ಚಿತ್ರದುರ್ಗ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆ ಹಾಗೂ ಬಿರು ಗಾಳಿಗೆ ಮೂರು ತಾಲ್ಲೂಕುಗಳ 387.96 ಹೆಕ್ಟೇರ್ ಪ್ರದೇಶದ ತೋಟ ಗಾರಿಕಾ ಬೆಳೆಗಳು ನಾಶವಾಗಿದ್ದು, ಅಂದಾಜು ರೂ. 20.99 ಕೋಟಿಯಷ್ಟು ನಷ್ಟವಾಗಿದೆ.
ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮುರು ತಾಲ್ಲೂಕುಗಳ ಕಂದಿಕೆರೆ, ರಂಗೇನಹಳ್ಳಿ, ಧರ್ಮಪುರ ಸೇರಿದಂತೆ ವಿವಿಧ ಹಳ್ಳಿಗಳಲ್ಲಿನ ತೋಟ ಗಾರಿಕಾ ಬೆಳೆಗಳು ನೆಲಕಚ್ಚಿವೆ. ಬೆಳೆ ಹಾನಿಗೊಳಗಾಗಿರುವ ಹಳ್ಳಿಗಳಿಗೆ ಭೇಟಿ ನೀಡಿರುವ ಸಹಾಯಕ ತೋಟಗಾರಿಕಾ ಇಲಾಖೆ ಅಧಿಕಾರಿಗಳು, ಬೆಳೆ ನಷ್ಟದ ಪ್ರಮಾಣವನ್ನು ಅಂದಾಜಿಸಿದ್ದಾರೆ. ಆ ಪ್ರಕಾರ 96 ಹೆಕ್ಟೇರ್ ದಾಳಿಂಬೆ, 92 ಹೆಕ್ಟೇರ್ ಈರುಳ್ಳಿ, 44 ಹೆಕ್ಟೇರ್ ಬಾಳೆ, 49 ಹೆಕ್ಟೇರ್ ಅಡಿಕೆ ನಾಶವಾಗಿದೆ. 34 ಹೆಕ್ಟೇರ್ ಸಪೋಟ, 22 ಹೆಕ್ಟೇರ್ ಪಪ್ಪಾಯ, 11 ಹೆಕ್ಟೇರ್ ಮೂಸಂಬಿ, 12.40 ಹೆಕ್ಟೇರ್ ಕಲ್ಲಂಗಡಿ ಬೆಳೆ ಹಾಳಾಗಿದೆ.
ಇಲಾಖೆಗೆ ಲಭ್ಯವಾಗಿರುವ ಮಾಹಿತಿಗಿಂತ ಅತಿ ಹೆಚ್ಚು ಪ್ರಮಾಣದಲ್ಲಿ ತೋಟಗಾರಿಕಾ ಬೆಳೆ ನಷ್ಟವಾಗಿದೆ. ಈ ನಷ್ಟದ ಪ್ರಮಾಣವನ್ನು ಯಾರಿಗೆ ತಿಳಿಸಬೇಕು, ಎಲ್ಲಿಗೆ ತಿಳಿಸಬೇಕೆಂದು ಗೊತ್ತಾಗುತ್ತಿಲ್ಲ ಎಂದ ಅಡವಿ ರಾಮಜೋಗಿಹಳ್ಳಿಯ ಕೃಷಿಕ ಮಲ್ಲಿಕಾರ್ಜುನ, ‘ಇತ್ತೀಚೆಗೆ ಸುರಿದ ಮಳೆ ಮತ್ತು ಬೀಸಿದ ಬಿರುಗಾಳಿಗೆ ರೂ. 4 ಲಕ್ಷ ಮೊತ್ತದ ಸಪೋಟ ಫಸಲು ಹಾಳಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಹಿರಿಯೂರು ತಾಲ್ಲೂಕಿನಲ್ಲಿ 323.24 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ರೂ. 19.63 ಕೋಟಿ ನಷ್ಟ ಸಂಭವಿಸಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 25 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ರೂ. 54.39 ಕೋಟಿ ಮೊತ್ತದ ಬೆಳೆ ನಷ್ಟವಾಗಿದೆ. ಈ ಪ್ರದೇಶದಲ್ಲಿ ಈರುಳ್ಳಿ ಬೆಳೆ ಹೆಚ್ಚು ನಷ್ಟವಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 14.4 ಹೆಕ್ಟೇರ್ ಪ್ರದೇಶದಲ್ಲಿ ರೂ. 53. 96 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ.
