ಕನ್ನಡಿಗರಲ್ಲಿ ‘ನಮ್ಮ ಬ್ಯಾಂಕ್’, ‘ಮೈ ಬ್ಯಾಂಕ್’, ‘ಮೈಸೂರು ಬ್ಯಾಂಕ್’ ಎಂದೇ ಜನಜನಿತವಾಗಿದ್ದ, ನೂರಾ ಮೂರು ವರುಷಗಳಿಗೂ ಹೆಚ್ಚಿನ ಇತಿಹಾಸ ಹೊತ್ತ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 31ನೇ ಮಾರ್ಚ್ 2017ರಂದು ತನ್ನ ಕೊನೆಯ ದಿನದ ವಹಿವಾಟನ್ನು ನಡೆಸಿ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ವಿಲೀನವಾಗಿದೆ.
ನೋಡನೋಡುತ್ತಿದ್ದಂತೆಯೇ ಶತಮಾನದಿಂದ ರಾರಾಜಿಸುತ್ತಿದ್ದ ಮೈಸೂರು ಬ್ಯಾಂಕಿನ ನಾಮಫಲಕಗಳು ಕೆಳಗಿಳಿದವು. ಮೊಬೈಲ್ ಗುಂಡಿ ಒತ್ತುತ್ತಿದ್ದಂತೆಯೇ ಗುನುಗುನಿಸುತ್ತಿದ್ದ ‘ವೆಲ್ಕಂ ಟು ಮೈಸೂರು ಬ್ಯಾಂಕ್’ ಎಂಬ ಸುಶ್ರಾವ್ಯ ಕಾಲರ್ ಟ್ಯೂನ್ ಹಾಡುವುದನ್ನು ನಿಲ್ಲಿಸಿತು. ಬ್ಯಾಂಕಿನೊಡನೆ ತಮ್ಮನ್ನು ತಾವು ಗುರುತಿಸಿಕೊಂಡಿದ್ದ ಸಿಬ್ಬಂದಿ, ನಿವೃತ್ತ ಉದ್ಯೋಗಿಗಳು, ಗ್ರಾಹಕರು, ಕೊನೆಯ ಬಾರಿಗೆ ತಮ್ಮ ಶಾಖೆ/ಕಚೇರಿಗಳು, ಪ್ರಧಾನ ಕಚೇರಿಯ ಮುಂದೆ ಸಮೂಹ ಛಾಯಾಚಿತ್ರ, ಸೆಲ್ಫೀ ತೆಗೆದುಕೊಂಡರು.
ಬ್ಯಾಂಕಿನ ಜತೆಗಿನ ಅನುಭವ ಕುರಿತ ಬರಹ, ಪದ್ಯ, ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಲಕ್ಷಾಂತರ ಗ್ರಾಹಕರು ಮುಂದೇನು? ಎಂದು ಪ್ರಶ್ನಿಸತೊಡಗಿದರು. ಬ್ಯಾಂಕ್ನೊಡನೆ ಭಾವನಾತ್ಮಕ ಸಂಬಂಧ ಹೊಂದಿದ್ದ ಪ್ರತಿಯೊಬ್ಬರಲ್ಲೂ ಕ್ಷಣಕಾಲ ಮೌನ ಆವರಿಸಿತ್ತು. ಕಣ್ಣುಗಳು ತೇವಗೊಂಡಿದ್ದವು. ರಾತ್ರಿ ಬೆಳಗಾಗುವುದರೊಳಗೆ ಮೈಸೂರು ಬ್ಯಾಂಕ್ ‘ಎಸ್ ಬಿ ಐ’ ಎಂದು ಕರೆಸಿಕೊಂಡಿತು. ವ್ಯಾವಹಾರಿಕ ಜಗತ್ತು ಮತ್ತೆ ಎಂದಿನಂತೆ ಬದಲಾವಣೆಯ ಪರ್ವವನ್ನು ದಾಟಿ ಮುಂದುವರಿಯಲು ಸಜ್ಜಾಗಿದೆ.
