ಕುವೆಂಪು
ಲಂಕಿಗ
ಲಂಕಿಗ (ನಾ). ಲಂಕೆಯಲ್ಲಿ ವಾಸಿಸುವವನು; ಲಂಕೆಯ ಪ್ರಜೆ
ಮಾಯಾಸಮರ್ಥ ಮಾರೀಚ ದೈತ್ಯನು ಗೋಳಿಡುವುದನ್ನು ಕಂಡು ಭೋಂಕನೆ ಮೇಲೆದ್ದು ಅಪ್ಪಿಕೊಂಡ ರಾವಣನನ್ನು ಕುವೆಂಪು ‘ಲಂಕಿಗ’ ಎಂದು ಸಂಬೋಧಿಸಿದ್ದಾರೆ.
‘ಮಾಯಾ ಸಮರ್ಥನಾ ಮಾರೀಚದೈತ್ಯನುಂ
ಗೋಳಿಡುವುದಂ ಕಂಡು, ಲಂಕಿಗ ಭೋಂಕನೆಯೆ
ಮೇಲೆಳ್ದನಪ್ಪಿದನ್’
** *
‘ಲಂಕೆಗಿನ್ ಸುಖಮೆಲ್ಲಿ? ಲಂಕೆಗಿನ್ ಶುಭಮೆಲ್ಲಿ?’
ಲಂಕಿಗರ್ ನಮಗೆ ನೆಮ್ಮದಿಯೆಲ್ಲಿ?’
ಬಾಯ್ಗತ್ತಿ
ಬಾಯ್ಗತ್ತಿ (ನಾ). ನುಡಿ ಕತ್ತಿ
ಕಾಡಿನ ಬಹುದೂರದಿಂದ ರಾಮನಂತೆ ಮಾಯಾವಿ ಮಾರೀಚನು ‘ಓ ಲಕ್ಷ್ಮಣಾ’ ಎಂದು ಕೂಗುವನು. ಸೀತೆ ಬೆಚ್ಚಿ ಬೆವರುವಳು. ಲಕ್ಷ್ಮಣನನ್ನು ನಿಂದಿಸುವಳು. ಕುವೆಂಪು ಅವರು ಸೀತೆಯ ಆ ಕತ್ತರಿಸುವಂತಹ ಕಠೋರ ನುಡಿಯನ್ನು ‘ಬಾಯ್ಗತ್ತಿ’ ಪದದಿಂದ ಹೀಗೆ ಚಿತ್ರಿಸಿದ್ದಾರೆ:
‘ಹಾ ಬೇರ್ಗೊಯ್ದುದತ್ತಿಗೆಯ ಬಾಯ್ಗತ್ತಿ
ಊರ್ಮಿಳಾ ಪ್ರಿಯನ ನಿಶ್ಚಲತೆಯಂ!’
ರೆಪ್ಪೆವುಲ್ಲು
ರೆಪ್ಪೆವುಲ್ಲು (ನಾ). ಎವೆಯ ಕೂದಲು
ಸಂನ್ಯಾಸಿ ವೇಷದ ರಾವಣನು ಒಂಟಿಯಾಗಿರುವ ಸೀತೆಯನ್ನು ಕಂಡು ಹುಸಿಧ್ಯಾನವನ್ನು ನಟಿಸುತ್ತ, ಕ್ಷುದ್ರ ಭಾವವನ್ನು ಮುಚ್ಚಿಕೊಂಡಂತೆ ನಿಂತಿರುತ್ತಾನೆ. ಅದನ್ನು ಕುವೆಂಪು ‘ರೆಪ್ಪೆವುಲ್ಲು’ ರೂಪಕದಿಂದ ಹೀಗೆ ಚಿತ್ರಿಸಿದ್ದಾರೆ:
‘ಬಕಧ್ಯಾನಮಂ
ನಿಂದಿಪೊಲಲ್ಲೆ ನಿಂದನು, ಬಗೆಯ ಬಾವಿಯಂ
ರೆಪ್ಪೆವುಲ್ಲಿಂದಡಕಿ ಮುಚ್ಚಿ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.