ನನ್ನ ಕಣ್ಣೀರನ್ನು
ಇದರಲ್ಲಿ ತುಂಬಿಡಲಾರೆ
ನಿಮ್ಮದು ಸಾಗರದಷ್ಟಿದೆ ತುಳುಕುತ್ತ
ಗಾಳಿಯಂತೆ ಅವಳು ಬಂದದ್ದುಹೋದದ್ದು
ಕೋಗಿಲೆಯ ಕೂಗಿನಲ್ಲೋ ನವಿಲ ಕುಣಿತದಲ್ಲೋ
ತೋರಿಸುವುದು ಕ್ಲೀಷೆಯಾಗಿದೆ
ಶೇಕ್ಸ್ಪಿಯರ್ನ ನಾಯಕರು ವಾಸ್ತವಕ್ಕೆ
ಧುಮುಕಿ
ಬೆಚ್ಚಿಬಿದ್ದಿದ್ದಾರೆ ತುಂಬಾ ಸಿಂಪಲ್ಲಾಗಿ
ಜರುಗುತ್ತಿರುವ ಕೊಲೆಗಳ ನೋಡುತ್ತ
ನಿನ್ನೆಯ ಬದುಕು ಮೊನ್ನೆಯಂತೆ
ಇದೆ
ಈ ಕ್ಷಣದ್ದು ಮುಂದಿನ ಕ್ಷಣದಲ್ಲಿ
ಅಡಗಿದ್ದದ್ದು
ಅರಿವಾಗುವುದಿಲ್ಲ
ಕಳೆದ ನೆನಪು ಮಾತ್ರ
ಇಂದನ್ನು ಸಾಗಿಸುತ್ತಿದೆ
ಸಿಗದ ನೋವು ನಿರಾಸೆ
ಸಿಕ್ಕಿರುವುದಕ್ಕೆ ಬೆಂಕಿಯ ಬೆಳಕಾಗಿದೆ
ಕಣ್ಣೀರಿನ ಉಪ್ಪಿನಲ್ಲಿ
ಅವಳ ಮೌನ ಮಾತು
ಕೆಡದೆ ಇವೆ
ಇರಲಿ
ಇದರೆಲ್ಲದರ ಗೊಡವೆ ಲೋಕಕ್ಕೆ
ಯಾಕೆ
ನಿಮಗೂ ಯಾಕೆ
ನಿಮ್ಮದು ಸಾಗರದಷ್ಟಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.