ಏಪ್ರಿಲ್ 1ರಂದು ಸ್ಟೇಟ್ ಬ್ಯಾಂಕ್ ಮೈಸೂರಿನ ಒಂದು ಕೋಟಿಯಷ್ಟು ಗ್ರಾಹಕರು ಭಾರತೀಯ ಸ್ಟೇಟ್ ಬ್ಯಾಂಕಿನ ಗ್ರಾಹಕರಾಗಿ ಪರಿವರ್ತನೆಗೊಂಡರು. ಸುಮಾರು ₹ 1.35 ಲಕ್ಷ ಕೋಟಿ ವಹಿವಾಟು ಹೊಂದಿದ್ದ ಮೈಸೂರು ಬ್ಯಾಂಕಿನ ಎಲ್ಲಾ ಬಗೆಯ ಠೇವಣಿ ಖಾತೆಗಳು, ಗೃಹ ಸಾಲ, ಆಭರಣ ಸಾಲ, ಕೃಷಿ ಸಾಲ, ವ್ಯಾಪಾರ-ಕೈಗಾರಿಕಾ ಸಾಲ ಸೇರಿದಂತೆ ವಿವಿಧ ಬಗೆಯ ಮುಂಗಡ ಖಾತೆಗಳು, ಎಟಿಎಂಗಳು ಮಾತ್ರವಲ್ಲದೆ ಬ್ಯಾಂಕಿನ 1000ಕ್ಕೂ ಹೆಚ್ಚಿನ ಶಾಖೆ-ಕಚೇರಿಗಳು, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಬ್ಯಾಂಕಿನ ಬೆಂಗಳೂರು ಶಾಖೆಯ ಬೃಹತ್ ಕಲ್ಲಿನ ಕಟ್ಟಡ, ಐವತ್ತು ವರ್ಷಗಳ ಹಿಂದಿನ ಅತ್ಯಾಕರ್ಷಕ ಬಹುಮಹಡಿಯ ಪ್ರಧಾನ ಕಚೇರಿ, ನಾಡಿನ ವಿವಿಧೆಡೆಗಳಲ್ಲಿ ಹೊಂದಿರುವ ನೂರಾರು ಸ್ವಂತ ಕಟ್ಟಡಗಳು ಮತ್ತು ನಿವೇಶನಗಳು ಹಾಗೂ ಬ್ಯಾಂಕಿನ ಆಸ್ತಿಪಾಸ್ತಿ-ಸಾಲ ನೀಡಿಕೆಗೆ ಸಂಬಂಧಿಸಿದ ಸಂಪೂರ್ಣ ದಸ್ತಾವೇಜುಗಳು, ಕಂಪ್ಯೂಟರೀಕೃತ ದಾಖಲೆಗಳು, ಎಲ್ಲಾ ಹಳೆಯ ಕಡತಗಳು ಅಂದು ಭಾರತೀಯ ಸ್ಟೇಟ್ ಬ್ಯಾಂಕಿನ ಸುಪರ್ದಿಗೆ ಸೇರಿತು.
ಮೈಸೂರು ಬ್ಯಾಂಕಿನ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹತ್ತು ಸಾವಿರದಷ್ಟು ಸಿಬ್ಬಂದಿ ಸಹಾ ಅಂದು ದೇಶದ ಅತಿ ದೊಡ್ಡ ಬ್ಯಾಂಕ್ ಆದ ಎಸ್.ಬಿ.ಐ.ನ ಹಾಜರಾತಿ ಪುಸ್ತಕದಲ್ಲಿ ದಾಖಲಾದರು. ಈ ಪರಿವರ್ತನೆಯ ಪ್ರಕ್ರಿಯೆಗೆ ಭಾವನಾ ತ್ಮಕವಾಗಿ ಸ್ಪಂದಿಸಲು ಹಿಂದೇಟು ಹಾಕುವ ಉದ್ಯೋಗಿಗಳಿಗೆ ಅನುಕೂಲ ವಾಗುವಂತೆ ವಿಶೇಷ ಸ್ವಯಂ ನಿವೃತ್ತಿ ಯೋಜನೆಯೊಂದನ್ನು ಸಹಾ ಘೋಷಿಸಲಾಯಿತು.
ಮೈಸೂರು ಬ್ಯಾಂಕಿನ ಸ್ಥಾಪನೆ
ಮೈಸೂರು ಬ್ಯಾಂಕ್ ಸ್ಥಾಪನೆಯಾದದ್ದು 103 ವರ್ಷಗಳ ಹಿಂದೆ ದಸರಾ ಮಹೋತ್ಸವದ ಸಂದರ್ಭದಲ್ಲಿ. 2ನೆಯ ಅಕ್ಟೋಬರ್ 1913ರಂದು ಬೆಂಗಳೂರಿನ ಅವೆನ್ಯೂ ರಸ್ತೆಯ ಸಣ್ಣ ಕಟ್ಟಡವೊಂದರಲ್ಲಿ ಬ್ಯಾಂಕ್ ಅಸ್ತಿತ್ವಕ್ಕೆ ಬಂದಿತು. ಬ್ಯಾಂಕಿನ ಸ್ಥಾಪನೆಗೆ ಮೂಲ ಕಾರಣ ಅಂದಿನ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮೈಸೂರು ಸರ್ಕಾರದ ದಿವಾನಸರ್ ಎಂ. ವಿಶ್ವೇಶ್ವರಯ್ಯನವರ ದಿಟ್ಟ ನಿರ್ಧಾರಗಳು.
ಮೈಸೂರು ರಾಜ್ಯ ಸರ್ಕಾರದ ಆಶ್ರಯದಲ್ಲಿ ಬ್ಯಾಂಕೊಂದರ ಸ್ಥಾಪನೆಯ ವಿಷಯ ಮೊದಲು ಮೊಳಕೆಯೊಡೆದದ್ದು 1911ರ ಜೂನ್ 10ರಂದು ನಡೆದ ಮೈಸೂರು ಆರ್ಥಿಕ ಸಮ್ಮೇಳನದ ಪ್ರಥಮ ಅಧಿವೇಶನದಲ್ಲಿ.
ರಾಜ್ಯದ ಕೃಷಿ, ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಸಮ್ಮೇಳನವು ಸರ್ಕಾರಿ ಪ್ರಾಯೋಜಿತ ಬ್ಯಾಂಕೊಂದರ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ ಎಂ.ವಿಶ್ವೇಶ್ವರಯ್ಯನವರ ಅಧ್ಯಕ್ಷತೆಯಲ್ಲಿ ‘ಬ್ಯಾಂಕಿಂಗ್ ಸಮಿತಿ’ಯನ್ನು ರಚಿಸಿತು.
ಆ ದಿನಗಳಲ್ಲಿ ದೇಶದ ಆರ್ಥಿಕ ವಾತಾವರಣ ಬ್ಯಾಂಕ್ ಸ್ಥಾಪನೆಗೆ ಪೂರಕವಾಗಿರಲಿಲ್ಲ. ಸ್ವಲ್ಪ ದಿನಗಳ ಹಿಂದಷ್ಟೇ ಬರ್ಮಾದಲ್ಲಿ (ಸದ್ಯದ ಮ್ಯಾನ್ಮಾರ್) ಸದೃಢ ಬ್ಯಾಂಕೊಂದು ನೆಲ ಕಚ್ಚಿ ದೇಶದ ಬಹುಭಾಗದ ವ್ಯಾಪಾರಿಗಳಲ್ಲಿ ತಲ್ಲಣ ಉಂಟುಮಾಡಿತ್ತು. ಆದರೆ ಆ ಸಂದರ್ಭದಲ್ಲಿಯೇ ‘ಸ್ವದೇಶೀ ಚಳವಳಿ’ ಸಹಾ ಬಲಗೊಂಡು ಸ್ವದೇಶೀ ಬ್ಯಾಂಕುಗಳ ಕಡೆ ಸಾರ್ವಜನಿಕರಲ್ಲಿ ಒಲವು ಮೂಡಲು ಶುರುವಾಗಿತ್ತು.
ಅಲ್ಲದೇ ಸ್ಥಳೀಯ ಲೇವಾದೇವಿಗಾರರ ಕಿರುಕುಳವೂ ಸಾಕಷ್ಟಿತ್ತು. 1906ರಲ್ಲಿ ಅಂದಿನ ಬರೋಡಾ ಮಹಾರಾಜರ ಕೃಪಾಶ್ರಯದಲ್ಲಿ ಸಾರ್ವಜನಿಕರ ಹೂಡಿಕೆಯೊಂದಿಗೆ ಪ್ರಾರಂಭವಾದ ‘ಬರೋಡಾ ಬ್ಯಾಂಕ್’ ಮೈಸೂರು ಮಹಾರಾಜರ ಸರ್ಕಾರಕ್ಕೆ ಪ್ರೇರಣೆ ನೀಡಿತ್ತು.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ಸರ್ ಎಂ. ವಿಶ್ವೇಶ್ವರಯ್ಯನವರ ನೇತೃತ್ವದ ಬ್ಯಾಂಕಿಂಗ್ ಸಮಿತಿ 2ನೇ ಮೇ 1912ರಂದು ನಡೆಸಿದ ತನ್ನ ಸಭೆಯಲ್ಲಿ ರಾಜ್ಯದ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ನೆರವಿನಿಂದ ‘ಬ್ಯಾಂಕ್ ಆಫ್ ಮೈಸೂರು’ ಎಂಬ ಹೆಸರಿನ ಬ್ಯಾಂಕಿನ ಸ್ಥಾಪನೆಗೆ ಶಿಫಾರಸು ಮಾಡಿತು.
