ADVERTISEMENT

ಮುದ್ರಣ, ಗಂಜೀಫಾ ಕಾರ್ಯಾಗಾರ

ವಿದ್ಯಾಶ್ರೀ ಗಾಣಿಗೇರ
Published 31 ಆಗಸ್ಟ್ 2018, 19:30 IST
Last Updated 31 ಆಗಸ್ಟ್ 2018, 19:30 IST
   

ಕರ್ನಾಟಕ ಚಿತ್ರಕಲಾ ಪರಿಷತ್ತು ಹಾಗೂ ಉನ್ನತ ಶಿಕ್ಷಣ ಇಲಾಖೆಯು ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ಮುದ್ರಣಕಲಾ ಮತ್ತು ಗಂಜೀಫಾ ಕಲಾ ಪ್ರದರ್ಶನದ ಕಾರ್ಯಾಗಾರ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಮಂಗಳವಾರದಿಂದ ಆರಂಭಗೊಂಡಿದ್ದ ಈ ಕಾರ್ಯಾಗಾರದಲ್ಲಿ ರಾಜ್ಯದ ಚಿತ್ರಕಲಾ ಮಹಾವಿದ್ಯಾಲಯ ಕಾಲೇಜುಗಳಿಂದ ತಲಾ ಇಬ್ಬರಂತೆ ಒಟ್ಟು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬೇರೆ ರಾಜ್ಯಗಳಿಂದ 11 ಮಂದಿ ತಜ್ಞರನ್ನು ಕರೆಸಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು.

ಚಿತ್ರಕಲಾ ಪರಿಷತ್ತು ಪ್ರತಿ ಸೆಮಿಸ್ಟರ್‌ನಲ್ಲಿ ಇದೇ ಮಾದರಿಯ ಕಾರ್ಯಾಗಾರ ಅಥವಾ ಶಿಬಿರವನ್ನು ಆಯೋಜಿಸಿ, ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತದೆ. ಕ್ಯಾಂಪ್‌ನಲ್ಲಿ 8 ಜನ ವಿಷಯ ತಜ್ಞರು ಒಂದೊಂದು ರೀತಿಯ ಕಲೆಗಳ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ.

ADVERTISEMENT

ಮುದ್ರಣ ಕಲೆ ಬಗ್ಗೆ ಒಂದಿಷ್ಟು: ತಂತ್ರಜ್ಞಾನದಲ್ಲಿನ ಬೆಳವಣಿಗೆಯಿಂದಾಗಿ ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಕ ಸುಧಾರಣೆಗಳು ಮತ್ತು ಬದಲಾವಣೆಗಳು ಆಗಿವೆ. ಆದರೂ ಪುರಾತನ ತಂತ್ರಜ್ಞಾನ ರೂಢಿಸಿಕೊಂಡು ಆ ಮೂಲಕ ತನ್ನ ಕಲ್ಪನೆಗಳನ್ನು ಒಡಮೂಡಿಸಿ, ನೋಡುಗರನ್ನು ಚಿಂತನೆಗೆ ಹಚ್ಚುವ ಕಲಾವಿದನ ಪ್ರಯತ್ನ ಅನನ್ಯ. ಈ ಪ್ರದರ್ಶನದಿಂದ ಕುಂಚ ಕಲೆಯ ವಿದ್ಯಾರ್ಥಿಗಳು ತಮ್ಮನ್ನು ಕಲೆಯಲ್ಲಿ ತೊಡಗಿಸಿಕೊಳ್ಳಲು ಪ‍್ರೇರಣೆ ಸಿಗುತ್ತದೆ.

ಗಂಜೀಫಾ ಕಲೆ ಬಗ್ಗೆ ಒಂದಿಷ್ಟು: ಗಂಜೀಫಾ ಕಲೆ ಪ್ರಾಚೀನ ಪಾರಂಪರಿಕ ಒಳಾಂಗಣ ಆಟ. ಆಟದ ಎಲೆಗಳನ್ನು ಅತ್ಯಂತ ಅರ್ಥವತ್ತಾಗಿ, ಸುಂದರವಾಗಿ ಚಿಕಣಿ ಚಿತ್ರಗಳ ಮಾದರಿಯಲ್ಲಿ ಚಿತ್ರಿಸಿ ಅಲಂಕರಿಸಲಾಗಿರುತ್ತದೆ. ಅವಸಾನದ ಅಂಚಿನಲ್ಲಿರುವ ಈ ಕಲೆಯ ಪುನರುಜ್ಜೀವನಕ್ಕಾಗಿ ಚಿತ್ರಕಲಾ ಪರಿಷತ್ತು ಈ ಕಾರ್ಯಾಗಾರ ಹಮ್ಮಿಕೊಂಡಿತ್ತು.

ಗಂಜೀಫಾ ಶಬ್ದ ಬಂದಿದ್ದೇ ಮೊಘಲರ ಕಾಲದಲ್ಲಿ. ಇದು ಮೂಲತಃ ಇರಾನ್ ದೇಶದ್ದು. ಮೈಸೂರು ಶೈಲಿಯ ಗಂಜೀಫಾ ಕಲೆಗೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಆದ್ಯತೆ ನೀಡಿದ್ದರು. ಈ ಕಲೆಯನ್ನು ದೇವರ ಆಟ ಎಂದು ಕರೆಯಲಾಗುತ್ತದೆ. ಒಡಿಶಾ ಹಾಗೂ ಕರ್ನಾಟಕದಲ್ಲಿ ಇದು ಜನಪ್ರಿಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.