‘ಈ ಮೂರು ತಾಲ್ಲೂಕಿನಲ್ಲೂ ದೊಡ್ಡ ಪ್ರಮಾಣದಲ್ಲಿ ತೋಟಗಾರಿಕಾ ಬೆಳೆಗಳು ನಾಶವಾಗಿವೆ. ಕೆಲವು ಕಡೆ ಶೇ 90ರಷ್ಟು ಬೆಳೆ ನಷ್ಟವಾಗಿದೆ. ಬೆಳೆ ಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ವರದಿ ಸಿದ್ದಪಡಿಸಲಾಗಿದೆ. ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುತ್ತೇವೆ’ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ದೇವರಾಜ್ ತಿಳಿಸಿದ್ದಾರೆ.
ಸರ್ಕಾರದ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿ ಮಾರ್ಗ ಸೂಚಿ ಪ್ರಕಾರ ಮಾವು, ಪಪ್ಪಾಯ, ದಾಳಿಂಬೆಯಂತಹ ಬಹುವಾರ್ಷಿಕ ಬೆಳೆ ಶೇ 50ಕ್ಕಿಂತ ಹೆಚ್ಚು ನಷ್ಟವಾಗಿದ್ದರೆ ಹೆಕ್ಟೇರ್ಗೆ ರೂ. 12 ಸಾವಿರ, ಅಪೇಕ್ಷಿತ ನೀರಾವರಿ ಸೌಲಭ್ಯ (ಕೊಳವೆ ಬಾವಿ, ಕೆನಾಲ್, ಜಲಾಶಯ ಆಶ್ರಿತ) ವಾರ್ಷಿಕ ಬೆಳೆಗಳಿಗೆ ಹೆಕ್ಟೇರ್ಗೆ ರೂ. 9 ಸಾವಿರ ಹಾಗೂ ಮಳೆಯಾಶ್ರಿತ ತೋಟಗಾರಿಕಾ ಬೆಳೆಗಳಿಗೆ ಹೆಕ್ಟೇರ್ಗೆ ರೂ. 4,500 ಪರಿಹಾರ ನೀಡಬಹುದು. ಪರಿಹಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ತಹಶೀಲ್ದಾರ್ ಕಚೇರಿಯಲ್ಲಿ ಮಾಹಿತಿ ಪಡೆಯಬಹುದು.
ತೋಟಗಾರಿಕಾ ಇಲಾಖೆ ಕೇವಲ ಇಂತಿಷ್ಟು ಪರಿಹಾರ ನೀಡಬಹುದು ಎಂದು ಶಿಫಾರಸು ಮಾಡುತ್ತದೆ ಎಂದು ದೇವರಾಜ್ ತಿಳಿಸಿದ್ದಾರೆ.
ಅಧಿಕಾರಿಗಳ ಪ್ರತಿಕ್ರಿಯೆ
ತೋಟಗಾರಿಕಾ ಇಲಾಖೆಯ ವರದಿ ಬಂದಕೂಡಲೇ ಅದನ್ನು ರಾಜ್ಯ ಸರ್ಕಾರಕ್ಕೆ ರವಾನಿಸುತ್ತೇನೆ. ಪರಿಹಾರ ನೀಡುವಂತೆ ಶಿಫಾರಸು ಮಾಡುತ್ತೇನೆ. ಯಾವುದೇ ವಿಶೇಷ ಪ್ಯಾಕೇಜ್ಗಳ ಬಗ್ಗೆ ಇಲ್ಲಿಯವರೆವಿಗೂ ಮಾಹಿತಿ ಇಲ್ಲ. ಸರ್ಕಾರ ಏನು ಪರಿಹಾರ ನೀಡುತ್ತದೆಯೋ, ಅದನ್ನು ರೈತರಿಗೆ ತಲುಪಿಸುತ್ತವೆ.
- ವಿ.ಪಿ.ಇಕ್ಕೇರಿ, ಜಿಲ್ಲಾಧಿಕಾರಿ, ಚಿತ್ರದುರ್ಗ
ಸರ್ಕಾರ ನೀಡುವ ಪರಿಹಾರ ಸಾಕಾಗುವುದಿಲ್ಲ. ಹಾಗೆಂದು ರೈತರು ಸರ್ಕಾರದ ಪರಿಹಾರದ ಮೇಲೆ ಅವಲಂಬಿತವಾಗಬಾರದು. ದುಬಾರಿ ಬೆಲೆ ತೆತ್ತು ಬೆಳೆ ಬೆಳೆಯುವ ರೈತರು, ಆ ಬೆಳೆಗೆ ವಿಮೆ ಮಾಡಿಸುವುದು ಅತ್ಯಂತ ಅವಶ್ಯ. ವಿಮೆ ಮಾಡಿಸುವುದರಿಂದ ಸರ್ಕಾರದ ಪರಿಹಾರದ ಜೊತೆಗೆ ವಿಮಾ ಹಣ ಕೂಡ ಇಂಥ ಸಂದರ್ಭದಲ್ಲಿ ನೆರವಾಗುತ್ತದೆ.
-ದೇವರಾಜ್ ಉಪ ನಿರ್ದೇಶಕರು, ತೋಟಗಾರಿಕಾ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.