ಬೆಂಗಳೂರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ರವಿ ಮಡೋಡಿ ಅವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಿಟ್ಟೂರು ಬಳಿಯ ಮಡೋಡಿ ಗ್ರಾಮದವರು. ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರೂ ಯಕ್ಷಗಾನದ ಬಗ್ಗೆ ವಿಪರೀತ ಸೆಳೆತ. 12 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ 300ಕ್ಕೂ ಹೆಚ್ಚು ಪ್ರದರ್ಶನಗಳನ್ನು ತಮ್ಮ ತಂಡದೊಂದಿಗೆ ನೀಡಿದ್ದಾರೆ. ಈ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡಲು ಶ್ರಮವಹಿಸುತ್ತಿದ್ದಾರೆ. ‘ಯಕ್ಷಸಿಂಚನ’ ಎನ್ನುವ ಹವ್ಯಾಸಿ ಯಕ್ಷಗಾನ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ರವಿ ಸಂಸ್ಥೆಯ ಈಗಿನ ಅಧ್ಯಕ್ಷರೂ ಹೌದು. ಯಕ್ಷವಾಹಿನಿ ಸಂಸ್ಥೆಯಲ್ಲಿ ಕಾರ್ಯಕಾರಿಣಿ ಮಂಡಳಿಯ ಸದಸ್ಯರಾಗಿಯೂ ಕೆಲಸ ಮಾಡುತ್ತಿದ್ದಾರೆ.
ಯಕ್ಷಗಾನ ಕ್ಷೇತ್ರಕ್ಕೆ ತಂತ್ರಜ್ಞಾನದ ಲಾಭ ದೊರಕಿಸಿಕೊಡುವಲ್ಲಿ ಅವರ ಪಾತ್ರ ದೊಡ್ಡದು. 255 ಪ್ರಸಂಗಗಳ ಹಸ್ತ ಪ್ರತಿಗಳನ್ನು ಡಿಜಿಟಲೀಕರಣಗೊಳಿಸಿದ್ದಾರೆ. 1,500ಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಸ್ಕ್ಯಾನ್ ಮಾಡಿ ಅಂತರ್ಜಾಲದಲ್ಲಿ ಸಿಗುವಂತೆ ಮಾಡಿದ್ದಾರೆ. ಯಕ್ಷಗಾನ ಕ್ಷೇತ್ರ ಉಳಿವಿಗೆ ಸಾಕಷ್ಟು ಕೊಡುಗೆ ನೀಡಿ ಅಪರಿಚಿತರಾಗಿಯೇ ಉಳಿಯುವ ಕಲಾವಿದರನ್ನು ಹುಡುಕಿ ಪರಿಚಯಿಸಿರುವ ‘ಮಲೆನಾಡಿನ ಯಕ್ಷಚೇತನಗಳು’ ಪುಸ್ತಕ ಇತ್ತೀಚೆಗೆ ಬಿಡುಗಡೆಗೊಂಡಿದೆ.
ಯಕ್ಷಗಾನ ಕುರಿತ ಸಾಹಿತ್ಯವನ್ನು ಪರಿಚಯಿಸಲು ‘ಸಾಹಿತ್ಯ ಸಾಂಗತ್ಯ’ ಎಂಬ ಕಾರ್ಯಕ್ರಮವನ್ನೂ ನಡೆಸುತ್ತಿದ್ದಾರೆ. ಯಕ್ಷಗಾನ ಪ್ರದರ್ಶನಗಳ ಸಮಗ್ರ ಮಾಹಿತಿ ಒಳಗೊಂಡ ‘ಯಕ್ಷಲೋಕ’ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಯಕ್ಷಗಾನದಲ್ಲಿ ರಾಮ, ಶುಕ್ರ, ಕಂಸ, ಶತ್ರುಘ್ನ, ಅರ್ಜುನ, ಜಮದಗ್ನಿ, ಬಲರಾಮ, ಜಾಂಬವ ಸೇರಿದಂತೆ 50ಕ್ಕೂ ಹೆಚ್ಚು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.