ನವದೆಹಲಿ (ಪಿಟಿಐ): ಬಜೆಟ್ನಲ್ಲಿ ಚಿನ್ನದ ಆಮದು ತೆರಿಗೆ ಹೆಚ್ಚಿಸಿರುವ ಕ್ರಮವನ್ನು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಚಿನ್ನದ ಆಮದು ಹೆಚ್ಚಳವು ಪಾವತಿ ಸಮತೋಲನ ವ್ಯವಸ್ಥೆ ಮತ್ತು ಕರೆನ್ಸಿ ವಿನಿಮಯ ದರದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಆದರೆ, ಚಿನ್ನದ ಆಮದು ಹೆಚ್ಚಳದಿಂದ ವಿದೇಶಿ ವಿನಿಮಯ ನಿಕ್ಷೇಪದ ಮೇಲೆ ಯಾವುದೇ ನೇರ ಪರಿಣಾಮ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ವಿದೇಶಿ ವಿನಿಮಯ ಪೂರೈಕೆ ಮತ್ತು ಬೇಡಿಕೆ ವ್ಯವಸ್ಥೆ ಮೇಲೆ ಚಿನ್ನದ ಆಮದು ಪರಿಣಾಮ ಬೀರುತ್ತದೆ. ರೂಪಾಯಿ ವಿನಿಮಯ ದರದ ಮೇಲೂ ಇದರ ಪರಿಣಾಮ ಇದ್ದೇ ಇರುತ್ತದೆ ಎಂದು ಮುಖರ್ಜಿ ರಾಜ್ಯಸಭೆಗೆ ತಿಳಿಸಿದ್ದಾರೆ.
ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ವಿದೇಶಿ ವಿನಿಮಯ ಮಾರುಕಟ್ಟೆ ಮೇಲೆ ನಿಗಾ ವಹಿಸುತ್ತಿರುವುದರಿಂದ ಇಂತಹ ಏರಿಳಿತಗಳನ್ನು ತಡೆಯಬಹುದು ಎಂದು ಅವರು ಹೇಳಿದ್ದಾರೆ.
ಸದ್ಯ ದೇಶದಲ್ಲಿ 30 ಚಿನ್ನದ ಗಣಿಗಳಿದ್ದು, ಇಲ್ಲಿ ಲಭಿಸುತ್ತಿರುವ ಚಿನ್ನದ ಅದಿರಿನ ಗುಣಮಟ್ಟವು ತೀರಾ ಕಳಪೆಯಾಗಿದೆ. ಒಂದು ಟನ್ ಅದಿರು ಹೊರತೆಗೆದರೆ, ಅದರಲ್ಲಿ 22 ಗ್ರಾಂಗಳಷ್ಟು ಮಾತ್ರ ಚಿನ್ನ ಲಭಿಸುತ್ತದೆ ಎಂದು ಪ್ರಣವ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.