ಬಡವ ಬಲ್ಲಿದನೆನ್ನದೆ
ಹಿರಿಯ ಕಿರಿಯರ ತಾಳೆ ಹಾಕದೆ
ತಾರತಮ್ಯವನ್ನೆಲ್ಲೂ ಮಾಡದೆ
ಗಡಿ - ಬೇಲಿಗಳಲ್ಲೆಲ್ಲೂ ನಿಲ್ಲದೆ
ಯಾರ ಆಮಿಷಕ್ಕೂ ಒಳಪಡದೆ
ಪ್ರತಿ ಮನೆಯಲ್ಲೂ ಅವತರಿಸಿ
ತನ್ನ ಸಾಮ್ರಾಜ್ಯವನ್ನು ಬಲಪಡಿಸಿ
ದಿನೇ ದಿನೇ ಒಂದು ನೂರಾಗಿ... ಸಾವಿರವಾಗಿ
ಸತತವಾಗಿ ಹಗಲು-ಇರುಳನ್ನದೆ ದಾಳಿ ಮಾಡುವೆ
ಬತ್ತಿಗಳೆಲ್ಲ ಬತ್ತಿ ಹೋದವು
ರಸಹೀರುವ ಯಂತ್ರಗಳೆಲ್ಲ ಬಿದ್ದುಹೋದವು
ತರಾವರಿ ಔಷಧಿ ತುಂಬಿದ ಕಾಗದಗಳೆಲ್ಲ ಸುಟ್ಟುಹೋದವು
ಜಿಲೇಬಿಯ ಹೋಲುವ ಕಡ್ಡಿಗಳು ಬೂದಿಯಾದವು
ಕೊನೆಗೊಂದು ‘ಬ್ಯಾಟು’ ಮನೆಯ ತುಂಬಿ
ಚಟ-ಪಟ ಎಂದಾಗ ಎಲ್ಲರ ಮನ ತುಂಬಿ
ಮನೆ ಮಕ್ಕಳೆಲ್ಲ ಮುಯ್ಯಿ ತೀರಿಸಿಕೊಂಡಾಯಿತು
ಸೊಳ್ಳೆರಾಯ... ಸರಿಯೇ ನಿನ್ನೀ ಕಾರ್ಯ?!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.