ADVERTISEMENT

ಅನಿರೀಕ್ಷಿತ ಆಘಾತ ನೀಡಿದ ಆರ್‌ಬಿಐ

ಹುಸಿಯಾದ ನಿರೀಕ್ಷೆ; ವಾಹನ, ಗೃಹ ಸಾಲ ತುಟ್ಟಿ ಸಂಭವ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 19:59 IST
Last Updated 20 ಸೆಪ್ಟೆಂಬರ್ 2013, 19:59 IST

ಮುಂಬೈ(ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕಿನ(ಆರ್‌ಬಿಐ) ಹೊಸ ಗವರ್ನರ್‌ ರಘುರಾಂ ಜಿ.ರಾಜನ್‌ ಅವರ ಮೇಲೆ ಉದ್ಯಮ ವಲಯ ಇಟ್ಟು ಕೊಂಡಿದ್ದ ಬೆಟ್ಟದಷ್ಟು ನಿರೀಕ್ಷೆ ಮಂಜಿ ನಂತೆ ಕರಗಿ ಹೋಗಿದೆ. ಒಂದೊಮ್ಮೆ ಬಡ್ಡಿ ದರವನ್ನು ತಗ್ಗಿಸದೇ ಇದ್ದರೂ ರಾಜನ್‌ ಅವರು ಏರಿಕೆಯನ್ನಂತೂ ಮಾಡು­ವುದಿಲ್ಲ ಎಂಬ ಉದ್ಯಮದ ದೃಢವಾದ ವಿಶ್ವಾಸ ಹುಸಿಯಾಗಿದೆ.

ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡುವಂತೆ ರಾಜನ್‌ ಶುಕ್ರವಾರ ಪ್ರಕ ಟಿಸಿದ ‘ಆರ್‌ಬಿಐ’ನ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರವನ್ನು ಶೇ 0.25ರಷ್ಟು ಹೆಚ್ಚಿಸಿ­ದ್ದಾರೆ. ಆ ಮೂಲಕ ಹೂಡಿಕೆದಾರರಿಗೆ, ಉದ್ಯಮ ವಲಯಕ್ಕೆ, ಬ್ಯಾಂಕುಗಳಿಗೆ ಮತ್ತು ಗ್ರಾಹಕರಿಗೆ ಅನಿ­ರೀಕ್ಷಿತ ಆಘಾತ ನೀಡಿದ್ದಾರೆ.

ಸಾಲ ತುಟ್ಟಿ ಸಾಧ್ಯತೆ
ಎರಡು ವರ್ಷಗಳ ನಂತರ  ಇದೇ ಮೊದಲ ಬಾರಿಗೆ ‘ಆರ್‌ಬಿಐ’ ಬಡ್ಡಿ ದರ ಏರಿಸಿದೆ. ಇದರಿಂದ  ‘ರೆಪೊ’ ದರ ಶೇ 7.50ಕ್ಕೆ ಜಿಗಿದಿದ್ದು, ಗೃಹ ಮತ್ತು ವಾಹನ ಸಾಲ ಹಾಗೂ ವಾಣಿಜ್ಯೋ ದ್ಯಮ ಮತ್ತು ಕಾರ್ಪೊ­ರೇಟ್‌ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಲಿದೆ. ಈಗಾ ಗಲೇ ಸಾಲ ಪಡೆದು ­ಮರುಪಾವತಿ ಮಾಡುತ್ತಿರು­ವವರ ‘ಇಎಂಐ’ ಕಂತು ಗಳೂ ಹೆಚ್ಚುವ ಸಂಭವವಿದೆ.

ಹಬ್ಬಗಳ ಸಾಲಿನ ಈ ಸಂದರ್ಭದಲ್ಲಿ ಹೆಚ್ಚುವರಿ ಸಾಲ ಅಗತ್ಯ ಇದ್ದ ಸಂದರ್ಭ ದಲ್ಲೇ ಬಡ್ಡಿ ದರ ಏರಿಕೆ­ಯಾ­ಗಿ ರುವುದು ಬ್ಯಾಂಕುಗಳಿಗೆ ಮತ್ತು ಗ್ರಾಹಕ ರಿಗೆ ಬಿಸಿ ತುಪ್ಪ­ವಾಗಲಿದೆ. ಇದಕ್ಕೂ ಮೊದಲು ಅಂದರೆ 2011ರ ಅಕ್ಟೋಬರ್‌ನಲ್ಲಿ ‘ಆರ್‌ಬಿಐ’ ಬಡ್ಡಿದರವನ್ನು ಶೇ 0.25 ರಷ್ಟು (ಶೇ 8.5ಕ್ಕೆ) ಹೆಚ್ಚಿಸಿತ್ತು.

