ಮೈಸೂರು: ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ ಅವರು ಮಾಡಿದ ಭಾಷಣಕ್ಕೆ ವಿರೋಧ ವ್ಯಕ್ತವಾಗಿದೆ.
ಸಮ್ಮೇಳನಾಧ್ಯಕ್ಷರ ಭಾಷಣ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ವಿಶ್ವಮಾನವ ಉದ್ಯಾನದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
‘ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದವರು ಘನತೆಯಿಂದ ಮಾತನಾಡಬೇಕು. ಆದರೆ, ಚಂಪಾ ಅವರ ಭಾಷಣ ರಾಜಕೀಯ ಪಕ್ಷವೊಂದನ್ನು ಓಲೈಕೆ ಮಾಡುವಂತಿತ್ತು. ನಿರ್ದಿಷ್ಟ ಪಕ್ಷಕ್ಕೆ ಮತ ನೀಡಿ ಎಂದು ಕರೆ ನೀಡಿದ್ದು ಖಂಡನೀಯ. ಕಾಂಗ್ರೆಸ್ ಮೇಲಿನ ಪ್ರೀತಿಗೆ ಈ ರೀತಿಯಾಗಿ ಮಾತನಾಡಬಾರದಿತ್ತು’ ಎಂದು ವೇದಿಕೆ ಅಧ್ಯಕ್ಷ ಬಾಲಕೃಷ್ಣ ಆರೋಪಿಸಿದರು.
‘ಚಂಪಾ ಅವರು ಮೆರವಣಿಗೆಗೂ ಮುನ್ನ ಭುವನೇಶ್ವರಿ ದೇಗುಲ ಪ್ರವೇಶ ಮಾಡಲಿಲ್ಲ. ಸಂಸ್ಕೃತಿಯ ಪ್ರತೀಕದಂತಿರುವ ಮೈಸೂರು ಪೇಟ ಧರಿಸಲು ಹಿಂದೇಟು ಹಾಕಿದ್ದು ನೋವುಂಟು ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.