ಬೆಂಗಳೂರು: ವೈಮಾನಿಕ ಮತ್ತು ಅತ್ಯಾಧುನಿಕ ರಕ್ಷಣಾ ಉತ್ಪನ್ನಗಳ ತಯಾರಿಕೆಗೆ ಮೀಸಲಾದ ಏರೋಸ್ಪೇಸ್ ಪಾರ್ಕ್ 2,990 ಎಕರೆ ಪ್ರದೇಶದಲ್ಲಿ ಸ್ಥಾಪನೆಗೊಳ್ಳಲಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಏರೋಸ್ಪೇಸ್ ಪಾರ್ಕ್ ಮತ್ತು ಏರೋಸ್ಪೇಸ್ ಕಾಮನ್ ಫಿನಿಷಿಂಗ್ ಫೆಸಿಲಿಟಿ ಕೇಂದ್ರವೂ ಸ್ಥಾಪನೆಗೊಳ್ಳಲಿದೆ. ಇದಕ್ಕೆ ಮಂಗಳವಾರ ಭೂಮಿ ಪೂಜೆ ನಡೆಯಿತು.
‘ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಏರೋಸ್ಪೇಸ್ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು. ಕಳೆದ ಒಂದೂವರೆ ದಶಕದಲ್ಲಿ ವೈಮಾನಿಕ ಕ್ಷೇತ್ರ ವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ. ಈ ವಿಶೇಷ ವ್ಯವಸ್ಥೆಯಿಂದ ವೈಮಾನಿಕ ಕ್ಷೇತ್ರಕ್ಕೆ ಅಗತ್ಯವಿರುವ ಉತ್ಪನ್ನಗಳು, ಬಿಡಿ ಭಾಗಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿಸಲು ಅವಕಾಶವಿದೆ’ ಎಂದು ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.
‘ ಈ ಯೋಜನೆಗೆ ಒಟ್ಟು ₹ 90.50 ಕೋಟಿ ಅನುದಾನ ಹಂಚಿಕೆ ಆಗಿದೆ. ಕೇಂದ್ರ ಸರ್ಕಾರ ₹ 42.69 ಕೋಟಿ ಮತ್ತು ರಾಜ್ಯ ಸರ್ಕಾರ ₹ 47.81 ಕೋಟಿ ಅನುದಾನ ನೀಡಿವೆ. ಇದರಿಂದ ಸಣ್ಣ, ಮಧ್ಯಮ ಮತ್ತು ಭಾರಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ಸಿಕ್ಕಂತಾಗಿದೆ. ಈ ಯೋಜನೆಯ ಜಾರಿಗೆ ತಜ್ಞರ ಸಮಿತಿಯನ್ನೂ ರಚಿಸಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.