ಹೈದರಾಬಾದ್: ಲಕ್ಷಾಂತರ ಜನರಿಗೆ ಠೇವಣಿ ಹಣ ವಂಚಿಸಿರುವ ಅಗ್ರಿಗೋಲ್ಡ್ ಸಂಸ್ಥೆಯ ಸ್ವಾಧೀನ ಪ್ರಕ್ರಿಯೆ ಕುರಿತು ಅಂತಿಮ ನಿರ್ಧಾರಕ್ಕೆ ಬರಲು ಆಂಧ್ರಪ್ರದೇಶ ಹೈಕೋರ್ಟ್, ಝೀ ಎಸ್ಸೆಲ್ ಗ್ರೂಪ್ಗೆ ಎರಡು ವಾರಗಳ ಕಾಲಾವಕಾಶ ನೀಡಿದೆ.
ಅಗ್ರಿಗೋಲ್ಡ್ ಸ್ವಾಧೀನಕ್ಕೆ ಒಲವು ತೋರಿದ್ದ ಝೀ ಎಸ್ಸೆಲ್ ಸಮೂಹವು ಸೋಮವಾರ ನಡೆದ ಅನಿರೀಕ್ಷಿತ ವಿದ್ಯಮಾನದಲ್ಲಿ , ತಾನು ಈ ಮೊದಲು ನೀಡಿದ್ದ ಭರವಸೆ ಈಡೇರಿಸಲು ಸಾಧ್ಯವಾಗಲಾರದು ಎಂದು ಹೈಕೋರ್ಟ್ಗೆ ತನ್ನ ಅಸಹಾಯಕತೆ ವ್ಯಕ್ತಪಡಿಸಿತು.
ಭಾರಿ ನಷ್ಟದ ಸುಳಿಗೆ ಸಿಲುಕಿರುವ ಅಗ್ರಿಗೋಲ್ಡ್ ಒಡೆತನದಲ್ಲಿ ಇರುವ ಆಸ್ತಿಗಳಿಗಿಂತ ಅದರ ಹೊಣೆಗಾರಿಕೆಯ ಮೊತ್ತ ಹೆಚ್ಚಿಗೆ ಇದೆ. ಹೀಗಾಗಿ ಅದರ ಸ್ವಾಧೀನವು ಅಸಾಧ್ಯವಾಗಿ ಪರಿಣಮಿಸಿದೆ ಎಂದು ಝೀ ಸಮೂಹದ ವಕೀಲರು ಕೋರ್ಟ್ ಗಮನಕ್ಕೆ ತಂದಿತು.
ಎಂಟು ವಾರಗಳ ಸಮಯಾವಕಾಶ ನೀಡಿದರೆ ಹಿರಿಯ ರಾಜಕಾರಣಿ ಅಮರಸಿಂಗ್ ಅವರ ಜತೆ ಕಾರ್ಯಸಾಧ್ಯವಾದ ಪರ್ಯಾಯ ಮಾರ್ಗೋಪಾಯಗಳನ್ನು ಚರ್ಚಿಸುವುದಾಗಿ ವಕೀಲರು ತಿಳಿಸಿದರು.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೀಠವು ಈ ಪ್ರಸ್ತಾವ ತಳ್ಳಿ ಹಾಕಿತು. ಎರಡು ವಾರಗಳ ಕಾಲಾವಕಾಶವನ್ನಷ್ಟೇ ನೀಡಿದ ಪೀಠವು, ಈ ಅವಧಿಯೊಳಗೆ ಪರ್ಯಾಯ ಪ್ರಸ್ತಾವ ಸಲ್ಲಿಸಲು ಸೂಚಿಸಿತು. ಎರಡು ವಾರಗಳಲ್ಲಿ ಪರ್ಯಾಯ ಯೋಜನೆ ಯನ್ನು ಕೋರ್ಟ್ಗೆ ಸಲ್ಲಿಸಬೇಕು ಎಂದು ಪೀಠವು ಆಂಧ್ರಪ್ರದೇಶ ರಾಜ್ಯ ಸರ್ಕಾರಕ್ಕೂ ಸೂಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.