ಮುಂಬೈ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ ಇದೇ 17ರಂದು ತನ್ನ ವಾರ್ಷಿಕ ಸಾಲ ನೀತಿ ಪ್ರಕಟಗೊಳಿಸಿದ ನಂತರ ಸಾಲಗಳ ಮೇಲಿನ ಬಡ್ಡಿ ದರ ಕಡಿತಗೊಳಿಸುವ ಬಗ್ಗೆ ಆಲೋಚಿಸುವುದಾಗಿ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹೇಳಿದೆ.
`ಭವಿಷ್ಯದಲ್ಲಿ ಸಾಲಗಳ ಮೇಲಿನ ಬಡ್ಡಿದರಗಳನ್ನುಕಡಿಮೆಗೊಳಿಸುವ ಬಗ್ಗೆ ನಾವು ಚಿಂತನೆ ನಡೆಸಲಿದ್ದೇವೆ. ಆದರೆ, ಅದು `ಆರ್ಬಿಐ~ ಕಡಿತಗೊಳಿಸಲಿರುವ ನಗದು ಮೀಸಲು ಅನುಪಾತವನ್ನು (ಸಿಆರ್ಆರ್) ಅವಲಂಬಿಸಿದೆ~ ಎಂದು ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಎ.ಕೃಷ್ಣ ಕುಮಾರ್ ಹೇಳಿದರು.
ಮುಂಬೈನಲ್ಲಿ ನಡೆದ ಆರನೇ ಅಂತರರಾಷ್ಟ್ರೀಯ ಬ್ಯಾಂಕಿಗ್ ಮತ್ತು ಹಣಕಾಸು ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.`ಆರ್ಬಿಐ ನಗದು ಮೀಸಲು ಅನುಪಾತ ಕಡಿಮೆಯಾಗಬಹುದು ಎಂಬುದು ನನ್ನ ನಿರೀಕ್ಷೆ. ಆದರೆ, ರೆಪೊ ದರದ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ~ ಎಂದು ಏಪ್ರಿಲ್ 17ರಂದು ಪ್ರಕಟಗೊಳ್ಳಲಿರುವ ಆರ್ಬಿಐ ವಾರ್ಷಿಕ ಸಾಲ ನೀತಿಯ ಬಗೆಗಿನ ನಿರೀಕ್ಷೆಗಳ ಕುರಿತಾಗಿ ಮಾತನಾಡುತ್ತಾ ಅವರು ಹೇಳಿದರು.
ಬ್ಯಾಂಕ್ಗಳು ತಮ್ಮ ಒಟ್ಟು ಠೇವಣಿಗಳ ನಿರ್ದಿಷ್ಟ ಮೊತ್ತವನ್ನು ರಿಸರ್ವ್ ಬ್ಯಾಂಕ್ನಲ್ಲಿ ಠೇವಣಿ ಇಡುವುದು ನಗದು ಮೀಸಲು ಅನುಪಾವಾಗಿದೆ. ಸದ್ಯಕ್ಕೆ ಇದು ಶೇ 4.75ರಷ್ಟು ಇದೆ. ಆರ್ಬಿಐಯು ತನ್ನ ವಾರ್ಷಿಕ ಸಾಲ ನೀತಿಯಲ್ಲಿ `ಸಿಆರ್ಆರ್~ದಲ್ಲಿ ಶೇ 0.75ರಷ್ಟು ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಈ ಮೊದಲು ಎಸ್ಬಿಐ ಅಧ್ಯಕ್ಷ ಪ್ರತೀಪ್ ಚೌಧರಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.