ಈಗ ಆರ್‌ಬಿಐ ಪ್ರಕಟಿಸಿರುವ ಬಡ್ಡಿ ದರ ಏರಿಕೆ ಕ್ರಮ ಶನಿವಾರದಿಂದಲೇ ಜಾರಿಗೆ ಬರಲಿದೆ.

‘ಎಂಎಸ್‌ಎಫ್‌’ ಕಡಿತ
ರೆಪೊ ದರ ಏರಿಕೆ ಜತೆಗೆ ಮಾರ್ಜಿ ನಲ್‌  ಸ್ಟ್ಯಾಂಡಿಂಗ್‌ ಫೆಸಿಲಿಟಿ (ಎಂಎಸ್‌ ಎಫ್‌) ದರವನ್ನೂ ‘ಆರ್‌ಬಿಐ’ ಶೇ 0.75ರಷ್ಟು ಕಡಿತ ಮಾಡಿದ್ದು ಶೇ 9.5ಕ್ಕೆ ತಗ್ಗಿಸಿದೆ. ಜತೆಗೆ ಬ್ಯಾಂಕುಗಳು ನಿತ್ಯದ ವಹಿವಾಟು ಆಧರಿಸಿ ಹೊಂದಿರ ಬೇಕಾದ ಕನಿಷ್ಠ ನಗದು ಮೀಸಲು ಅನು­ಪಾತವನ್ನೂ(ಸಿಆರ್‌ಆರ್‌) ಶೇ 99 ರಿಂದ ಶೇ 95ಕ್ಕೆ ಇಳಿಸಿದೆ.

‘ರೆಪೊ ದರ ಏರಿಕೆಯಿಂದ ಆಗಿರುವ  ಪರಿಣಾಮ ಸಮ­ತೋಲನ ಮಾಡಲು ‘ಎಂಎಸ್‌ಎಫ್‌’ ಕಡಿತ ಮಾಡ­ಲಾಗಿದೆ. ಇದರಿಂದ ಬ್ಯಾಂಕು­ಗಳು ಬಡ್ಡಿ ದರ ಹೆಚ್ಚಿಸುವ ಸಾಧ್ಯತೆ ಕಡಿಮೆ’ ಎಂದು ರಾಜನ್‌ ಪ್ರತಿಕ್ರಿಯಿ­ಸಿದ್ದಾರೆ.

ಹಣದುಬ್ಬರ ಕಾರಣ
ಸಗಟು ಬೆಲೆ ಸೂಚ್ಯಂಕ ಆಧರಿಸಿದ (ಡಬ್ಲ್ಯು­ಪಿಐ) ಹಣದುಬ್ಬರ ದರ ‘ಆರ್‌ಬಿಐ’ ಅಂದಾಜು ಮಾಡಿರುವ ಹಿತಕರ ಮಟ್ಟಕ್ಕೆ ಇಳಿಕೆ ಕಾಣದಿರುವುದೇ ಬಡ್ಡಿ ದರ ಏರಿಕೆಗೆ ಪ್ರಮುಖ ಕಾರಣ ಎಂದು ರಘುರಾಂ ರಾಜನ್‌ ತಮ್ಮ ಕ್ರಮವನ್ನು ಸಮರ್ಥಿ­ಸಿಕೊಂಡಿದ್ದಾರೆ.
ಡಾಲರ್‌ ವಿರುದ್ಧ ರೂಪಾಯಿ ಮೌಲ್ಯ ಕುಸಿತ, ಚಾಲ್ತಿ ಖಾತೆ ಕೊರತೆ (ಸಿಎಡಿ) ಹೆಚ್ಚಳ ಸೇರಿದಂತೆ ಹಲವು ಆಂತರಿಕ ಸಮಸ್ಯೆಗಳತ್ತಲೂ ಅವರು ಬೊಟ್ಟು ಮಾಡಿದ್ದಾರೆ.

ಮುಂದಿನ ಹಣಕಾಸು ನೀತಿ ಪರಾಮರ್ಶೆಯನ್ನು ‘ಆರ್‌ಬಿಐ’ ಅ.29ರಂದು ಪ್ರಕಟಿಸಲಿದೆ.

