ADVERTISEMENT

ಆಹಾರ ಹಣದುಬ್ಬರ: 3ನೇ ವಾರವೂ ಋಣಾತ್ಮಕ ಇಳಿಕೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 19:30 IST
Last Updated 20 ಜನವರಿ 2012, 19:30 IST

ನವದೆಹಲಿ (ಪಿಟಿಐ): ಸತತ ಮೂರನೇ ವಾರವೂ ಆಹಾರ ಹಣದುಬ್ಬರವು ಋಣಾತ್ಮಕ ವಲಯದಲ್ಲಿ ಮುಂದುವರೆದಿದ್ದು, ಜನವರಿ 7ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಶೇ (-) 0.42ರಷ್ಟಾಗಿದೆ.

ತರಕಾರಿ ಮತ್ತು ಈರುಳ್ಳಿ ಬೆಲೆ ಅಗ್ಗವಾಗಿರುವುದೇ ಇದಕ್ಕೆ ಮುಖ್ಯ ಕಾರಣ. ಸಗಟು ಬೆಲೆ ಸೂಚ್ಯಂಕ ಆಧರಿಸಿ ಅಳೆಯಲಾಗುವ ಆಹಾರ ಹಣದುಬ್ಬರವು 2011ರ ಇದೇ ಅವಧಿಯಲ್ಲಿ ಶೇ 16ಕ್ಕಿಂತ ಹೆಚ್ಚಿನ ಮಟ್ಟದಲ್ಲಿತ್ತು.
ಆಹಾರ ಹಣದುಬ್ಬರ ಇಳಿಕೆ ಮತ್ತು ಸಮಗ್ರ ಹಣದುಬ್ಬರವು ಸಾಧಾರಣ ಮಟ್ಟದಲ್ಲಿ ಇರುವುದು, ಅಲ್ಪಾವಧಿ ಬಡ್ಡಿ ದರಗಳನ್ನು ಇಳಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಉತ್ತೇಜನ ನೀಡಲಿವೆ ಎಂದು ಪರಿಣತರು ವಿಶ್ಲೇಷಿಸಿದ್ದಾರೆ.

ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಈರುಳ್ಳಿ ಬೆಲೆ ಶೇ 75ರಷ್ಟು, ಆಲೂಗಡ್ಡೆ ಶೇ 24, ಗೋಧಿ ಶೇ 3.57ರಷ್ಟು ಅಗ್ಗವಾಗಿವೆ. ಪರಾಮರ್ಶೆಗೆ ಒಳಪಟ್ಟ ವಾರದಲ್ಲಿ ಒಟ್ಟಾರೆ ತರಕಾರಿ ಬೆಲೆಗಳು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 46ರಷ್ಟು ಇಳಿದಿವೆ.

ಪ್ರೋಟಿನ್ ಆಧಾರಿತ ಇತರ ಆಹಾರ ಪದಾರ್ಥಗಳು ತುಟ್ಟಿಯಾಗಿವೆ. ಬೇಳೆಕಾಳು ಬೆಲೆ ಶೇ 14, ಹಾಲು ಶೇ 11, ಹಣ್ಣು ಶೇ 10, ಮೊಟ್ಟೆ, ಮಾಂಸ ಮತ್ತು ಮೀನು ಶೇ 20ರಷ್ಟು ಏರಿಕೆಯಾಗಿವೆ.ಒಟ್ಟಾರೆ ಪ್ರಾಥಮಿಕ ಸರಕುಗಳ ಬೆಲೆ ಏರಿಕೆಯು ಶೇ 2.47ರಷ್ಟಿದೆ. ಇದು ಹಿಂದಿನ ವಾರ ಶೇ 0.51ರಷ್ಟಿತ್ತು. ಸಗಟು ಬೆಲೆ ಸೂಚ್ಯಂಕದಲ್ಲಿ ಪ್ರಾಥಮಿಕ ಸರಕುಗಳು ಶೇ 20ರಷ್ಟು ಪಾಲು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.