ಜೂನ್ 1912ರಲ್ಲಿ ನಡೆದ ಮೈಸೂರು ಆರ್ಥಿಕ ಸಮ್ಮೇಳನದಲ್ಲಿ ಈ ಶಿಫಾರಸುಗಳು ಅಂಗೀಕೃತವಾಗಿ, ನಂತರ 31ನೇ ಜನವರಿ 1913ರಂದು ಬ್ಯಾಂಕಿನ ಸ್ಥಾಪನೆಗೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಅಂಕಿತ ದೊರೆಯಿತು.
19ನೇ ಮೇ 1913ರಂದು ಕಂಪೆನಿಯಾಗಿ ನೋಂದಾವ ಣೆಗೊಂಡಿತು. ಇದಕ್ಕೆ ಸರಿಯಾಗಿ 103 ವರ್ಷಗಳ ನಂತರ ಅಂದರೆ 17ನೇ ಮೇ 2016ರಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನಿರ್ದೇಶಕ ಮಂಡಳಿಯು ಬ್ಯಾಂಕನ್ನು ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ವಿಲೀನಗೊಳಿಸುವ ನಿರ್ಣಯವನ್ನು ಅಂಗೀಕರಿಸಿತು. ಆರಂಭದ ದಿನಗಳಲ್ಲಿ ಬ್ಯಾಂಕಿನ ಷೇರು ಕೊಳ್ಳಲು ಸಾರ್ವಜನಿಕರು ಮುಗಿಬಿದ್ದ ಕಾರಣ ಕೆಲವೇ ದಿನಗಳಲ್ಲಿ ಷೇರುಗಳು ನಿಗದಿಗಿಂತ ಹೆಚ್ಚಿನ ಬೇಡಿಕೆ ಕಂಡಿದ್ದವು.
ಇಂದು ಬ್ಯಾಂಕಿನ ಬಂಡವಾಳದ ಶೇ 92.33ರಷ್ಟು ಷೇರುಗಳನ್ನು ಭಾರತೀಯ ಸ್ಟೇಟ್ ಬ್ಯಾಂಕು ತನ್ನ ಸುಪರ್ದಿಯಲ್ಲಿರಿಸಿಕೊಂಡಿದ್ದರೆ ಉಳಿದ ಶೇ 7.67 ಭಾಗ ಖಾಸಗಿಯವರದು. ವಿಲೀನದ ನಂತರ ಹಾಲಿ ಷೇರುದಾರರಿಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ₹ 10 ಮುಖ ಬೆಲೆಯ 10 ಷೇರುಗಳಿಗೆ ಪ್ರತಿಯಾಗಿ ಭಾರತೀಯ ಸ್ಟೇಟ್ ಬ್ಯಾಂಕಿನ ₹ 1 ಮುಖ ಬೆಲೆಯ 22 ಷೇರುಗಳನ್ನು ನೀಡಲಾಗುವುದೆಂದು ಘೋಷಿಸಲಾಗಿದೆ.
ನಿರಂತರ ಲಾಭ
ತನ್ನ ಪ್ರಾರಂಭಿಕ ವರ್ಷ 1913ರಿಂದ 2016ರವರೆಗಿನ ಎಲ್ಲಾ 103 ವರುಷಗಳೂ ಸತತವಾಗಿ ಲಾಭ ಗಳಿಸಿರುವುದು ಮೈಸೂರು ಬ್ಯಾಂಕಿನ ಪ್ರಮುಖ ಹೆಗ್ಗಳಿಕೆಯಾಗಿದೆ.
ಮೈಸೂರು ಬ್ಯಾಂಕಿನಲ್ಲಿ ಇತರ ಬ್ಯಾಂಕುಗಳ ವಿಲೀನ
ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಅಸ್ತಿತ್ವದಲ್ಲಿದ್ದ ‘ರಾಮದುರ್ಗ ಬ್ಯಾಂಕ್ ಲಿಮಿಟೆಡ್’ 10ನೇ ನವೆಂಬರ್ 1963ರಂದು ಹಾಗೂ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಮಲ್ನಾಡ್ ಬ್ಯಾಂಕ್ ಲಿಮಿಟೆಡ್’ 6ನೇ ಅಕ್ಟೋಬರ್ 1965ರಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ವಿಲೀನಗೊಂಡಿದ್ದವು.