ADVERTISEMENT

ಧನಂಜಯ ರಾಗಾಲಾಪ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಭಾರತೀಯ ವಿದ್ಯಾಭವನ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಸಂಗೀತ ಕಾರ್ಯಕ್ರಮದಲ್ಲಿ ಯುವ ಗಾಯಕ ಧನಂಜಯ ಹೆಗಡೆ ಹಾಡಿದ ಭಕ್ತಿ ಸಂಗೀತ ಕೇಳುಗರು ತಲೆದೂಗುವಂತಿತ್ತು.

ಅವರು ಮೂಲತಃ ಶಾಸ್ತ್ರೀಯ ಸಂಗೀತಗಾರ. ಹೀಗಾಗಿ ಪ್ರಾರಂಭದಲ್ಲಿ ಸ್ವಲ್ಪ ಹೊತ್ತು ಋತುರಾಗ ಹಾಡಿದರು. ಸುಂದರ ಆಲಾಪ ಹಾಗೂ ಮುಖ ವಿಲಾಸ ಮಾಡಿ ಮಧ್ಯಲಯ ಝಪ್‌ತಾಳದಲ್ಲಿ ಘರಜತ ಹಾಗೂ ಧತ್‌ಲಯದಲ್ಲಿ ಬರಖಾ ಋತು ಚೀಜನ್ನು ಪ್ರಸ್ತುತಪಡಿಸಿದರು.

ನಂತರ ಭಕ್ತಿ ಸಂಗೀತದಲ್ಲಿ ತಾವೇ ಸಂಯೋಜಿಸಿದ (ರಾಗ ಚಾರುಕೇಶಿ) ಪುರಂದರದಾಸರ ಭಜನೆ  `ಹೂವ ತರುವರ ಮನೆಗೆ~ಯನ್ನು ಅತ್ಯಂತ ಅರ್ಪಣಾ ಮನೋಭಾವದಿಂದ ಹಾಡಿದರು. 

`ದಯ ಮಾಡೋ ರಂಗ~, `ಗುರು ರಾಯರ ಭಜನೆ~, `ಭೋ ಯತಿ ವರದೇಂದ್ರ~, ಮರಾಠಿ ಅಭಂಗ `ಸಂತ ಭಾರ ಪಂಡರಿಚ~, ಹಿಂದಿ ಭಜನ್ `ಚಲೋ ಮನ ಗಂಗಾ ಜಮುನಾ ತೀರ~, `ನೀನ್ಯಾಕೋ ನಿನ್ನ ಹಂಗ್ಯಾಕೋ~, `ಮುರಾರಿಯನೇ ಕೊಂಡಾಡೋ~ ಕಾರ್ಯಕ್ರಮದ ಸೊಬಗು ಹೆಚ್ಚಿಸಿತು.
 
ದಾಸರ ಪದ ಹಾಡಿ ನಂತರ ಭೈರವಿ ರಾಗದಲ್ಲಿ `ಭೋಲೀ ಭೋಲೀ ರಾಧಿಕಾ~ ಹಾಡಿ ಮುಗಿಸಿದಾಗ ಶ್ರೋತ್ರಗಳೆಲ್ಲಾ ಭಕ್ತಿ ಭಾವ ಪರವಶರಾಗಿದ್ದರು.

ಶಬ್ದಗಳ ಸ್ಪಷ್ಟ ಉಚ್ಚಾರ, ಸಾಹಿತ್ಯದ ಭಾವ ಪ್ರದರ್ಶನ, ವಿವಿಧ ಲಯವಿನ್ಯಾಸಗಳಲ್ಲಿ ಹಾಡಿದ ಈ ಕಾರ್ಯಕ್ರಮಕ್ಕೆ ಗುರುಮೂರ್ತಿ ವೈದ್ಯರವರ ತಬಲಾ ವಾದನ, ಅಶ್ವಿನ್ ವಾಲ್ವಾಲ್ಕರ್ ಅವರ ಹಾರ್ಮೋನಿಯಂ, ನಾಗೇಂದ್ರ ಭಟ್ ಅವರ ತಾಳವಾದ್ಯ ಅತ್ಯಂತ ಪರಿಪೂರ್ಣವಾಗಿ ಮಿಳಿತವಾಗಿತ್ತು. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.