ಎಸ್‌ಬಿಐ ಬಡ್ಡಿದರ ಏರಿಕೆ
‘ಆರ್‌ಬಿಐ’ ಹಣಕಾಸು ನೀತಿ ಹಿನ್ನೆಲೆಯಲ್ಲಿ ‘ಎಸ್‌ಬಿಐ’ ಗುರುವಾ­ರವೇ ಸಾಲದ ಮೇಲಿನ ವಾರ್ಷಿಕ ಮೂಲದರವನ್ನು ಶೇ 9.7ರಿಂದ ಶೇ 9.8ಕ್ಕೆ ಏರಿಕೆ ಮಾಡಿದೆ.  ‘ಬಿಪಿಎಲ್‌ ಆರ್‌’ 10 ಮೂಲಾಂಶಗ­ಳಷ್ಟು ಹೆಚ್ಚಿದ್ದು, ಶೇ 14.45ರಿಂದ ಶೇ 14.55ಕ್ಕೆ ಏರಿಕೆ ಕಂಡಿದೆ.  ಇದರಿಂದ ವಾಹನ, ಗೃಹ, ವಾಣಿಜ್ಯ ಸಾಲದ ಬಡ್ಡಿ ದರ ಏರಿಕೆ ಕಂಡಿದೆ. ‘ಇಎಂಐ’ ಕಂತು ತುಟ್ಟಿಯಾ­ಗಿದೆ.

‘ಶೀಘ್ರದಲ್ಲೇ ಸಾಲದ ಮೇಲಿನ ಬಡ್ಡಿ ದರ ಮತ್ತು ಠೇವಣಿ ದರ ಹೆಚ್ಚಲಿದೆ’ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಅಧ್ಯಕ್ಷ ಪ್ರತೀಪ್‌ ಚೌಧರಿ ಪ್ರತಿಕ್ರಿಯಿಸಿದ್ದಾರೆ.

‘ಎಂಎಸ್‌ಎಫ್‌’ ತಗ್ಗಿರುವುದರಿಂದ ತಕ್ಷಣ ಕ್ಕಂತೂ ಬಡ್ಡಿ ದರ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸುವುದಿಲ್ಲ’ ಎಂದು ಕೆನರಾ ಬ್ಯಾಂಕ್‌ ಕಾರ್ಯ­ನಿರ್ವಾಹಕ ನಿರ್ದೇಶಕ ಎ.ಕೆ.ಗುಪ್ತಾ ಭರವಸೆ ನೀಡಿದ್ದಾರೆ.

ರಘುರಾಂ ಸಮರ್ಥನೆ
‘ಆರ್‌ಬಿಐ’ನ ಸಾಂಪ್ರದಾಯಿಕ ಹಣದುಬ್ಬರ ವಿರೋಧಿ ನೀತಿಯನ್ನು ರಘುರಾಂ ರಾಜನ್‌ ಬಲವಾಗಿ ಸಮರ್ಥಿಸಿ ಕೊಂಡಿದ್ದಾರೆ.  
‘ಬಡ್ಡಿ ದರ ಏರಿಕೆಯಿಂದ ಆಗುವ ತಕ್ಷಣದ ಪರಿಣಾಮದ ಬಗ್ಗೆ ನಮಗೆ ಸ್ಪಷ್ಟವಾದ ಅರಿವಿದೆ. ಆದರೆ, ದೇಶದ ದೀರ್ಘಾ­ವಧಿ  ಪ್ರಗತಿಯನ್ನು ಗಮನ­ದಲ್ಲಿ­ಟ್ಟುಕೊಂಡು ಹಣದುಬ್ಬ­ರವನ್ನು ಶೇ 5ಕ್ಕಿಂತಲೂ ಕೆಳಮಟ್ಟಕ್ಕೆ ತಗ್ಗಿಸುವುದು ನಮ್ಮ ಉದ್ದೇಶ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬ್ಯಾಂಕ್‌ಗಳು ‘ಎಂಎಸ್‌ಎಫ್‌’ ಕಡಿತದ ಲಾಭವನ್ನು ಖಂಡಿತ ಗ್ರಾಹಕರಿಗೆ ವರ್ಗಾಯಿಸಲಿವೆ. ಇದರಿಂದ ಹಣ­ಕಾಸು ಮಾರುಕಟ್ಟೆಯಲ್ಲಿ ಸ್ಥಿರತೆ ಮೂಡ ಲಿದ್ದು, ಹೂಡಿಕೆ ಚಟುವಟಿ­ಕೆಯೂ ಹೆಚ್ಚಲಿದೆ’ ಎಂದು ಅವರು ಬಡ್ಡಿ ದರ ಏರಿಕೆ ಹಿಂದಿನ ಉದ್ದೇಶವನ್ನು  ವಿವರಿಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT