‘ಕಾರಂತ ಕಥನ ಸ್ತ್ರೀವಾದಿ ಓದು’ ವಿಮರ್ಶಾತ್ಮಕ ಮಾದರಿಯಲ್ಲಿ ರೂಪಿಸಿದ ಸಂಶೋಧನಾ ಕೃತಿ. ರಾಜೇಂದ್ರ ಅವರು ಕಾರಂತರ 45 ಕಾದಂಬರಿಗಳನ್ನು ಆಧಾರವಾಗಿ ಇಟ್ಟುಕೊಂಡು ಅವುಗಳಲ್ಲಿ ಮಹಿಳೆಯನ್ನೇ ಕೇಂದ್ರೀಕರಿಸಿ ಮಾಡಿದ ಅಧ್ಯಯನ ಕುತೂಹಲ ಹುಟ್ಟಿಸುತ್ತದೆ. ಕಾರಂತ ಕಥನವನ್ನು ‘ಓದಿನ ಪರ್ಯಾವರಣ’, ‘ನಿಸರ್ಗ ಕೇಂದ್ರಿತ ಸ್ತ್ರೀ ಮಾದರಿಗಳು’, ‘ಕುಟುಂಬ ಕೇಂದ್ರಿತ ಸ್ತ್ರೀ ಮಾದರಿಗಳು’, ‘ಗಂಡು ಹೆಣ್ಣು: ಲಿಂಗರಾಜಕಾರಣ, ಕಲೆ, ಸಾಹಿತ್ಯ ಸ್ತ್ರೀ ಬಿಂಬಗಳು’, ‘ಮುಗಿಯದ ಮುನ್ನ’ ಎಂಬ ಐದು ಅಧ್ಯಾಯಗಳಲ್ಲಿ ಲೇಖಕ ತಮ್ಮ ಬರಹವನ್ನು ವಿಸ್ತರಿಸಿದ್ದಾರೆ.
ಸ್ತ್ರೀ–ಪುರುಷ ಇದು ಜೈವಿಕ ವ್ಯತ್ಯಾಸ. ಎಲ್ಲ ಪ್ರಾಣಿ ಪಕ್ಷಿಗಳಲ್ಲಿ ಪ್ರಕೃತಿ ಸಹಜ. ಆ ಭಿನ್ನತೆ ವಿರೋಧ ಲಿಂಗಗಳ ಆಕರ್ಷಣೆ ಮತ್ತು ತಮ್ಮ ತಮ್ಮ ಕ್ರಿಯೆಯ ಸಂದರ್ಭ ಬಿಟ್ಟರೆ ಉಳಿದಂತೆ ಸಮಾನ. ಕುಟುಂಬ ವ್ಯವಸ್ಥೆಯಲ್ಲಿ ಪುರುಷ ಯಜಮಾನಿಕೆಯ ಸ್ಥಾನದಲ್ಲಿಯೇ ಇದ್ದರೆ, ಮಹಿಳೆ ಅವನ ಸಹಾಯಕಳ ಸ್ಥಾನದಲ್ಲಿ ಇರುತ್ತಾಳೆ. ಇದು ಜಾಗತಿಕವಾಗಿ ಕಂಡು ಬರುವ ಸಾಮಾಜಿಕ ವಿದ್ಯಮಾನ ಇದನ್ನು ಕಾರಂತರು ತಮ್ಮ ಕಾದಂಬರಿಗಳಲ್ಲಿ ವಿವರವಾಗಿ ತರುತ್ತಾರೆ. ಹೊಲ ಗದ್ದೆಗಳಲ್ಲಿ ದುಡಿದು ಕುಟುಂಬವನ್ನು ನಿರ್ವಹಿಸುವ ದಿಟ್ಟ ಮಹಿಳೆಯರ ಹಲವು ನಿದರ್ಶನಗಳನ್ನು ಲೇಖಕ ಗುರುತಿಸುತ್ತಾರೆ.
ಕಾರಂತರು, ಹೆಣ್ಣಿನ ಸೌಂದರ್ಯ ಹೊಗಳಿಕೆ, ನಿಸರ್ಗದ ಹೋಲಿಕೆಯ ವೈಭವ, ಅಬಲೆ–ಕೋಮಲೆ ಎಂಬ ಸಹಾನುಭೂತಿ, ವಿಧವಾ ಪದ್ಧತಿ, ಸತಿ ಪದ್ಧತಿ, ಬಂಜೆ, ವೇಶ್ಯಾವೃತ್ತಿ ರೀತಿಯ ಕಂದಾಚಾರಗಳನ್ನು ಖಂಡಿಸುತ್ತಾರೆ. ಮಾತ್ರವಲ್ಲ, ಪುರುಷನಿಗೆ ಇಲ್ಲದ ಶೀಲ ಮಹಿಳೆಗೆ ಏಕೆ ಎನ್ನುವ ಪ್ರಶ್ನೆಯನ್ನು ತಾರ್ಕಿಕವಾಗಿ ನಿರೂಪಿಸುತ್ತ, ವೇಶ್ಯೆಯರು ಪಾತಿವ್ರತ್ಯದ ಸಾತತ್ಯತೆಯನ್ನು ಹೊಂದಿದ್ದಾರೆ ಎಂಬ ನಿಲುವನ್ನು ಲೇಖಕ ದಾಖಲಿಸುತ್ತಾರೆ.
ಕಾರಂತ ಕಥನ ಸ್ತ್ರೀವಾದಿ ಓದು ಲೇ: ಡಾ. ಟಿ. ರಾಜೇಂದ್ರ ತಗಡ್ಲಿ ಪ್ರ: ಸುವ್ವಿ ಪಬ್ಲಿಕೇಷನ್ಸ್ ಶಿಕಾರಿಪುರ ಮೊ: 9620083614 ಪು: 210 ರೂ: 220
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.