ADVERTISEMENT

ವ್ಯೂಹ

ಪಿ.ಬಿ.ಪ್ರಸನ್ನ
Published 1 ಜುಲೈ 2017, 19:30 IST
Last Updated 1 ಜುಲೈ 2017, 19:30 IST
ಚಿತ್ರ: ಈಶ್ವರ ಬಡಿಗೇರ
ಚಿತ್ರ: ಈಶ್ವರ ಬಡಿಗೇರ   

ಸುತ್ತು ಸುತ್ತೋ ಸುತ್ತು
ರಣ ಕೇಕೆಯ ನಡುವೆ ಅಯೋಮಯ

ಚತುರಂಗ ಬಲ ಸನ್ನದ್ಧ
ನಾಜೂಕು ಹತಾರುಗಳ
ಕುಶಲ ಬಳಕೆ ಹೇಗೆಂಬ
ಚಿಂತೆ ಅವರಿಗೆ

ಇನ್ನೂ ಕೈ ಕಾಲು ಮೂಡಿಲ್ಲ ಗರ್ಭಕ್ಕೆ
ಆಗಲೇ ವ್ಯೂಹ ಭೇದನದ ಛಲ
ಪಂಥಗಳ ನಡುವೆ ತಾನು ತಾನಾಗಿ
ಮೆರೆದು ನಿಲ್ಲುವ
ಜಗವ ನುಂಗುವ ಹಟ

ADVERTISEMENT

ಕರುಳ ಕುಡಿ ಹೊತ್ತವಳಿಗೆ
ಅದೊಂದು ಕವಿತೆ
ಅವಳ ಕಂಗಳಲಿ ವೀರಾಧಿವೀರರ
ಧೀರ ಕುಲ ಉದ್ಧಾರಕರ ಕನಸು

ಹರಿಯದಿರಲಿ ಸ್ವಚ್ಛಂದ
ಎಂದು ಹಾಕಿ ಇಟ್ಟಿದ್ದಾಳೆ
ಸುಪ್ಪತ್ತಿಗೆಯ ಬೇಲಿ
ಕಟ್ಟಿ ರಂಗಾಣಿ
ಹೊಲಿಯುತ್ತ ಕುಲಾವಿ
ಜೋಗುಳಗಳ ಗುನುಗುನಿಸುತ್ತಿದ್ದಾಳೆ

ಕಾಯ ಬೇಕೆಂದರೆ ಬಲ್ಲವರು
ಗರ್ಭವೋ ಒಳಗೊಳಗೆ ಒದೆಯುತ್ತ
ನುಗ್ಗುವೆ ಎನ್ನುತ್ತಿದೆ
ಹೊತ್ತವಳ ಬದ್ಧತೆಗೆ
ಗರ್ಭದ ಪಕ್ವತೆಗೆ ಅವ
ವ್ಯೂಹ ಭೇದನದ ಕತೆಯ ಉಸುರಿದರೆ
ಅವಳಿಗೋ ನಿದ್ದೆ!

ಅವನ ಕತೆ ನಿಂತಿದೆ
ಗರ್ಭವು ವ್ಯೂಹ ಭೇದನದ ಕನಸು ಕಾಣುತ್ತಲೇ ಇದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.