ಮೈಸೂರು: ಸಾಹಿತ್ಯ ಸಮ್ಮೇಳನದ ಮೈದಾನದಲ್ಲಿ ಎದ್ದ ದೂಳಿನಿಂದಾಗಿ ಶನಿವಾರ ಹಲವರು ತೊಂದರೆ ಅನುಭವಿಸಿದರು. ವೇದಿಕೆಯ ಹಿಂಭಾಗದಲ್ಲಿ ತೆರೆದ ತಾತ್ಕಾಲಿಕ ಆರೋಗ್ಯ ಕೇಂದ್ರದಲ್ಲಿ ‘ಡಸ್ಟ್ ಅಲರ್ಜಿ’ ರೋಗಿಗಳ ಸಂಖ್ಯೆಯೇ ಹೆಚ್ಚಾಗಿತ್ತು.
ಮೊದಲ ದಿನವಾದ ಶುಕ್ರವಾರ ಇಡೀ ದಿನ ಸೇರಿ 546 ಮಂದಿ ತಪಾಸಣೆಗೆ ಒಳಗಾಗಿದ್ದರು. ನಿಸ್ತೇಜಗೊಂಡ ಇಬ್ಬರನ್ನು ಮಾತ್ರ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಶನಿವಾರ ಮಧ್ಯಾಹ್ನ 1ರ ಹೊತ್ತಿಗಾಗಲೇ 405 ಮಂದಿ ತಪಾಸಣೆ ಮಾಡಿಸಿಕೊಂಡಿದ್ದರು. ಇವರಲ್ಲಿ ಬಹುಪಾಲು ಮಂದಿಗೆ ದೂಳಿನಿಂದಲೇ ತೊಂದರೆಯಾಗಿತ್ತು. ರಾತ್ರಿ ಹೊತ್ತಿಗೆ ಈ ಸಂಖ್ಯೆ ದ್ವಿಗುಣವಾಗುವ ಸಾಧ್ಯತೆ ಇದೆ ಎಂದು ಸ್ಥಳದಲ್ಲಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದರು.
ಉಳಿದಂತೆ, ರಕ್ತದೊತ್ತಡ ಹಾಗೂ ಮಧುಮೇಹಕ್ಕೆ ಸಂಬಂಧಿಸಿ ಸ್ಥಳದಲ್ಲೇ ಉಪಚಾರ ಮಾಡಲಾಗಿದೆ. ಪಾನಮತ್ತರಾಗಿ ಬಂದ ಇಬ್ಬರು ತೀವ್ರ ಅಸ್ವಸ್ಥಗೊಂಡಿದ್ದರಿಂದ ಅವರನ್ನು ಆಂಬುಲೆನ್ಸ್ ಮೂಲಕ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವೈದ್ಯರು ಮಾಹಿತಿ ನೀಡಿದರು.
ಈ ಆರೋಗ್ಯ ಕೇಂದ್ರದಲ್ಲಿ ಐವರು ವೈದ್ಯಾಧಿಕಾರಿಗಳು, ಫಿಜಿಸಿಯನ್, ಸರ್ಜನ್ ಸೇರಿದಂತೆ 137 ಸಿಬ್ಬಂದಿ ಕಾರ್ಯತತ್ಪರರಾಗಿದ್ದಾರೆ. ಆರೋಗ್ಯ ಇಲಾಖೆಯ 4 ಆಂಬುಲೆನ್ಸ್, ಅಪೊಲೊ ಆಸ್ಪತ್ರೆಯ 1, ಕೆ.ಆರ್.ಆಸ್ಪತ್ರೆಯ 2 ಸೇರಿ ಒಟ್ಟು 7 ಆಂಬುಲೆನ್ಸ್ ಸ್ಥಳದಲ್ಲಿವೆ. ರಕ್ತ ಪರೀಕ್ಷೆಗಾಗಿ ಲ್ಯಾಬ್, ತಾತ್ಕಾಲಿಕ ಔಷಧಾಲಯ, ಒಳರೋಗಿಗಳಿಗೆ 5 ಬೆಡ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಅಂಗಳಕ್ಕೆ ನೀರು ಸಿಂಚನ: ಸಮ್ಮೇಳನದ ಮುಖ್ಯ ವೇದಿಕೆ ಸುತ್ತ ದೂಳು ಏಳತೊಡಗಿತು. ಡಸ್ಟ್್ ಅಲರ್ಜಿಯ ರೋಗಿಗಳ ಸಂಖ್ಯೆ ಹೆಚ್ಚಾಗುವುದನ್ನು ಕಂಡ ಆಯೋಜಕರು ಮೈದಾನದ ತುಂಬ ನೀರು ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.