಶನದ ಕಡೆಯ ದಿನವಾಗಿದೆ.

ಜೂಹಿ ಶುಕ್ಲಾ, ಕಿಶನ್ ಸೋನಿ, ಮಧುಪ್ರಿಯಾ, ಮನೋಜ್ ಸಿಂಗ್, ಮೋನಿಕಾ ಸರೋಚ್, ಮಸ್ತಜಬ್ ಶೆಲ್ಲೆ, ನವ್ಕಾಸ್ ಶರ್ಮಾ, ನಿಖಿಲ್ ಸುಖ್‌ದೇವ್ ಗಿರಿ, ರಾಜ್ ಕುಮಾರ್ ಸಿಂಗ್, ರಾಜೀವ್ ಕುಮಾರ್ ಗುಪ್ತಾ, ಸಂದೀಪ್ ಕುಮಾರ್ ಶಕ್ಯ, ಸಂಜಯ್ ಕುಮಾರ್ ಗುಪ್ತಾ, ರುನಾ ಶೆಲೀನಾ ಬಾನು, ಸುಹಾನಿ ಜೈನ್, ವಿಶಾಲ್ ಶರ್ಮಾ ಮುಂತಾದವರ ಜಲವರ್ಣ, ತೈಲ ವರ್ಣ ಮತ್ತು ಅಕ್ರಿಲಿಕ್ ಮಾಧ್ಯಮದ ರಚನೆಗಳು ಪ್ರದರ್ಶನದಲ್ಲಿವೆ.

ಅನೇಕ ಕಲಾವಿದರ ಚಿತ್ರಗಳು ಒಂದೇ ಕಡೆ ಪ್ರದರ್ಶನಗೊಳ್ಳುತ್ತಿರುವುದರಿಂದ ನೋಡುಗರಿಗೆ ವಿಭಿನ್ನ ಅನುಭವ ನೀಡುತ್ತಿದೆ. ವಸ್ತು ಮತ್ತು ಬಣ್ಣಗಳ ಬಳಕೆಯಲ್ಲಿ ವೈವಿಧ್ಯತೆ ಇದೆ. ಇಡೀ ಪ್ರದರ್ಶನದಲ್ಲಿ ಉತ್ತರಭಾರತದ ಸಂಸ್ಕೃತಿ, ಜನಜೀವನ ಅನಾವರಣಗೊಂಡಿದೆ.

ಯುವ ಕಲಾವಿದ ನವ್ಕಾಸ್ ಶರ್ಮಾ ಮತ್ತು ಸಂದೀಪ್ ಕುಮಾರ್ ಶಕ್ಯ ಅವರ ರಚನೆಗಳು ವಿಭಿನ್ನವಾಗಿದ್ದು ಬಣ್ಣಗಳ ವಿನ್ಯಾಸದಿಂದ ಗಮನ ಸೆಳೆಯುತ್ತವೆ.

ಸುಹಾನಿ ಜೈನ್ ಅವರ `ಲೈಫ್ ಸ್ಪಟ್ ಎ ವುಮೆನ್' ಚುಕ್ಕಿ ಮತ್ತು ಹಸೆ ಚಿತ್ತಾರಗಳ ಮಾದರಿಯ ಸೂಕ್ಷ್ಮ ಕುಸುರಿಯಿಂದ ಆಕರ್ಷಿಸುತ್ತಿವೆ. ಮಹಿಳೆಯ ವಸ್ತುವುಳ್ಳ ಕಲಾಕೃತಿಗಳು ಸುಹಾನಿ ಅವರ ವಿಶೇಷತೆ.

ಎಲ್ಲರೂ ಯುವ ಕಲಾವಿದರಾದ್ದರಿಂದ ಕಲಾಕೃತಿಯಲ್ಲಿ ಆಧುನಿಕ ವಸ್ತು-ವಿಷಯ ಸಹಜವಾಗಿಯೇ ಅಭಿವ್ಯಕ್ತಿಗೊಂಡಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.