ADVERTISEMENT

ಸಾಕ್ರಟಿಸ್ ಮಾರ್ಗ

ಮಿನುಗು ಮಿಂಚು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 19:59 IST
Last Updated 6 ಏಪ್ರಿಲ್ 2013, 19:59 IST

ಸಾಕ್ರಟಿಸ್ ಯಾರು?
ಹೆಸರಾಂತ ಗ್ರೀಕ್ ತತ್ವಜ್ಞಾನಿಗಳಲ್ಲಿ ಸಾಕ್ರಟಿಸ್ ಕೂಡ ಒಬ್ಬರು. ಅವರು ಅಥೆನ್ಸ್‌ನಲ್ಲಿ ಕ್ರಿ.ಪೂ. 470ರಿಂದ ಕ್ರಿ.ಪೂ. 399ರವರೆಗೆ ಬದುಕಿದ್ದರು.

ಡೆಲ್ಫಿಯ ದೇವಸನ್ನಿಧಾನದಲ್ಲಿ ಅವರನ್ನು ಗ್ರೀಸ್‌ನ ಅತಿ ಬುದ್ಧಿವಂತ ಎಂದು ಘೋಷಿಸಿದ್ದು ಯಾಕೆ?
ಜ್ಞಾನಾರ್ಜನೆಯ ಹಿಂದೆ ಬಿದ್ದ ಜನರಿಗೆ ಎಷ್ಟೇ ಮೊಗೆದರೂ ತಮಗೆ ಎಲ್ಲಾ ತಿಳಿದಿಲ್ಲ ಎಂಬ ವಿನಯ ಇರಬೇಕಾಗುತ್ತದೆ. ಅದು ಸಾಕ್ರಟಿಸ್‌ಗೆ ಇತ್ತು. ಅವರು ತಮ್ಮನ್ನು ತಾವು ನಿರ್ಲಕ್ಷಿಸಿಕೊಂಡೇ ಚರ್ಚೆಯಲ್ಲಿ ತೊಡಗುತ್ತಿದ್ದರು. ವಿಷಯದ ತಿಳಿವಳಿಕೆ ಇದ್ದರೂ ತಮಗೆ ಅದು ಗೊತ್ತು ಎಂಬ ಹಮ್ಮಿಲ್ಲದೆ ವಾದಿಸುತ್ತಿದ್ದರು. ಅವರ ಈ ಗುಣವೇ ಅವರನ್ನು ಅತಿ ಬುದ್ಧಿವಂತ ಎಂದು ಪರಿಗಣಿಸಲು ಕಾರಣ.

ಸಾಕ್ರಟಿಕ್ ವಿಧಾನ ಎಂದರೇನು?
ತನಿಖೆ ಸ್ವರೂಪದ ಪ್ರಶ್ನಾವಳಿಯನ್ನು ಸಾಕ್ರಟಿಸ್ ತಮ್ಮ ವಿದ್ಯಾರ್ಥಿಗಳ ಮುಂದಿಡುತ್ತಿದ್ದರು. ನಿರ್ದಿಷ್ಟ ವಿಷಯವನ್ನು ವಿಶ್ಲೇಷಣಾತ್ಮಕವಾಗಿ ಅರಿಯುವ ಮಾರ್ಗವಾಗಿ ಅದು ಯಶಸ್ವಿಯಾಯಿತು. ವಿಮರ್ಶಾತ್ಮಕ ನೆಲೆಗಟ್ಟಿನಲ್ಲಿಯೇ ವಿಷಯವನ್ನು ಮನದಟ್ಟು ಮಾಡಿಕೊಳ್ಳುವ ಈ ಮಾರ್ಗವೇ ಸಾಕ್ರಟಿಕ್ ವಿಧಾನ ಎನಿಸಿಕೊಂಡಿತು.

ಸಾಕ್ರಟಿಸ್ ಯಾವ ಯಾವ ಕೃತಿಗಳನ್ನು ಬರೆದಿದ್ದಾರೆ?
ಅವರು ಯಾವ ಪುಸ್ತಕವನ್ನೂ ಬರೆಯಲಿಲ್ಲ. ಬದಲಿಗೆ ಜನರ ಜೊತೆ ಬೆರೆತರು. ಯುವಕರನ್ನು ಚಿಂತನೆಯಲ್ಲಿ ತೊಡಗಿಸಿದರು. ಅವರ ಶಿಷ್ಯರಲ್ಲಿ ಕೆಲವರು ಬರೆದ ಕೃತಿಗಳ ಮೂಲಕ ಸಾಕ್ರಟಿಸ್ ಚಿಂತನಾ ಕ್ರಮ ದಾಟಿಕೊಂಡು ಬಂದಿದೆ. ಪ್ಲೇಟೊ ಅವರ ಶಿಷ್ಯರಲ್ಲಿ ಪ್ರಮುಖರು.

ಸಾಕ್ರಟಿಸ್ ಮೃತಪಟ್ಟಿದ್ದು ಹೇಗೆ?
ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂಬ ಆರೋಪ ಹೊರಿಸಿ ಅವರನ್ನು ಮರಣದಂಡನೆಗೆ ಗುರಿಪಡಿಸಲಾಯಿತು. ತಮ್ಮ ಬೋಧನಾ ಕ್ರಮವನ್ನು ತ್ಯಜಿಸಿದರೆ ಕ್ಷಮಾದಾನ ನೀಡುವುದಾಗಿ ಹೇಳಲಾಯಿತು. ಅದಕ್ಕೆ ಒಪ್ಪದ ಸಾಕ್ರಟಿಸ್, ತಮಗೆ ಕೊಟ್ಟ ವಿಷವನ್ನು ಕುಡಿದುಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.