ಉದಯೋನ್ಮುಖ ಗಾಯಕ ಮತ್ತು ಸಂಗೀತ ನಿರ್ದೇಶಕ ಆಶೀಷ್ಲಕ್ಕಿ ದುಬೆ ಅವರ ‘ಆಶೀಷ್-ಮ್ಯೂಸಿಕ್ ಫಾರ್ ಎ ಬ್ರೈಟರ್ ಉಷಾ’ ಎಂಬ ವಿನೂತನವಾದ ಆಲ್ಬಂ ಅನ್ನು ರಾಜ್ಯ ಶಿಕ್ಷಣ ಇಲಾಖೆ ತನ್ನ ಇಲಾಖೆಯ ಆಲ್ಬಂ ಆಗಿ ಅಳವಡಿಸಿಕೊಂಡಿದೆ. ಈ ಗೀತೆಗೆ ಗ್ರಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರು ಸಂಗೀತ ನೀಡಿದ್ದಾರೆ.
ಮಕ್ಕಳೇ ಕೇಂದ್ರಬಿಂದುವಾಗಿರುವುದುಈ ಗೀತೆಗಳ ವಿಶೇಷವಾಗಿದೆ. ಇದರಲ್ಲಿಐದು ಹಾಡುಗಳಿದ್ದು, ಎರಡು ಕನ್ನಡ ಗೀತೆಗಳಿವೆ. ಎರಡು ರೀಮಿಕ್ಸ್ ಮತ್ತು ಒಂದು ಇಂಗ್ಲೀಷ್ ಗೀತೆ ಇದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಟ ಪುನೀತ್ ರಾಜ್ಕುಮಾರ್ ಮತ್ತು ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಆಲ್ಬಂ ಬಿಡುಗಡೆ ಮಾಡಿದರು.ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಇದ್ದರು.
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು (ಎಸ್ ಡಿ ಜಿ) ಗಮನದಲ್ಲಿಟ್ಟುಕೊಂಡು ಈ ಗೀತೆಗಳನ್ನು ರಚಿಸಲಾಗಿದೆ. ಮಕ್ಕಳ ಶಿಕ್ಷಣದ ಹಕ್ಕು, ಆರೋಗ್ಯ, ಪರಿಸರ ರಕ್ಷಣೆ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕು, ನೈರ್ಮಲ್ಯ ಹಾಗೂ ಜೀವನ ಶೈಲಿಯ ಆರೋಗ್ಯ ಸೇರಿದಂತೆ ಒಟ್ಟಾರೆ ಮಕ್ಕಳ ಹಿತರಕ್ಷಣೆಗೆ ಪೂರಕವಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಗೀತೆಗಳನ್ನು ರಚಿಸಲಾಗಿದೆ. ಈ ಆಲ್ಬಂಗೆ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಹಕಾರ ನೀಡಿದೆ. ಅಲ್ಲದೇ, ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಈ ಗೀತೆಗಳನ್ನು ಹಾಕಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಆಶೀಷ್ ಲಕ್ಕಿ ಅವರು ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಯಂದು ಸಂಗೀತ ನೀಡಿ ಹಾಡಿರುವ ಇನ್ನೊಂದು ಹಾಡನ್ನು ಕರ್ನಾಟಕ ಶಿಕ್ಷಣ ಇಲಾಖೆ ತನ್ನ ಗೀತೆಯನ್ನಾಗಿ ಅಳವಡಿಸಿಕೊಂಡಿದೆ.
‘ಸಂಗೀತವೆಂಬುದು ಇಡೀ ವಿಶ್ವಕ್ಕೆ ಆತ್ಮವನ್ನು ನೀಡಿದೆ. ಮನಸಿಗೆ ರೆಕ್ಕೆಯನ್ನು, ಚಿಂತನೆಯನ್ನು ಹಾರುವಂತೆ ಮತ್ತು ಪ್ರತಿಯೊಂದಕ್ಕೂ ಜೀವ ತುಂಬಿದೆ’ ಆಶೀಷ್ ಹೇಳಿದ್ದಾರೆ.
ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಮತ್ತು ಕನ್ನಡದ ಸಂಗೀತ ನಿರ್ದೇಶಕ ಮನೋಮೂರ್ತಿ ಅವರೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ ಅನುಭವ ಆಶೀಷ್ ಅವರದ್ದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.