ADVERTISEMENT

ಆರ್ಥಿಕ ಮೂಲ ಅಂಶಗಳು ಬಲಿಷ್ಠ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2012, 19:30 IST
Last Updated 11 ಆಗಸ್ಟ್ 2012, 19:30 IST

ನವದೆಹಲಿ (ಪಿಟಿಐ): `ದೇಶದ ಆರ್ಥಿಕ ಪ್ರಗತಿಯ ಮುನ್ನೋಟವನ್ನು ಜಾಗತಿಕ ರೇಟಿಂಗ್ ಸಂಸ್ಥೆ ತಗ್ಗಿಸಿ ಪ್ರಕಟಿಸಿರುವ ವರದಿ ಕಳವಳಕಾರಿಯಾಗಿದೆ~ ಎಂದು ಪ್ರತಿಕ್ರಿಯಿಸಿರುವ ಪ್ರಧಾನಿ ಮನಮೋಹನ್ ಸಿಂಗ್, `ನಮ್ಮ ಆರ್ಥಿಕ ವ್ಯವಸ್ಥೆಯ ಮೂಲ ಅಂಶಗಳು ಬಹಳ ಬಲಿಷ್ಠವಾಗಿಯೇ ಇವೆ~ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

`ಈ ಬಗೆಯ ಮುನ್ನೋಟ ವರದಿ ಬಂದಿರುವುದು ಕಳವಳಕಾರಿ ಸಂಗತಿಯೇ. ಆದರೆ, ಖಾಸಗಿ ಸಂಸ್ಥೆಯೊಂದು ನೀಡುವ ಇಂತಹ ನಿರಾಧಾರದ ರೇಟಿಂಗ್ ಪರಿಗಣಿಸಿ ದೇಶದ ಆರ್ಥಿಕ ಪ್ರಗತಿ ಗತಿಯನ್ನು ವಿಶ್ಲೇಷಿಸಲು ಸಾಧ್ಯವಿಲ್ಲ. ಪ್ರತಿಕೂಲ ಸಂಗತಿಗಳ ನಡುವೆಯೂ ಕಳೆದ ಹಣಕಾಸು ವರ್ಷದಲ್ಲಿ ಶೇ 6.5ರಷ್ಟು `ಜಿಡಿಪಿ~ ದಾಖಲಿಸಿದ್ದೇವೆ~ ಎಂದು ಅವರು `ಮೂಡೀಸ್~ ರೇಟಿಂಗ್ ಕುರಿತು ಶನಿವಾರ ಇಲ್ಲಿ ಪ್ರತಿಕ್ರಿಯಿಸಿದ್ದಾರೆ.

`ಜಾಗತಿಕ ಆರ್ಥಿಕ ಅಸ್ಥಿರತೆ~ ಹಿನ್ನೆಲೆಯಲ್ಲಿ ಮೂಡೀಸ್ ಭಾರತದ ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ (ಜಿಡಿಪಿ) ಪ್ರಮಾಣವನ್ನು ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಶೇ 5.5ಕ್ಕೆ ತಗ್ಗಿಸಿ ವರದಿ ಪ್ರಕಟಿಸಿದೆ.

`ಪ್ರವರ್ಧಮಾನಕ್ಕೆ ಬರುತ್ತಿರುವ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕ ವ್ಯವಸ್ಥೆ ಸುಭದ್ರವಾಗಿಯೇ ಇದೆ. ಹೂಡಿಕೆ ಮತ್ತು ಉಳಿತಾಯ ಕೂಡ ಗರಿಷ್ಠ ಮಟ್ಟದಲ್ಲಿವೆ. ಈ ನಿಟ್ಟಿನಲ್ಲಿ 2012-13ನೇ ಸಾಲಿನಲ್ಲಿ ಕಳೆದ ವರ್ಷಕ್ಕಿಂತಲೂ ಉತ್ತಮ `ಜಿಡಿಪಿ~ ನಿರೀಕ್ಷಿಸಬಹುದಾಗಿದೆ~ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿರಾಕರಣೆ ಮನಸ್ಥಿತಿ: ಬಿಜೆಪಿ ಟೀಕೆ
ನವದೆಹಲಿ(ಪಿಟಿಐ): ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು `ನಿರಾಕರಣೆ ಮನಸ್ಥಿತಿ~ಯಲ್ಲಿರುವುದು ತರವಲ್ಲ ಎಂದು ಟೀಕಿಸಿರುವ ಬಿಜೆಪಿ, ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಂಡು ಈಗಿನ ವರದಿಯನ್ನು ಎಚ್ಚರಿಕೆ ಗಂಟೆ ಎಂದು ಪರಿಗಣಿಸುವಂತೆ ಕಿವಿಮಾತು ಹೇಳಿದೆ.

`ರೋಗಿ ಚಿಕಿತ್ಸೆ ಬೇಡ ಎನ್ನುತ್ತಿದ್ದರೆ ಆತ ತನಗೆ ಕಾಯಿಲೆ ಬಂದಿರುವುದನ್ನು ಅರ್ಥ ಮಾಡಿಕೊಂಡಿಲ್ಲ ಎಂದೇ ಅರ್ಥ~ ಎಂದು ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಕುಟುಕಿದ್ದಾರೆ.    ದೇಶದ ಆರ್ಥಿಕ ವ್ಯವಸ್ಥೆಯ ಮೂಲ ಅಂಶಗಳು ಬಲಿಷ್ಠವಾಗಿಯೇ ಇವೆ ಎಂದಿರುವ ಪ್ರಧಾನಿ ಹೇಳಿಕೆ ಅಚ್ಚರಿ ಉಂಟು ಮಾಡುವಂತಿದೆ ಎಂದು ಟೀಕಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.