ADVERTISEMENT

`ಗುರು ಪ್ರೀತಿ'ಗೆ ಶಾಲೆ

ನಾದದ ಬೆನ್ನೇರಿ...

​ಪ್ರಜಾವಾಣಿ ವಾರ್ತೆ
Published 5 ಜೂನ್ 2013, 19:59 IST
Last Updated 5 ಜೂನ್ 2013, 19:59 IST
ಪಂ.ರಾಮಭಾವು ಬಿಜಾಪುರೆ ಮತ್ತು ರವೀಂದ್ರ ಕಾಕೋಟಿ
ಪಂ.ರಾಮಭಾವು ಬಿಜಾಪುರೆ ಮತ್ತು ರವೀಂದ್ರ ಕಾಕೋಟಿ   

`ಗುರು-ಶಿಷ್ಯರ ಸಂಬಂಧ ಸಂಗೀತ ಕಲಿಕೆಯ ಅವಧಿಗಷ್ಟೇ ಸೀಮಿತವಾಗಿರಬಾರದು. ಅದನ್ನು ಬದುಕಿನುದ್ದಕ್ಕೂ ಉಳಿಸಿಕೊಳ್ಳಬೇಕು' ಇದು ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ್ ಅವರ ಮಾತಾಗಿತ್ತು. ಇದನ್ನು ಚಾಚೂ ತಪ್ಪದೆ ಪಾಲಿಸುವವರ ಸಂಖ್ಯೆ ವಿರಳ. ಆದರೆ ಹಾರ್ಮೋನಿಯಂನಲ್ಲಿ ಮೇರು ಕಲಾವಿದರಾಗಿದ್ದ ಪಂ.ರಾಮಭಾವು ಬಿಜಾಪುರೆ ಅವರ ಹಿರಿಯ ಶಿಷ್ಯರಾದ ಪಂ.ರವೀಂದ್ರ ಕಾಟೋಟಿ ಅವರ ಗುರು ಪ್ರೀತಿ, ಭಕ್ತಿಯನ್ನು ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. 

ಪಂ. ಕಾಟೋಟಿ ತಮ್ಮ ಗುರುವಿನ ಸಾಧನೆಯನ್ನು ಚಾಚೂ ತಪ್ಪದೆ ಪಾಲಿಸಿ ಒಲಿಸಿಕೊಂಡದ್ದು, ಗುರುವಿನ ಹೆಸರಿನಲ್ಲೇ `ಬಿಜಾಪುರೆ ಹಾರ್ಮೋನಿಯಂ ಪ್ರತಿಷ್ಠಾನ' ಆರಂಭಿಸಿದ್ದು, ಗುರು ಬಗ್ಗೆ `ಮೇರು' ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದು, ಗುರುವಿನ ಜೀವನಚರಿತ್ರೆ `ಸ್ವರ ಯಾನ' ಎಂಬ ಪುಸ್ತಕ ಬಿಡುಗಡೆ ಮಾಡಿದ್ದು, ಗುರುವಿನ ಮಾದರಿಯಲ್ಲೇ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವುದು ಇವೆಲ್ಲವನ್ನೂ ನೋಡಿದಾಗ `ಈ ಪರಿಯ ಗುರು ಪ್ರೀತಿ..' ಎನ್ನದೆ ಇರಲು ಸಾಧ್ಯವೇ?

ಹಾರ್ಮೋನಿಯಂನಲ್ಲಿ ವಿಶಿಷ್ಟ, ಹೊಸ ಹೊಸ ಪ್ರಯೋಗಗಳನ್ನು ಮಾಡಿ ನಾಡಿನಾದ್ಯಂತ ಸಾವಿರಾರು ಶಿಷ್ಯಂದಿರಿಗೆ ಈ ವಿದ್ಯೆಯನ್ನು ಧಾರೆಯೆರೆದ ಅಪರೂಪದ ಕಲಾವಿದರಾಗಿದ್ದವರು ಪಂ. ರಾಮಭಾವು ಬಿಜಾಪುರೆ. ತಮ್ಮ ಜೀವಿತಾವಧಿಯಲ್ಲಿ ದೇಶದ ಹಲವಾರು ಹಿರಿಯ ಮತ್ತು ಖ್ಯಾತ ಗಾಯಕರಿಗೆ ಹಾರ್ಮೋನಿಯಂ ಸಾಥಿ ನೀಡಿದ ಹೆಗ್ಗಳಿಕೆ ಇವರದಾಗಿತ್ತು. ಉಸ್ತಾದ್ ಅಬ್ದುಲ್ ಕರೀಮ್‌ಖಾನ್ ಸಾಹೇಬ್ ಅವರಿಂದ ಆರಂಭಗೊಂಡು ಹಲವು ಖ್ಯಾತನಾಮರ ಗಾಯನಕ್ಕೆ ಒಪ್ಪುವಂತೆ ಹಾರ್ಮೋನಿಯಂನಲ್ಲಿ ಗಾನದ ಎಳೆಎಳೆಯನ್ನೂ ಮಧುರವಾಗಿ ಪ್ರಸ್ತುತಪಡಿಸುತ್ತಿದ್ದವರು ಬಿಜಾಪುರೆ.

1917ರಿಂದ 2010ರವರೆಗಿನ 93 ವರ್ಷಗಳ ಜೀವಿತಾವಧಿಯಲ್ಲಿ ಹಾರ್ಮೋನಿಯಂನೊಂದಿಗೆ ನಿರಂತರ ಪ್ರಯೋಗಗಳನ್ನು ಮಾಡಿದ ಈ ಮಹಾನ್ ಕಲಾವಿದ ರಾಜ್ಯದಲ್ಲಿ ಸಾವಿರಾರು ಶಿಷ್ಯರನ್ನು ಸೃಷ್ಟಿಸಿದ್ದಾರೆ. ಇವರ ಸವಿನೆನಪಿಗಾಗಿ ಪಂ. ರವೀಂದ್ರ ಕಾಟೋಟಿ ಆರಂಭಿಸಿದ `ಬಿಜಾಪುರೆ ಹಾರ್ಮೋನಿಯಂ ಪ್ರತಿಷ್ಠಾನ'ಕ್ಕೆ ಈಗ ಹತ್ತರ ಹರೆಯ.

ಈ ಹಾರ್ಮೋನಿಯಂ ಸಂಸ್ಥೆಯ ವಿಶೇಷ ಎಂದರೆ, ಇಲ್ಲಿ ಹಾರ್ಮೋನಿಯಂ ಅನ್ನು ಸಾಥಿ ವಾದನವಾಗಿ ಪರಿಗಣಿಸದೆ ಸೋಲೊ ವಾದನ ಎಂದೇ ಕಲಿಸುತ್ತಿರುವುದು. ನಮ್ಮ ರಾಜ್ಯ ಅಷ್ಟೇ ಅಲ್ಲ, ದಕ್ಷಿಣ ಭಾರತದಲ್ಲೇ ಒಂದು ವಿಶಿಷ್ಟ ಸಂಸ್ಥೆಯಾಗಿ ರೂಪುಗೊಂಡಿದೆ ಈ ಹಾರ್ಮೋನಿಯಂ ಪ್ರತಿಷ್ಠಾನ. ಹಾರ್ಮೋನಿಯಂ ಅನ್ನು ಸೋಲೊ ಆಗಿ, ಜುಗಲ್‌ಬಂದಿಯಲ್ಲಿ, ಸಾರಂಗಿ, ಕೊಳಲು, ಗಿಟಾರ್, ಸಿತಾರ್, ಅಕಾರ್ಡಿಯನ್ ಮುಂತಾದ ಸಂಗೀತ ವಾದ್ಯಗಳ ಜತೆಗೆ ನುಡಿಸುವ ಕಲೆಗಾರಿಕೆ ಅದ್ಭುತ.

2003ರಲ್ಲಿ ಬಸವೇಶ್ವರ ನಗರದಲ್ಲಿ ಆರಂಭವಾದ ಈ ಹಾರ್ಮೋನಿಯಂ ಶಾಲೆಯಲ್ಲಿ ಒಟ್ಟು 25 ವಿದ್ಯಾರ್ಥಿಗಳಿದ್ದಾರೆ. ಪ್ರತಿಯೊಬ್ಬರಿಗೂ ಪ್ರತ್ಯೇಕ ಪಾಠ ಲಭ್ಯ. ಇವರಲ್ಲಿ ಚಿರಾಗ್ ಕಾನಿಟ್ಕರ್, ಸೂರ್ಯ ಉಪಾಧ್ಯಾಯ, ಅನಂತ್ ಭಾಗವತ್, ಮಧುಸೂದನ ಭಟ್, ನೀತಾ ಬೆಳಿಯೂರು, ಕಿಶೋರ್ ಮುತಾಲಿಕ್ ದೇಸಾಯಿ, ರಾಘವೇಂದ್ರ ಹೆಗಡೆ ಸೇರಿದಂತೆ ಒಟ್ಟು 12 ಶಿಷ್ಯರು ಸ್ವತಂತ್ರವಾಗಿ ಕಛೇರಿ, ಸಾಥಿ ಕೊಡುತ್ತಿದ್ದಾರೆ. ಇವರಲ್ಲಿ ಚಿರಾಗ್ ಕಾನಿಟ್ಕರ್‌ಮತ್ತು ಕಿಶೋರ್ ಮುತಾಲಿಕ್ ಈ ಇಬ್ಬರು ಪ್ರತಿಭಾವಂತ ಶಿಷ್ಯರಿಗೆ ಕೇಂದ್ರ ಸರ್ಕಾರ ನೀಡುವ ಸಂಗೀತ ಸ್ಕಾಲರ್‌ಶಿಪ್ ಕೂಡ ಲಭಿಸಿದೆ.

`ಹಾರ್ಮೋನಿಯಂನಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಇದು ಟೈಪ್‌ರೈಟಿಂಗ್ ರೀತಿ ಅಲ್ಲ. ಹಾರ್ಮೋನಿಯಂ ಕೀಗಳ ಮೂಲಕ ಪ್ರತಿಯೊಂದು ಸ್ವರಗಳಿಗೆ ಜೀವ ತುಂಬಬೇಕು. ತಮ್ಮ ಭಾವನೆಗಳನ್ನು ಅದರ ಮುಖಾಂತರ ವ್ಯಕ್ತಪಡಿಸುವುದು ಸುಲಭವಲ್ಲ. ಅದಕ್ಕೂ ಒಂದು ಭಾಷೆಯಿದೆ. ಅದನ್ನು ಅಭಿವ್ಯಕ್ತಿಸುವುದು ಒಂದು ಸವಾಲು. ಇದನ್ನು ಧ್ಯಾನದ ಮೂಲಕ, ಸ್ವರ ತಪಸ್ಸಿನ ಮೂಲಕ ಸಿದ್ಧಿಸಿಕೊಳ್ಳಬೇಕು' ಎಂಬುದು ಪಂ. ಕಾಟೋಟಿ ಕಿವಿಮಾತು.

ವಿಶಿಷ್ಟ ಪ್ರಯೋಗ
ಈ ಪ್ರತಿಷ್ಠಾನ `ಸಮರಸ ಸಂವಾದಿನಿ' ಎಂಬ ವಿಶಿಷ್ಟ ಕಾರ್ಯಕ್ರಮ ನಡೆಸಿತ್ತು. ಇದರಲ್ಲಿ ಗ್ರ್ಯಾಂಡ್ ಪಿಯಾನೊ, ಕರ್ನಾಟಕ ಸಂಗೀತ ಶೈಲಿಯ ಹಾರ್ಮೋನಿಯಂ, ಹಿಂದೂಸ್ತಾನಿ ಹಾರ್ಮೋನಿಯಂ, ಅಕಾರ್ಡಿಯನ್, ಲೆಗ್ ಹಾರ್ಮೋನಿಯಂ ನುಡಿಸಲಾಯಿತು. ಇದು ಅಪರೂಪದ, ವಿಶಿಷ್ಟ ಪ್ರಯೋಗಾತ್ಮಕ ಕಾರ್ಯಕ್ರಮ.

`ದ್ವಾದಶ ಸ್ವರ ಸಂಭ್ರಮ' ಎಂಬುದು ಮತ್ತೊಂದು ಭಿನ್ನ ಕಾರ್ಯಕ್ರಮ. ಇದನ್ನು 2012ರ ಡಿಸೆಂಬರ್ 12 ರಂದು ಆಚರಿಸಲಾಯಿತು. ಇದರಲ್ಲಿ ಒಂದು ಸಪ್ತಕದಲ್ಲಿರುವ 12 ಸ್ವರಗಳಲ್ಲಿ ಒಂದೊಂದೇ ಸ್ವರಗಳನ್ನು ತೆಗೆದುಕೊಂಡು ಅದನ್ನು ಪ್ರತಿಬಿಂಬಿಸುವ ರಾಗವನ್ನು ಆಯ್ದು, ಅದಕ್ಕೆ ಸಂಬಂಧಿಸಿದ ರಚನೆಯನ್ನು ಹಾರ್ಮೋನಿಯಂನಲ್ಲಿ ನುಡಿಸಲಾಯಿತು. ಒಂದೊಂದು ರಾಗವನ್ನು ಒಬ್ಬೊಬ್ಬ ಮಹಾನ್ ಕಲಾವಿದರಿಗೆ ಅರ್ಪಣೆ ಮಾಡಲಾಯಿತು. ಇಲ್ಲಿ 12 ಕಲಾವಿದರು, 12 ರಚನೆಗಳನ್ನು 12 ಸ್ವರದೊಂದಿಗೆ ನುಡಿಸಿದ್ದು ಬಹಳ ವಿಶೇಷವಾಗಿತ್ತು. ಇದನ್ನು ಬಡೆ ಗುಲಾಂ ಅಲಿಖಾನ್, ಭೀಮಸೇನ ಜೋಶಿ, ರಾಮಭಾವು ಬಿಜಾಪುರೆ ಮುಂತಾದ ಹಿರಿಯ ಕಲಾವಿದರಿಗೆ ಅರ್ಪಿಸಲಾಯಿತು. 

