ADVERTISEMENT

ಎರಡಂಕಿ ತಲುಪಿದ ಆಹಾರ ಹಣದುಬ್ಬರ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2011, 19:30 IST
Last Updated 2 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಐದು ತಿಂಗಳ  ನಂತರ, ಆಹಾರ ಹಣದುಬ್ಬರವು ಮತ್ತೆ ಎರಡಂಕಿಗೆ ತಲುಪಿದೆ.ಆಗಸ್ಟ್ 20ಕ್ಕೆ ಕೊನೆಗೊಂಡ  ವಾರಾಂತ್ಯದಲ್ಲಿ, ಸಗಟು ಬೆಲೆ ಸೂಚ್ಯಂಕ ಆಧರಿಸಿ ಅಳೆಯಲಾಗುವ ವಾರದ ಆಹಾರ ಹಣದುಬ್ಬರವು ಶೇ 10.5ರಷ್ಟಾಗಿದೆ. ಈರುಳ್ಳಿ, ತರಕಾರಿ, ಹಣ್ಣು ಮತ್ತು ಪ್ರೋಟಿನ್ ಆಧರಿಸಿದ ಪದಾರ್ಥಗಳು ತುಟ್ಟಿಯಾಗಿರುವುದರಿಂದ ಆಹಾರ ಬೆಲೆ ಏರಿಕೆಯು ಹಿಂದಿನ ವಾರದ ಶೇ 9.80ರಿಂದ ಈ ಏರಿಕೆ ದಾಖಲಿಸಿದೆ. ಈ ಹಿಂದೆ ಮಾರ್ಚ್ 12ರಂದು ಇದು ಶೇ 10ರ ಗಡಿ ದಾಟಿತ್ತು.

ಈ ಬೆಳವಣಿಗೆಯು ಆತಂಕಕಾರಿಯಾಗಿದ್ದು, ಆಹಾರ ಪದಾರ್ಥಗಳ ಪೂರೈಕೆಯಲ್ಲಿ ಎದುರಾಗುವ ಅಡಚಣೆಗಳನ್ನು ದೂರ ಮಾಡಬೇಕಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ.ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, ಈರುಳ್ಳಿ ಶೇ 57, ಆಲೂಗಡ್ಡೆ ಶೇ 13, ಹಣ್ಣು ಶೇ 21 ಮತ್ತು ತರಕಾರಿಗಳು ಶೇ 16ರಷ್ಟು ತುಟ್ಟಿಯಾಗಿವೆ.

ಪ್ರೋಟಿನ್ ಸಮೃದ್ಧವಾಗಿರುವ ಮೊಟ್ಟೆ, ಮಾಂಸ ಮತ್ತು ಮೀನು ಬೆಲೆ ಶೇ 13ರಷ್ಟು ಏರಿಕೆ ಕಂಡಿದ್ದರೆ, ಹಾಲು ಶೇ 9 ಮತ್ತು ದವಸ ಧಾನ್ಯಗಳು ಶೇ 5ರಷ್ಟು ತುಟ್ಟಿಯಾಗಿವೆ. ಸಗಟು ಬೆಲೆ ಸೂಚ್ಯಂಕದಲ್ಲಿ ಆಹಾರ ಪದಾರ್ಥಗಳು ಶೇ 14ರಷ್ಟು ಪಾಲು ಹೊಂದಿವೆ.ಈ ಬೆಲೆ ಏರಿಕೆಗೆ ಋತುಮಾನ ಸಂಬಂಧಿ ವಿದ್ಯಮಾನಗಳು ಮುಖ್ಯ ಕಾರಣ ಎಂದು ಬಣ್ಣಿಸಿರುವ ಪರಿಣತರು,  ಬ್ಯಾಂಕ್ ಬಡ್ಡಿ ದರಗಳನ್ನು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಮತ್ತೆ ಒತ್ತಡ ಹೇರಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಭಿವೃದ್ಧಿ ಬಗ್ಗೆ ಸರ್ಕಾರ ಯಾವತ್ತೂ ಕಾಳಜಿ ಹೊಂದಿರುತ್ತದೆ. ಆದರೆ, ಹಣದುಬ್ಬರ, ಅಭಿವೃದ್ಧಿಯ ಸಮತೋಲನ. ಹೀಗೆ ಪ್ರತಿಯೊಂದು ಆರ್ಥಿಕ ವಿದ್ಯಮಾನವನ್ನು  ಸಮರ್ಥವಾಗಿ ನಿಭಾಯಿಸುವ ಹೊಣೆ ಕೇಂದ್ರೀಯ ಬ್ಯಾಂಕ್ ಮೇಲೆ ಇದೆ ಎಂದು `ಆರ್‌ಬಿಐ~ನ ಡೆಪ್ಯುಟಿ ಗವರ್ನರ್ ಕೆ. ಸಿ. ಚಕ್ರವರ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.