ಸಾಧನೆಯ ಹಾದಿಯಲ್ಲಿ
ಕಾಟೋಟಿ ಸಂಗೀತ ಕುಟುಂಬದಲ್ಲಿ ಜನಿಸಿದ್ದು, ತಮ್ಮ ಎಂಟನೇ ವಯಸ್ಸಿಗೆ ಹಾರ್ಮೋನಿಯಂ ಕಲಿಯಲಾರಂಭಿಸಿದರು. ಪಂ. ರಾಮಭಾವು ಬಿಜಾಪುರೆ ಅವರ ಶಿಷ್ಯತ್ವ ಪಡೆದ ಅವರು ನಿರಂತರ ಪರಿಶ್ರಮ, ಸತತ ಸಾಧನೆ, ಶ್ರದ್ಧೆಯಿಂದ ಈ ವಾದನವನ್ನು ಒಗ್ಗಿಸಿಕೊಂಡು ನಾಡಿನ ಹೆಸರಾಂತ ಹಾರ್ಮೋನಿಯಂ ವಾದಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಶಾಲಾ ಕಾಲೇಜು ದಿನಗಳಿಂದಲೇ ಸಂಗೀತ ಸ್ಪರ್ಧೆಗಳಲ್ಲಿ ಮೊದಲಿಗರಾದ ಪಂ. ರವೀಂದ್ರ, ಹಲವು ಪ್ರಶಸ್ತಿ, ಪುರಸ್ಕಾರಗಳಿಗೂ ಭಾಜನರಾದವರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮೂರು ವರ್ಷ ಸ್ಕಾಲರ್‌ಶಿಪ್ ನೀಡಿದೆ. ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಡಾ.ಪಿ.ಸಿ ಅಲೆಕ್ಸಾಂಡರ್ ಇವರನ್ನು ಸನ್ಮಾನಿಸಿದ್ದಾರೆ. ಮಧ್ಯಪ್ರದೇಶ ಸರ್ಕಾರ ಕೊಡುವ `ಸುರ್ ರತ್ನ' ಪ್ರಶಸ್ತಿ ಇವರಿಗೆ ಲಭಿಸಿದೆ. ಇವರ ಅನೇಕ ಕಾರ್ಯಕ್ರಮಗಳನ್ನು ಆಕಾಶವಾಣಿ ದೂರದರ್ಶನ ಪ್ರಸಾರ ಮಾಡಿದೆ.

ಹಿರಿಯ ಸಂಗೀತಗಾರರಾದ ಡಾ. ಗಂಗೂಬಾಯಿ ಹಾನಗಲ್, ಪಂ. ಭೀಮಸೇನ ಜೋಶಿ, ಪಂ. ಜಸ್‌ರಾಜ್, ಪಂ. ಯಶವಂತ ಬುವಾ ಜೋಶಿ ಮುಂತಾದವರ ಗಾಯನಕ್ಕೆ ಹಾರ್ಮೋನಿಯಂ ಸಾಥಿ ನೀಡಿದ ಹೆಗ್ಗಳಿಕೆ ಇವರದು. ಕಳೆದ ಮೂವತ್ತು ವರ್ಷಗಳಿಂದ ಹಾರ್ಮೋನಿಯಂ ನುಡಿಸುತ್ತಿರುವ ರವೀಂದ್ರ, ಸುಮಾರು 30ಕ್ಕೂ ಹೆಚ್ಚು ಹಾರ್ಮೋನಿಯಂ-ಸಾರಂಗಿ ಜುಗಲ್‌ಬಂದಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಸದ್ಯ ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. `ಲರ್ನ್ ಟು ಪ್ಲೇ ಹಾರ್ಮೋನಿಯಂ' ಡಿವಿಡಿ, `ಜರ್ನಿ ಇನ್ ಹಾರ್ಮೋನಿಯಂ', ರಶ್ಮಿ (ಹಾರ್ಮೋನಿಯಂ ಸೋಲೊ), ಮಾನ್ಸೂನ್ ಮೂಡ್ಸ್ ಎಂಬ ಇವರ ಸಂಗೀತದ ಮೂರು ಸಿ.ಡಿ.ಗಳು  ಹೊರಬಂದಿವೆ. 

ವಿಳಾಸ: ಡಾ.ರವೀಂದ್ರ ಕಾಟೋಟಿ, ನಂ. 76/77, ಮೊದಲನೆ ಕ್ರಾಸ್, ಎರಡನೆ ಹಂತ, ಕೆ.ಎಚ್.ಬಿ. ಕಾಲೊನಿ, ಬಸವೇಶ್ವರನಗರ, ಬೆಂಗಳೂರು 79. ಫೋನ್: 9845793012
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.